ವೇತನ ಚೀಟಿ-ಹಾಜರಾತಿ ಕಡ್ಡಾಯ ಕೈಬಿಟ್ಟ ಕಲ್ಯಾಣ ಮಂಡಳಿ: ಕಟ್ಟಡ ಕಾರ್ಮಿಕರ ಹೋರಾಟಕ್ಕೆ ಜಯ

3 years ago

#Welfare #Board #Abandons #Wage #Slip #Attendance #Mandatory #Victory #Construction #Workers #Struggle

ಬೆಂಗಳೂರು: ರಾಜ್ಯದ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಯಾಗಿ ನವೀಕರಿಸಲು ವೇತನ ಚೀಟಿ ಹಾಗೂ ಹಾಜರಾತಿ ಕಡ್ಡಾಯ ಮಾಡಿದ್ದ ಆದೇಶವನ್ನು ಮಂಡಳಿ ಹಿಂಪಡೆದಿದ್ದು ಕಾರ್ಮಿಕರು ಸ್ವಯಂ ದೃಢೀಕರಣದ ಮೂಲಕ ನವೀಕರಣ ಮಾಡಲು ಆದೇಶ ನೀಡಿದೆ. ಈ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು) ಸ್ವಾಗತಿಸಿದ್ದು ಇದು ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ನಡೆಸಿದ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

ಕೊರೋನೋತ್ತರ ದಿನಗಳಲ್ಲಿ ಕಲ್ಯಾಣ ಮಂಡಳಿಯಲ್ಲಿ ಲಕ್ಷಾಂತರ ಜನರು ನಕಲಿ ಹೆಸರು ನೊಂದಾಯಿಸಿ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ನೈಜ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಹೊರಗುಳಿದಿದ್ದಾರೆ. ಈ ಬಗ್ಗೆ ಕ್ರಮವಹಿಸಲು ಕಟ್ಟಡ ಕಾರ್ಮಿಕ ಸಂಘಗಳು ಮೊದಲಿನಿಂದಲೂ ಆಗ್ರಹಿಸುತ್ತಾ ಬಂದಿವೆ. ನಕಲಿ ನೋಂದಣಿ ಅತಿ ಹೆಚ್ಚು ಮಾಡುತ್ತಿರುವವರ ಪೈಕಿ ಸೇವಾ ಸಿಂಧು ಹಾಗೂ ಗ್ರಾಮ ಒನ್ ಕೇಂದ್ರಗಳು ಸ್ವಯಂ ಘೋಷಿತ ಸಂಘಗಳು ಪ್ರಮುಖವಾದವು. ಈ ನೊಂದಣಿ ರದ್ದು ಮಾಡಿ ಕಾರ್ಮಿಕ ಇಲಾಖೆಯ ಹೊಸ ತಂತ್ರಾಂಶ ಬಳಸಿ ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಕಾರ್ಮಿಕ ಇಲಾಖೆಯ ಮೂಲಕ ಮಾತ್ರವೇ ನೊಂದಣಿ ಆರಂಭಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ರಾಜ್ಯ ಸಮಿತಿ(ಸಿಐಟಿಯು) ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ಅದರ ಬಗ್ಗೆ ಕ್ರಮವಹಿಸದೇ ಲಕ್ಷಾಂತರ ಸಂಖ್ಯೆಯಲ್ಲಿ ಸ್ವಯಂ ಉದ್ಯೋಗಿಗಳಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರು ಕಲ್ಯಾಣ ಮಂಡಳಿಯಲ್ಲಿ ವೇತನ ಚೀಟಿ ಹಾಗೂ ಹಾಜರಾತಿ ಚೀಟಿ ಮೂಲಕವೇ ಫಲಾನುಭವಿಯಾಗಿ ನೊಂದಣಿ ಮಾಡಬೇಕೆನ್ನುವ ಅತ್ಯಂತ ಅವಾಸ್ತವಿಕ ನೆಲೆಗಟ್ಟಿನ ಆದೇಶ ಮಾಡಲಾಗಿತ್ತು .‌ ಇದರಿಂದಾಗಿ ಸಾವಿರಾರು ನಿರ್ಮಾಣ ವಲಯದ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುವ ಅಪಾಯ ಎದುರಾಗಿತ್ತು ಎಂದಿದ್ದಾರೆ.

ಈ ಬಗ್ಗೆ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ‌ಸಮಿತಿ ನೇತೃತ್ವದಲ್ಲಿ ಕಾರ್ಮಿಕ ಸಚಿವರನ್ನು ಭೇಟಿಯಾಗಿ ಚರ್ಚಿಸಿತ್ತು ಅಲ್ಲದೆ ಮಂಡಳಿ ಮುಖ್ಯ ಸಿಇಓ ಜತೆ ನಡೆದ ಮಾತುಕತೆಯಲ್ಲೂ ಸಮಸ್ಯೆ ಗಂಭೀರತೆಯನ್ನು ಮಾನವರಿಗೆ ಮಾಡಲಾಗಿತ್ತು. ಅಲ್ಲದೆ ಆಗಸ್ಟ್ 24 ರಂದು ರಾಜ್ಯವ್ಯಾಪಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಹಾಗೂ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಆಯೋಜಿಸಿ ವೇತನ ಚೀಟಿ ಹಾಗೂ ಹಾಜರಾತಿ ಕಡ್ಡಾಯ ಆದೇಶ ಹಿಂಪಡೆಯಲು ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು ಹಾಗೂ ಅಧಿಕಾರಿಗಳು ಹಿಂದೆ ಹೊರಡಿಸಲಾದ ಆದೇಶ ವಾಪಸ್ ಪಡೆಯಲಾಗಿದೆ ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಶ್ಲಾಘಿಸಿದ್ದಾರೆ.

ಅದರ ಜತೆಯಲ್ಲೇ ರಾಜ್ಯದಲ್ಲಿ ಬಾಕಿ ಇರುವ ಶೈಕ್ಷಣಿಕ ಧನ ಸಹಾಯ ಸೇರಿ ಎಲ್ಲ‌ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು ಸೆಸ್ ಸರಿಯಾದ ಸಂಗಹಕ್ಕೆ ಕ್ರಮವಹಿಸಿ ಸೆಸ್ ವಂಚನೆ ತಡೆಗಟ್ಟಬೇಕು ಮತ್ತು ಸೆಸ್ ದುರ್ಬಳಕೆಗೆ ಕಾರಣವಾದ ಎಲ್ಲ ಖರೀದಿಗಳನ್ನು ನಿಲ್ಲಿಸಬೇಕು ಮತ್ತು ನಕಲಿ ನೋಂದಣಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುವ ಎಲ್ಲ ಸ್ವಯಂ ಘೋಷಿತ ಸಂಘಗಳು ಮತ್ತು ನೊಂದಣಿ ಕೇಂದ್ರಗಳ ವಿರುದ್ಧ ತೀವ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Reply