ಮುಂದಿನ ಸಿಎಂ ಆಗಲು ವಿಜಯೇಂದ್ರ ಹೋರಾಟ: ಬಸನಗೌಡ ಪಾಟೀಲ್ ಯತ್ನಾಳ್

1 year ago

ಬೆಂಗಳೂರು: ಡೀಸೆಲ್ ಹಾಲು ಮಾರಾಟದ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸಿದ ಹಗಲು ರಾತ್ರಿ ಧರಣಿ ನಿಜವಾಗಿಯೂ ಜನರ ಪರವಾಗಿ ಅಲ್ಲ, ಅದು ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಲು ಮಾಡುತ್ತಿರುವ ಹೋರಾಟ ಎಂದು ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಿಎಂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ರಾಜ್ಯದ ಜನರ ಸಮಸ್ಯೆಗಳು ಬಗೆ ಹರಿಯುವುದು ಬೇಕಿಲ್ಲ. ಅಧಿಕಾರ ಹಿಡಿದು ಹಣ ಮಾಡುವುದು ಮಾತ್ರ ಉದ್ದೇಶವಾಗಿದೆ. ಅದಕ್ಕಾಗಿ ಇಂತಹ ಹೋರಾಟ ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಅಧಿಕಾರದಲ್ಲಿದ್ದಾಗ ಡಿ ನೋಟಿಫಿಕೇಶನ್ ವರ್ಗಾವಣೆ ಮತ್ತು ಕರೋನಾ ಹೆಸರಿನಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ಮಾಡಿ ದುಡ್ಡು ಮಾಡಿದ್ದಾರೆ. ಈ ಮುಂದೆಯೂ ದುಡ್ಡು ಮಾಡಬೇಕು ಎಂಬ ಉದ್ದೇಶದಿಂದ ಯಡಿಯೂರಪ್ಪ ಈ ವಯಸ್ಸಿನಲ್ಲಿ ಹೋರಾಟಕ್ಕೆ ಬಂದಿದ್ದಾರೆ ಎಂದರು.

ತಮ್ಮನ್ನು ಪಕ್ಷದಿಂದ ಹೊರ ಹಾಕದೆ ಹೋದರೆ ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಅಮಿತ್ ಶಾ ಅವರಲ್ಲಿ ಹೇಳಿ ಬ್ಲಾಕ್ ಮೇಲ್  ಮಾಡುವ ಮೂಲಕ ಯಡಿಯೂರಪ್ಪ ಅವರು ತಮ್ಮನ್ನು ಪಕ್ಷದಿಂದ ಹೊರ ಹಾಕಿಸಿದ್ದಾರೆ. ಹೈಕಮಾಂಡ್ ಇದಕ್ಕೆ ಮಣಿದಿದೆ ಎಂದರು.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರಿಂದಾಗಿ ವ್ಯಾಪಕ ಪ್ರಮಾಣದ ಭ್ರಷ್ಟಾಚಾರ ನೆಲೆಸುವಂತಾಗಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಕಳಂಕ ಬರುವಂತಾಗಿದೆ. ಇದರ ವಿರುದ್ಧ ಹೋರಾಟ ಮಾಡಿದ ತಮ್ಮನ್ನು ಪಕ್ಷದಿಂದ ಹೊರ ಹಾಕಲು ಪಿತೂರಿ ಮಾಡಲಾಯಿತು ಎಂದರು.

ಬಿಜೆಪಿಯಿಂದ ಹೊರಬಂದಿರುವ ತಾವು ಹೊಸ ಪಕ್ಷ ರಚನೆಯ ಕುರಿತಂತೆ ಕಾರ್ಯಕರ್ತರು ಮತ್ತು ಬೆಂಬಲಿಗರ ಅಭಿಪ್ರಾಯ ಕೋರುತ್ತೇನೆ. ಅದಕ್ಕೂ ಮೊದಲು ಬಿಜೆಪಿಯನ್ನು ಯಡಿಯೂರಪ್ಪ ಮತ್ತು ಅವರ ಕುಟುಂಬದ ಹಿಡಿತದಿಂದ ಮುಕ್ತಗೊಳಿಸಲು ಹೋರಾಟ ಮಾಡುತ್ತೇನೆ. ಯಡಿಯೂರಪ್ಪ ಮತ್ತು ಅವರ ಕುಟುಂಬ ಬಿಜೆಪಿಯಿಂದ ಹೊರಬಂದಲ್ಲಿ ತಾವು ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದರು.

Leave a Reply