ಆಸ್ಥಾನ ವಿದೂಷಕರಿಗೆ ಎಚ್ಚರಿಕೆಯ ಸಂದೇಶ

2 years ago

ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಮುಖಭಂಗವಾಗಿದೆ. ಈಗಾಗಲೇ ಮಂಡ್ಯ, ಮತ್ತು ಮೈಸೂರು ಕೊಡಗು ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಎರಡು ದಿನಗಳಲ್ಲಿ ಮೈಸೂರು ಮಂಡ್ಯ, ಹಾಸನ, ಚಾಮರಾಜನಗರ ಒಳಗೊಂಡ ದಕ್ಷಿಣದ ಶಿಕ್ಷಕರ ಕ್ಷೇತ್ರದಲ್ಲಿ ಮತ್ತೆ ಸೋಲಾಗಿದೆ.

ಐದನೇ ಬಾರಿಗೆ ವಿಧಾನಪರಿಷತ್ ಗೆ ಆಯ್ಕೆ ಬಯಸಿದ್ದ ಅನುಭವಿ ಮರಿತಿಬ್ಬೇಗೌಡರು, ಬಿ.ಜೆ.ಪಿ.ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ನನ್ನೂರು ಪಕ್ಕದ ಅವ್ವೇರಹಳ್ಳಿಯ ಯುವಕ ವಿವೇಕಾನಂದನ ಎದುರು ಸೋಲು ಅನುಭವಿಸಿದ್ದಾರೆ.

ಈ ಬೆಳವಣಿಗೆ ಭವಿಷ್ಯದ ಕರ್ನಾಟಕಕ್ಕೆ ಒಳ್ಳೆಯ ಬೆಳೆವಣಿಗೆಯಲ್ಲ. ಒಕ್ಕಲಿಗರು ಬಿ.ಜೆ.ಪಿ.ಯತ್ತ ವಾಲುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. 2005ರಲ್ಲಿ ಧರ್ಮಸಿಂಗ್ ಸರ್ಕಾರವನ್ನು ಕೆಡವಿ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅಧಿಕಾರ ಹಂಚಿಕೆಯ ಸೂತ್ರದ ಆಧಾರದ ಮೇಲೆ ಸರ್ಕಾರ ರಚಿಸಿದರು. ಮೊದಲ 20 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನಂತರ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದಾಗ ಸರ್ಕಾರ ಬಿದ್ದು ಹೋಯಿತು.

ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿದೆ ಎಂದು ರಾಜ್ಯದ ಲಿಂಗಾಯತ ಸಮುದಾಯ ಬಿ.ಜೆ.ಪಿ.ಗೆ ಬೆಂಬಲ ನೀಡುವ ಮೂಲಕ ಸಂಪೂರ್ಣ ಪಕ್ಷದತ್ತ ವಾಲಿತು. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿತು. ಅಂದಿನಿಂದ ಇಂದಿನವರೆಗೆ ಲಿಂಗಾಯತರ ಮನಪರಿವರ್ತನೆ ಮಾಡಿ ಕಾಂಗ್ರೆಸ್ ನತ್ತ ಎಳೆಯಲು ಸಾಧ್ಯವಾಗಿಲ್ಲ.

ಈಗ ಒಕ್ಕಲಿಗ ಸಮುದಾಯವೂ ಅತ್ತ ಕಡೆ ಹೋದರೆ, ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಚೇತರಿಕೆ ಕಾಣುವುದು ಕಷ್ಟವಾಗಲಿದೆ. ಕೈ ತುಂಬಾ ಕಾಸು ಮತ್ತು ಆಯಕಟ್ಟಿನ ಸ್ಥಳದಲ್ಲಿ ಅಧಿಕಾರದ ಭಾಗ್ಯ ಸಿಗುತ್ತದೆ ಎಂದು ಸಿದ್ಧರಾಮಯ್ಯನವರ ಸರ್ಕಾರದ ಬಗ್ಗೆ ಭಜನೆ ಮಾಡುವುದರ ಬದಲಾಗಿ ಆಸ್ಥಾನ ವಿದೂಷಕರು ಈ ಕುರಿತು ಅವರಿಗೆ ಎಚ್ಚರಿಕೆ ನೀಡಬೇಕಾಗಿದೆ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply