ರಾಜಪ್ಪ ದಳವಾಯಿಯವರ ವ್ಯಾಪ್ತಿ ಪ್ರದೇಶದ ಹೊರಗೆ ಇರುವವರು ಇರಲಾರರು

2 years ago

ಆತ್ಮೀಯ ಡಾ. ಡಜನ್ ದಳವಾಯಿಯವರು ನಿನ್ನೆ (ದಿನಾಂಕ: ೩೦-೦೩-೨೦೨೪, ಶನಿವಾರ) ‘ನಿವೃತ್ತಿ’ಯಾದರಂತೆ. ಅವರಿಗೆ ಒಳ್ಳೆಯದಾಗಲಿ.

ಇವತ್ತು ಗೆಳೆಯರೆಲ್ಲ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಸೇರಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಮೊನ್ನೆ ತಾನೇ
ನಮ್ಮ ಡಜನ್ ಬಗ್ಗೆ
‘ಅಲೆದವರು
ಅಲೆದವರು
ಅಲೆದಲೆದಲೆದಲೆದು
ಅಲೆಗಳಿಗೆ
ಅಲೆಯುವುದ
ಕಲಿಸಿದವರು . . .. . .
. . . . . .
ಎಂಬ ಹಾಡು ಕಟ್ಟಿ
ಡಜನ್ ಅವರಿಗೆ ಕಾಲ್ ಮಾಡಿ
ಹಾಡಿದೆ.
ಇವತ್ತು ನಾನು ಅಲ್ಲಿರಬೇಕಿತ್ತು. ಎಲ್ಲರೊಂದಿಗೆ ಕೂಡಿ ಈ ಹಾಡನ್ನು ಹಾಡಬೇಕಿತ್ತು.
ಆದರೆ ನನ್ನ ವೈಯಕ್ತಿಕ ಕೆಲಸದ ಒತ್ತಡದಿಂದ ಸಾಧ್ಯವಾಗಲಿಲ್ಲ.

ಡಾ. ರಾಜಪ್ಪ ದಳವಾಯಿಯವರನ್ನು ಕುರಿತ ಪುಸ್ತಕಕ್ಕೆ ನಾನು ಬರೆದಿರುವ ಮುನ್ನುಡಿ.

ಡಾ. ರಾಜಪ್ಪ ದಳವಾಯಿ ಅವರು ನಮ್ಮ ಗೆಳೆಯರ ಬಳಗದಲ್ಲಿ `ಡಜನ್ ದಳವಾಯಿ’ ಎಂದೇ ಹೆಸರುವಾಸಿ. ಡಜನ್ ಪುಸ್ತಕಗಳನ್ನು ೨ ಕಂತುಗಳಲ್ಲಿ ಪ್ರಕಟಿಸಿದ ಕೀರ್ತಿ ಕನ್ನಡದಲ್ಲಿ ಇವರೊಬ್ಬರಿಗೆ ಮಾತ್ರ ಸಲ್ಲುತ್ತದೆ; ಜೊತೆಗೆ ಈ ಸಾಹಸವನ್ನು ಇವರು ಮಾತ್ರ ಮಾಡಬಲ್ಲರು. ಇವರ ಈ ಶಕ್ತಿ ಸಾಮರ್ಥ್ಯ ಮತ್ತು ಸಾಹಸದ ಎಳೆಯನ್ನು ಹಿಡಿದು ವಿಸ್ತರಿಸಿದರೆ, ಇವರ ಪ್ರತಿಭೆಗೆ ಡಜನ್ ಗಟ್ಟಲೆ ಮುಖಗಳಿವೆ. ಇವರಿಗೆ ಡಜನ್ ಗಟ್ಟಲೆ ಸ್ನೇಹಿತರಿದ್ದಾರೆ, ಶಿಷ್ಯರಿದ್ದಾರೆ, ಪರಿಚಿತರಿದ್ದಾರೆ. ರಾಜ್ಯದ ಯಾವ ಜಿಲ್ಲೆಯೂ ವಂಚಿತವಾಗದಂತೆ, ಜಿಲ್ಲೆಯ ಯಾವ ಸಮುದಾಯವೂ ವಂಚಿತವಾಗದಂತೆ ಇವರಿಗೆ ಶಿಷ್ಯರು ಮತ್ತು ಸ್ನೇಹಿತರಿದ್ದಾರೆ. ಈ ವಿಷಯದಲ್ಲಿ ಇವರಿಗೆ ವ್ಯಾಪ್ತಿ ಪ್ರದೇಶದ ಹೊರಗೆ ಇರುವವರು ಇರಲಾರರು. ವ್ಯಾಪ್ತಿ ಪ್ರದೇಶದ ಒಳಗಿನವರೇ ಜಾಸ್ತಿ.

ಮಾತು ಬಂದುದಕ್ಕೆ ಹೇಳಬೇಕಾಗುತ್ತದೆ. ಕೆಲವು ವರ್ಷಗಳ ಹಿಂದಿನ ಮಾತು. ತುಮಕೂರಿನ ಸಾಹಿತಿ ಶ್ರೀ ಸೋ.ಮು. ಭಾಸ್ಕರಾಚಾರ್ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದೆ. ಅಲ್ಲಿಗೆ ದಳವಾಯಿಯವರೂ ಬಂದಿದ್ದರು. ಒಂದು ಸಂಜೆ ಶೆಟ್ಟಿಹಳ್ಳಿ ಗೇಟ್ ಹತ್ತಿರ ನನ್ನ ಸ್ನೇಹಿತೆ ವಿಜಯಲಕ್ಷ್ಮಿಯವರ ಮನೆ ಇತ್ತು. ಅವರ ತಂದೆ ಮೇಷ್ಟ್ರು. ಅಲ್ಲಿಗೆ ಹೋಗಿಬರಲು ಹೊರಟೆ, ದಳವಾಯಿ ಅವರು ನಾನೂ ಬರ್ತೀನಿ ಎಂದರು. ಬನ್ನಿ ಎಂದೆ. ಇಬ್ಬರೂ ಅವರ ಮನೆಗೆ ನಮ್ಮ ಕಾರಲ್ಲಿ ಹೋದೆವು. ಅವರ ಮನೆಗೆ ಕಾಲು ಇಟ್ಟಿದ್ದೇ ತಡ; ಇವರು `ಏನು ಮೇಷ್ಟ್ರೇ ಚೆನ್ನಾಗಿದ್ದೀರಾ?” ಎಂದರು. ಅವರು “ಚೆನ್ನಾಗಿದ್ದೀನಿ ಬನ್ನಿ ಸರ್” ಎಂದರು. ನಾನು ಮೊದಲು ಅಂದುಕೊಂಡಿದ್ದು, ದಳವಾಯಿಯವರಿಗೆ ಆ ಮೇಷ್ಟ್ರು ಪರಿಚಯ ಇರಲ್ಲ ಅಂತ. ಅಲ್ಲಿ ನೋಡಿದರೆ ಇವರು ಅವರಿಗೆ ಬಹಳ ಹಳಬರಂತೆ.

ಮಾತು ಬಂದುದಕ್ಕೆ ಹೇಳಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ಕಮಲಾಪುರದ ಅಶೋಕಾ ಹೋಟೆಲಿಗೆ ಊಟ ಮಾಡಲು ಹೋದೆವು. ಹೋಟೆಲಿನ ಮಾಲೀಕ ಅಶೋಕ ಇವರನ್ನು ನೋಡಿ ಬನ್ನಿ ಸರ್' ಎಂದರು. ಇವರುಏನ್ರಿ ಅಶೋಕ್ ಚೆನ್ನಾಗಿದ್ದೀರಾ?’ ಎಂದರು ಅಶೋಕ್ ಊಟಕ್ಕೆ ಆರ್ಡರ್ ತಗೊಳ್ಳುವಾಗ ಬೇಜಾ ಕೊಡ್ಲಾ ಸರ್' ಎಂದರು. ಇವರುಬೇಕು ಕೊಡ್ರಿ’ ಎಂದರು. ಈ ವಿಷಯದಲ್ಲಿ ಇವರು ಬಹಳ ಹಳಬರು ಎಂಬುದು ಗ್ಯಾರಂಟಿ ಆಯ್ತು.

ಇವರ ಪರಿಚಿತರ, ಸ್ನೇಹಿತರ ವ್ಯಾಪ್ತಿ ಎಷ್ಟು ದೊಡ್ಡದು ಎನ್ನುವುದಕ್ಕೆ ಇಂತಹ ಹತ್ತಾರು ಪ್ರಸಂಗಗಳನ್ನು ವಿವರಿಸಬಹುದು. ಇವರಿಗೆ ಅಭಿನಂದನಾ ಗ್ರಂಥ ತರುವುದಾದರೆ `ಜಿಲ್ಲಾವಾರು ಸಂಪುಟ’ಗಳನ್ನು ತರಬೇಕಾಗುತ್ತದೆ ಎಂದು ನಾನು ಕೆಲವು ಸಲ ಹೇಳುತ್ತಿದ್ದೆ. ಒಂದೇ ಗ್ರಂಥ/ಪುಸ್ತಕ ತಂದರೆ ಅದರಲ್ಲಿ ಎಲ್ಲರನ್ನೂ ಒಳಗೊಳ್ಳಲು ಆಗುವುದಿಲ್ಲ.

ಆರಂಭದಲ್ಲಿ `ಡಜನ್ ಗಟ್ಟಲೆ’ ಎಂಬ ಮಾತು ಬಂತು. ಇದು ಇವರ ಸ್ನೇಹಿತರು, ಶಿಷ್ಯರ ಪ್ರಮಾಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇವರ ಆಸಕ್ತಿಯ ಕ್ಷೇತ್ರಗಳು, ಇವರ ಪ್ರವೇಶದ ವಲಯಗಳು, ಓದಿರುವ ವಿಷಯಗಳು, ಪಾಠ ಮಾಡಿರುವ ವಿಷಯಗಳು, ವಾಸ ಮಾಡಿರುವ ಊರುಗಳು ಹೀಗೆ ಈ ಪಟ್ಟಿ ಇನ್ನೂ ಬೆಳೆಯುತ್ತದೆ.

ನಾನು ಒಂದು ಸಲ ಇವರ ಜೊತೆ ಮಾತಾಡ್ತಾ ಹೇಳಿದೆ, “ನನಗೆ ಎರಡುಮೂರು ದಿನ ನಿರಂತರವಾಗಿ ಹೋಟೆಲಿನಲ್ಲಿ ಊಟ ಮಾಡಿದರೆ ಹೊಟ್ಟೆ ನೋವು ಬರುತ್ತೆ” ಅಂತ. ತಕ್ಷಣ ದಳವಾಯಿ ಅವರು ಹೇಳಿದರು, “ನನಗೂ ಅಷ್ಟೆ; ಎರಡುಮೂರು ದಿನ ನಿರಂತರವಾಗಿ ಮನೆಯ ಊಟ ಮಾಡಿದರೆ ಹೊಟ್ಟೆನೋವು ಬರುತ್ತೆ” ಅಂತ.

ನಿರಂತರವಾಗಿ ಪ್ರಯಾಣ ಮಾಡುವವರನ್ನು ಕುರಿತು `ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡ್ತಾರೆ’ ಅಂತ ಹೇಳುವುದಿದೆ. ದಳವಾಯಿಯವರಿಗೂ ಈ ಮಾತನ್ನು ಹೇಳಬಹುದು ಅಥವಾ ಕೆಲವರು ಹೀಗೆಂದು ಹೇಳಿರಲೂಬಹುದು. ಆದರೆ ಇವರಿಗೆ ಸಂಬಂಧಿಸಿ ಮೇಲಿನ ಸಾಲಿನಲ್ಲಿರುವ ಕ್ರಿಯಾಪದವನ್ನು ತೆಗೆಯಬೇಕಾಗುತ್ತದೆ. ಅದನ್ನು ತೆಗೆದು ಪರಿಷ್ಕರಿಸಿ, ಇವರ ಕಾಲುಗಳೇ ಚಕ್ರ ಎಂದೂ ತಿದ್ದುಪಡಿ ಮಾಡಿದರೆ ಇವರಿಗೆ ಸರಿಯಾಗಿ ಒಪ್ಪಬಹುದು.

ಇರಲಿ; ಇದುವರೆಗಿನ ಮಾತುಗಳು ಇವರನ್ನು ಕುರಿತು ನನ್ನ ದಿಕ್ಕಿನ ಮಾತುಗಳಾದವು.

ನಿರ್ದಿಷ್ಟವಾಗಿ ಈ ಪುಸ್ತಕದ ಬಗೆಗೆ ಬರೆಯಬೇಕಾಗಿದೆ. ಈ ಪುಸ್ತಕದ ತಯಾರಿಯ ಬಗೆಗೆ ನನಗೆ ಬೇರೆ ಮೂಲಗಳಿಂದ ತಿಳಿದುಬಂದಿತ್ತು. ಹಾಗಿದ್ದರೆ ಆ ಪುಸ್ತಕದಲ್ಲಿ ನನ್ನನ್ನು ಯಾಕೆ ವ್ಯಾಪ್ತಿ ಪ್ರದೇಶದಿಂದ ಹೊರಗಿಟ್ಟರು?' ಎಂಬ ಒಂದು ತೆಳುವಾದ ಅಸಮಾಧಾನ ನನ್ನಲ್ಲಿ ತನಗೆ ತಾನೇ ಮೂಡಿ; ತನ್ನಷ್ಟಕ್ಕೆ ತಾನೇ ಬಾಡಿ ಹೋಗಿತ್ತು ಎನ್ನಿ; ಇರಲಿ. ಏನೇ ಇದ್ದರೂ/ಆದರೂಋಣಾನುಬಂಧ’ ಅನ್ನುತ್ತಾರಲ್ಲ ಹಾಗೆ ಇದರ ಬಗೆಗೆ ಇಡಿಯಾಗಿ ಕೆಲವು ಮಾತುಗಳನ್ನು ಬರೆಯುವ ಅವಕಾಶ ನನಗೆ ಬಂದುದು ಬಹಳ ಸಂತೋಷದ ವಿಷಯ. ಇದಕ್ಕಾಗಿ ಮೊದಲಿಗೆ ಸಂಪಾದಕರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ಈ ಪುಸ್ತಕದಲ್ಲಿ ಸಂಕಲನಗೊಂಡಿರುವ ಲೇಖನಗಳು, ಅವುಗಳ ತಿರುಳು ನನಗೆ ಎರಡು ಮೂರು ರೀತಿಯಲ್ಲಿ ಕಾಣುತ್ತಿದೆ. ಒಂದು: ಬರೆದವರು ರಾಜಪ್ಪ ದಳವಾಯಿಯವರ ಬಗೆಗೆ ಏನು ಬರೆದಿದ್ದಾರೆ: ಹೇಗೆ ಎಂಬುದು ಇವುಗಳ ಒಂದು ಮುಖ.

ಎರಡು: ಈ ಲೇಖನಗಳಲ್ಲಿ ದಳವಾಯಿಯವರ ಬಗ್ಗೆ ಬರೆಯುತ್ತಾ, ತಮ್ಮ ಹಿನ್ನೆಲೆಗಳು, ತಾವು ಎದುರಿಸಿದ ಸಮಸ್ಯೆ, ಸಂಕಟಗಳನ್ನು ಬರೆದುಕೊಂಡಿದ್ದಾರೆ. ಇದು ಎರಡನೆಯದು; ಆದರೆ ಮೊದಲಿನದರಷ್ಟೇ ಈ ಮುಖವೂ ಕೂಡ ಬಹಳ ಮುಖ್ಯವಾದುದು ಎಂದು ನನ್ನ ಕಣ್ಣೋಟ ಹೇಳುತ್ತಿದೆ.

ಮೂರು: ರಾಜಪ್ಪ ದಳವಾಯಿ ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡಿರುವ ಕ್ರಮದ ಸ್ವರೂಪವನ್ನು ಕುರಿತಾದುದು. ಇದು ಒಂದು ಮತ್ತು ಎರಡನೇಯದು ಏನಿದೆ ಅದರಷ್ಟೇ ಮುಖ್ಯವಾದುದು ಎಂದು ಭಾವಿಸಿದ್ದೇನೆ.

ರಾಜಪ್ಪ ದಳವಾಯಿಯವರನ್ನು ಕುರಿತು ಬರೆಯುವಾಗ ಎಲ್ಲರೂ ಏಕಕಂಠದಿಂದ ಪ್ರಸ್ತಾಪ ಮಾಡಿರುವುದು ಇವರು ಶ್ರಮವಹಿಸಿ ಮುತುವರ್ಜಿ ವಹಿಸಿ ರಚನೆ ಮಾಡಿರುವ ಸಾಹಿತ್ಯ ಕೋಶವನ್ನು ಕುರಿತಾದುದು. ಅದನ್ನು ಬಿಟ್ಟರೆ ಬೇರೆ ಬೇರೆ ಹಂತಗಳಲ್ಲಿ ಓದಲು ಸರಿಯಾದ ಮಾರ್ಗದರ್ಶನ, ಸೂಚನೆ ಸಲಹೆ ಕೊಟ್ಟಿರುವುದು. ಈ ಎರಡನ್ನು ಮತ್ತೆ ತಿಕ್ಕಿ ತೀಡಿ ಮೇಲೆ ಕೆಳಗೆ ಮಾಡಿ ವಿಮರ್ಶೆ ಮಾಡುವ ಅಗತ್ಯವಿಲ್ಲ. ಇವನ್ನು ಯಾವ ತಕ್ಕಡಿಯಲ್ಲಿ ತೂಗಿದರೂ ಬಟ್ಟು ಇಟ್ಟಿರುವ ತಕ್ಕಡಿಯೇ ಸಲೀಸಾಗಿ ಮೇಲೆ ಹೋಗುತ್ತದೆಯೇ ಹೊರತು ಅದು ಕೆಳಕ್ಕಂತೂ ಬರುವುದಿಲ್ಲ.

ಇನ್ನು ಇದರ ಜೊತೆಯಲ್ಲೇ ಸೇರಿಸಿ ವಿಸ್ತರಿಸಬಹುದಾದ ಮತ್ತೊಂದು ಮುಖ್ಯ ಸಂಗತಿ; ಇವರು ಇವರ ವಯಸ್ಸಿನವರನ್ನು, ಇವರಿಗಿಂತ ಹಿರಿಯರನ್ನು ಮತ್ತು ತಮ್ಮ ದೊಡ್ಡ ಪ್ರಮಾಣದ ಶಿಷ್ಯ ಬಳಗವನ್ನು ಪ್ರೋತ್ಸಾಹಿಸಿ, ಪುಸಲಾಯಿಸಿ, ಮನವೊಲಿಸಿ…. ಪಿಎಚ್.ಡಿ., ಮಾಡಿಸಿದ್ದು. ಇದಕ್ಕೆ ನಾಡಿನಾದ್ಯಂತ ಬಹಳ ದೊಡ್ಡ ಪಟ್ಟಿಯೇ ಇದೆ. ತುಮಕೂರಿನ ಸಾಹಿತಿ ಶ್ರೀ ಸೋ.ಮು. ಭಾಸ್ಕರಾಚಾರ್, ಅವರನ್ನು ನಮ್ಮ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗಕ್ಕೆ ಪಿಎಚ್.ಡಿ., ಮಾಡಲು ಕಳಿಸಿದರು. ಜೊತೆಗೆ ಅವರಿಗೆ ನಾನು ಮಾರ್ಗದರ್ಶಕ ಆಗುವಂತೆ ಕೇಳಿಕೊಂಡರು. ಹೌದು, ಶ್ರೀ ಸೋ.ಮು. ಭಾಸ್ಕರಾಚಾರ್ ಅವರು ನನ್ನ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಮಾಡಿ ಡಾ. ಸೋ.ಮು. ಭಾಸ್ಕರಾಚಾರ್ ಆದರು.

ಕನಿಷ್ಠ ೩೦-೩೫ ಜನರಿಗೆ ಇದೇ ರೀತಿಯಲ್ಲಿ ಪ್ರೋತ್ಸಾಹಿಸಿ, ಬೆಂಬಲಿಸಿ, ಬೆನ್ನು ಹತ್ತಿ ಪಿಎಚ್.ಡಿ. ಮಾಡಿಸಿದ್ದಾರೆ. ಇಂತಹ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿ ಎಂದು ಹೇಳುವುದು, ಇಂತಹ ಮಾರ್ಗದರ್ಶಕರಲ್ಲಿ ಪಿಎಚ್.ಡಿ. ಸೀಟು ಖಾಲಿ ಇದ್ದರೆ ಅವರನ್ನೂ ಕೇಳಿಕೊಂಡು ಪ್ರಕ್ರಿಯೆಗೆ ಸರಿಯಾದ ರೀತಿಯಲ್ಲಿ ಚಾಲನೆ ಕೊಡುವುದು ಇವರ ಸ್ವಭಾವ. ಸುಮ್ಮನೆ ಹೋಗ್ರಿ ಪಿಎಚ್.ಡಿ. ಮಾಡ್ರಿ' ಅಂತ ಹೇಳುವುದು ಇವರ ಜಾಯಮಾನವಲ್ಲ. ೩೦-೩೫ ಜನರನ್ನು ಹುರಿದುಂಬಿಸಿ ಪಿಎಚ್.ಡಿ. ಮಾಡಿಸಿದರೂ, ಆ ಟೈಮಲ್ಲಿ ಇವರದೇ ಪಿಎಚ್.ಡಿ. ಆಗಿರಲಿಲ್ಲ. ತುಮಕೂರು ಪಿ.ಜಿ. ಸೆಂಟರಿನಲ್ಲಿ ಇವರೇ ಪಾಠ ಮಾಡಿದ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾಡಿಸಿದರು. ತಮ್ಮ ಶಿಷ್ಯರು ಪಿಎಚ್.ಡಿ. ಪಡೆದುದನ್ನು ಕಂಡು ಮನಸಾರೆ, ಹೃದಯತುಂಬಿ ಸಂತೋಷಪಟ್ಟರು; ಖುಷಿಪಟ್ಟರು.ಮುಂದೆ ಓದುವುದನ್ನು ನಿಲ್ಲಿಸಬೇಡಿ’ ಎಂದು ಬೆನ್ನು ತಟ್ಟಿದರು. ಶಿಷ್ಯರ ಶೈಕ್ಷಣಿಕ ಏಳಿಗೆಯನ್ನು ಕಂಡು ಕರುಬುವ ಸಮಾಜದಲ್ಲಿ ಇವರಿಗೆ ಯಾವ ‘ದೇವರು’ (ಅಭ್ಯಾಸ ಬಲದಿಂದ ಬಂದುದು) ಇಂತಹ ಕರುಳು ಮತ್ತು ಹೃದಯ ಕೊಟ್ಟ ಅಂತ ಅನಿಸುತ್ತದೆ. ಈ ಮಾತನ್ನು ಸ್ವಲ್ಪ ಮುಂದುವರಿಸುವುದಾದರೆ, ಈ ಕೆಲಸವನ್ನು ಇವರು ಬುದ್ಧಿಯ ಬಲದಿಂದ ಮಾಡಿದ್ದಾರೆ ಅನಿಸುವುದಿಲ್ಲ. ಇದನ್ನು ಇವರು ಹೃದಯ ಮತ್ತು ಕರುಳಿನ ಬಲದಿಂದ ಮಾಡಿದ್ದಾರೆ ಅನಿಸುತ್ತದೆ. ಇವರ ಈ ಕರುಳಿನ ಹಿತಾಸಕ್ತಿಗೆ ಅಸಮಾನತೆಯ ಸಾಮಾಜಿಕ ನೆಲೆಯಲ್ಲಿ ತಾತ್ವಿಕವಾದ ಬೇರೆ ಪ್ರಭಾವಗಳು ಅತ್ಯಂತ ಆಳವಾಗಿ ಕೆಲಸ ಮಾಡಿವೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶಿಕ್ಷಣ ಪಡೆಯುವುದನ್ನು ಪ್ರಜೆಗಳ ಹಕ್ಕನ್ನಾಗಿಯೂ, ೧೪ ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯವನ್ನಾಗಿಯೂ ಸೇರಿಸಿದ್ದಾರೆ. ದಲಿತರು, ಗ್ರಾಮಾಂತರ ಪ್ರದೇಶದವರು, ಹಿಂದುಳಿದ ವರ್ಗದವರು ಮತ್ತು ಮಹಿಳೆಯರು ಸಂವಿಧಾನದ ಈ ಹಕ್ಕು ಮತ್ತು ಕರ್ತವ್ಯದ ಸೌಲಭ್ಯವನ್ನು ಪಡೆದಿದ್ದಾರೆ. ಆದರೆ ಸಂವಿಧಾನದ ಈ ಅನುಚ್ಛೇದವನ್ನು ವ್ಯಂಗ್ಯ ಮಾಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿರುವ ಕರಾಳ ವಾಸ್ತವ ನಮ್ಮ ಮುಂದಿದೆ. ಮುಂದುವರೆದು ಸ್ವತಃ ಸರ್ಕಾರಗಳೇ ನೇರವಾಗಿ ಶಿಕ್ಷಣವನ್ನು ಖಾಸಗೀಕರಣ ಮಾಡುತ್ತಿವೆ. ಈ ಎಲ್ಲವನ್ನೂ ಇಂದಿನ ತಲೆಮಾರು ಎದುರಿಸಿ ಮುನ್ನುಗ್ಗುವ ಅನಿವಾರ್ಯತೆ ಇದೆ.

ಡಾ. ಬಾಬಾ ಸಾಹೇಬರ ಹಾಗೆಯೇ ಶಾಹೂ ಮಹಾರಾಜ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ ಇವರ ಶೈಕ್ಷಣಿಕ ಕೊಡುಗೆಯ ಮಹತ್ವ ಮತ್ತು ಅದರ ಪರಿಣಾಮ ಪರಿಚಿತ ವಿಷಯವೇ ಆಗಿದೆ. ಈ ಅಂಶದ ಮಾತು ಬಂದಾಗ ತಕ್ಷಣ ನೆನಪಾಗುವುದು ಕುದ್ಮುಲ್ ರಂಗರಾವ್ ಹೆಸರು. ಇವರು, ಆಗ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಈಗ ಕೇರಳದ ಕಾಸರಗೋಡಿಗೆ ಸೇರಿರುವ ಕುದ್ಮುಲ್ ಎಂಬ ಪುಟ್ಟ ಹಳ್ಳಿಯಲ್ಲಿ, ೨೯.೦೬.೧೮೫೯ ರಂದು ಜನಿಸಿದರು. ಇವರು ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಬಡತನದಿಂದಲೇ ಖಾಸಗಿಯಾಗಿ ಮೆಟ್ರಿಕ್ಯುಲೇಶನ್ ಮುಗಿಸಿ ಶಿಕ್ಷಕರಾದರು. ಅದನ್ನು ಬಿಟ್ಟು ಮಂಗಳೂರಿನ ಜಿಲ್ಲಾ ಕೋರ್ಟಿನಲ್ಲಿ ಲಾಯರ್ ಕೆಲಸ ಮಾಡಿದರು. ೧೮೯೨ರಲ್ಲಿ ಮಂಗಳೂರಿನ ಉರ್ವ ಚಿಲಿಂಬಿಯಲ್ಲಿ ಒಂದು ಹುಲ್ಲಿನ ಗುಡಿಸಲನ್ನು ಬಾಡಿಗೆಗೆ ತೆಗೆದುಕೊಂಡು ಪ್ರಾಥಮಿಕ ಶಾಲೆಯನ್ನು ಶುರು ಮಾಡಿದರು. ಅಸ್ಪೃಶ್ಯ ಮಕ್ಕಳಿಗೆ ಶಿಕ್ಷಣ ಕೊಡುವ ಉದ್ದೇಶದಿಂದಲೇ ಈ ಶಾಲೆ ತೆರೆದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ರೆಸಿಡೆನ್ಶಿಯಲ್ ಶಾಲೆಗಳನ್ನು ತೆರೆದರು. ಈ ಶಾಲೆಗಳಿಗೆ ಪಂಚಮ ಶಾಲೆಗಳು' ಎಂದು ಹೆಸರಿಟ್ಟರು. ೧೮೯೯ರಲ್ಲಿ ಮಂಗಳೂರಿನ ಶೇಡಿಗುಡ್ಡೆಯಲ್ಲಿ ವಿದ್ಯಾರ್ಥಿನಿ ನಿಲಯವನ್ನು ತೆರೆದರು. ಅಸ್ಪೃಶ್ಯರ ಏಳಿಗೆಗಾಗಿ ಮಾಡಿದ ಎಲ್ಲಾ ಕೆಲಸಗಳನ್ನು ವಿವರಿಸಲು ಇಲ್ಲಿ ಸ್ಥಳಾವಕಾಶ ಇಲ್ಲ. ಇವರ ಈ ಕೆಲಸಗಳನ್ನು ನೋಡಿ, ಸಂಪ್ರದಾಯಸ್ಥ ಬ್ರಾಹ್ಮಣರು ಇವರಿಗೆ ಕೊಡಬಾರದ ಕಿರುಕುಳ ಕೊಟ್ಟರು. ಆದರೂ ಇವರು ಎದೆಗುಂದದೆ ಮುನ್ನುಗ್ಗಿದರು. ಇವರ ದೊಡ್ಡ ಕನಸು ಹೀಗಿದೆ.ನಾನು ಬದುಕಿರುವಾಗಲೇ ಅಸ್ಪೃಶ್ಯ ಸಮುದಾಯದ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆದು, ಉನ್ನತ ಹುದ್ದೆಗೇರಿ ವಾಹನದಲ್ಲಿ ಹೋಗಬೇಕು, ಅಲ್ಲಿ ಎದ್ದ ಧೂಳು ನನ್ನ ಹಣೆಗೆ ತಾಕಬೇಕು. ಆಗ ಮಾತ್ರ ನನ್ನ ಬದುಕು, ನನ್ನ ಜೀವನ, ನನ್ನ ಕೆಲಸಗಳು ಸಾರ್ಥಕವಾಗುತ್ತವೆ’. ಇಂತಹ ಕನಸನ್ನು ಅಸ್ಪೃಶ್ಯರಲ್ಲದ ಕುದ್ಮುಲ್ ಅವರು ಕಂಡಿರುವುದು ಮಹತ್ವದ ಸಂಗತಿ.

ಕುದ್ಮುಲ್ ರಂಗರಾವ್ ಅವರು ಸಾಯುವ ಮುನ್ನ ಉಯಿಲು, ವಿಲ್ ಬರೆದಿಟ್ಟಿದ್ದರು. ಅದು ಈ ಮುಂದಿನಂತಿದೆ. ನನ್ನ ಕಳೇಬರವನ್ನು ಅಸ್ಪೃಶ್ಯ ಜಾತಿಗಳಲ್ಲಿಯೇ ಅತ್ಯಂತ ಹಿಂದುಳಿದ ಸಮುದಾಯವಾದತೋಟಿ’ ಬಂಧುಗಳು ಸ್ಮಶಾನಕ್ಕೆ ಹೊತ್ತುಕೊಂಡು ಹೋಗಬೇಕು. ಅವರಿಂದಲೇ ನನ್ನ ಶವಸಂಸ್ಕಾರ ಆಗಬೇಕು. ಏಕೆಂದರೆ ನನ್ನ ಜೀವಿತ ಕಾಲದಲ್ಲಿ ಈ ಸಮುದಾಯಕ್ಕೆ ಹೇಳಿಕೊಳ್ಳುವಂತಹದೇನನ್ನೂ ಮಾಡಲಾಗಲಿಲ್ಲ. ಹಾಗಾಗಿ ಕೊನೆಗೆ ಅವರ ಸ್ಪರ್ಶದಿಂದಲಾದರೂ ನನ್ನ ಆತ್ಮಕ್ಕೆ ಚಿರಶಾಂತಿ ದೊರಕಲಿ.’ಅಸ್ಪೃಶ್ಯ’ರಲ್ಲದವರಿಂದ ಇಂತಹ ಒಂದು ಸಂಕಲ್ಪ ಬರಲು ಸಾಧ್ಯವೇ?

ಇದನ್ನು ಈ ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪ ಮಾಡುವ ಅಗತ್ಯವೇನಿದೆ ಎಂದು ಯಾರಿಗಾದರೂ ಅನಿಸಬಹುದು. ಹೌದು, ಇದಕ್ಕೆ ಅತ್ಯಂತ ಬಲವಾದ ಕಾರಣವಿದೆ. ೧೨ನೇ ಶತಮಾನದ ಕನ್ನಡ ನಾಡಿನ ಬಸವಣ್ಣ ಬ್ರಾಹ್ಮಣ ಕುಲದ ಹೆಣ್ಣು ಮತ್ತು ಅಸ್ಪೃಶ್ಯ ಕುಲದ ಗಂಡು ಇವರ ಮದುವೆ ಮಾಡಿಸಿದ. ಜಾತಿ ಶ್ರೇಣೀಕರಣದ ಅಪಮಾನದ ಕ್ರೂರ ಸಮಾಜದಲ್ಲಿ ಇದು ಬಹಳ ದೊಡ್ಡ ಕ್ರಾಂತಿ. ಈ ಕಾರಣಕ್ಕೆ ಬಸವಣ್ಣನ ಸಾಧನೆ ದೊಡ್ಡದು. ವಚನ ಚಳುವಳಿಯ ಭಾಗವಾಗಿ ಬಸವಣ್ಣ ನಡೆಸಿದ ಕ್ರಾಂತಿ ಚಿರಪರಿಚಿತ ಸಂಗತಿ. ಆದರೆ ಇದೇ ಮಾದರಿಯಲ್ಲಿ ಕುದ್ಮುಲ್ ರಂಗರಾವ್ ಅವರ ಶ್ರಮ, ಸಾಧನೆ, ತ್ಯಾಗ ಅಷ್ಟಾಗಿ ಪರಿಚಯ ಇಲ್ಲ. ಮಂಗಳೂರಿನಲ್ಲಿ ಕುದ್ಮುಲ್ ರಂಗರಾವ್ ರಂಗರಾವ್ ಅವರ ಸ್ಮಾರಕ ಇದೆ.

ರಾಜಪ್ಪ ದಳವಾಯಿ ಅವರು ಯಾವುದೇ ಕೆಲಸದ ನಿಮಿತ್ತ ಮಂಗಳೂರಿಗೆ ಹೋದರೆ; ಆ ನಿಗದಿತ ಕೆಲಸವನ್ನು ಅಟೆಂಡ್ ಮಾಡುವುದು ಒಂದು ಭಾಗವಾದರೆ, ಕುದ್ಮುಲ್ ರಂಗರಾವ್ ಅವರ ಸ್ಮಾರಕಕ್ಕೆ ಭೇಟಿ ಕೊಡುವುದು ಮತ್ತೊಂದು ಮುಖ್ಯ ಭಾಗ. ಈ ಅಂಶವನ್ನು ನಾನು ಅತ್ಯಂತ ಬಲವಾಗಿ ಒತ್ತಿ ಹೇಳುತ್ತಿದ್ದೇನೆ. ರಾಜಪ್ಪ ದಳವಾಯಿಯವರು ಅಲ್ಲಿಗೆ ಹೃದಯ ಕರುಳಿನಿಂದ ಹೋಗುತ್ತಾರೆ. ಅಲ್ಲಿ ನಿಂತು ಫೋಟೋ ತೆಗೆಸಿಕೊಂಡು, ಅದನ್ನು WhatsApp, FaceBook ನಂತಹ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಪ್ರಚಾರ ಗಿಟ್ಟಿಸಿಕೊಂಡು, ಬೇರೆಯವರಿಂದ ಲೈಕ್ ಗಳಿಸಿಕೊಳ್ಳಲು ಹೋಗುವುದಿಲ್ಲ. ಯಾವ ಮಾನವೀಯ ಸಂವೇದನೆ ಇವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತದೆ? ಇದು ನನಗೆ ಬಹಳ ಬಹಳ ಮುಖ್ಯ. ರಾಜಪ್ಪ ದಳವಾಯಿಯವರು ಕುದ್ಮುಲ್ ರಂಗರಾವ್ ಅವರ ಸ್ಮಾರಕದ ಹತ್ತಿರ ಹೋದಾಗ ಇವರ ಮನಸ್ಸಿನಲ್ಲಿ ಯಾವ ಭಾವನೆಗಳು ಹುಟ್ಟಬಹುದು? ಇದು ನನ್ನ ಅತ್ಯಂತ ಕುತೂಹಲದ ಪ್ರಶ್ನೆ. ಇದಕ್ಕೆ ನನ್ನದೇ ವಿವರಣೆಯೂ ಕೂಡಾ ಸಾಧ್ಯ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ ಕೊಡಲು ಅಲ್ಲಿಗೆ ಹೋಗಲ್ಲ ಅಂತ ಆಗಲೇ ಹೇಳಿದೆ. ಇವರ ಮನಸ್ಸಿನಲ್ಲಿ ಈ ತರ ಭಾವನೆಗಳು ಹುಟ್ಟಿರಬಹುದೇ?

`ಕುದ್ಮುಲ್ ರಂಗರಾವ್ ಅವರೆ, ನೀವು ನಡೆದಾಡಿರುವ ಪಾದದ ಧೂಳು ನನ್ನ ಹಣೆಗೆ ಮುಟ್ಟಲಿ. ಎಷ್ಟೆಲ್ಲಾ ತೊಂದರೆಗಳನ್ನು, ವಿರೋಧಗಳನ್ನು, ಅಪಮಾನ ಮಾಡಿದ್ದನ್ನು ಎದುರಿಸಿ, ನೀವು ಅಸ್ಪೃಶ್ಯ ಮಕ್ಕಳಿಗೆ ಸ್ಕೂಲು, ಹಾಸ್ಟೆಲ್ ಗಳನ್ನು ತೆರೆದು ಅವರಿಗೆ ಶಿಕ್ಷಣ ನೀಡಿ ಇಡೀ ಭಾರತದಲ್ಲೇ ಮುಂದೆ ಯಾರೂ ಕೂಡಾ ಮಾಡದಂತಹ ದೊಡ್ಡ ದಾಖಲೆ ಮಾಡಿದ್ದೀರಿ. ನೀವು ಮಾಡಿರುವ ಕೆಲಸ ಸಾಧನೆಯಲ್ಲಿ ಹಿಮಾಲಯ ಪರ್ವತವನ್ನು ಮೀರಿಸುವಂತಹದ್ದು. ನಿಮ್ಮ ಸಾಧನೆಯ ಮುಂದೆ ನಾನು ಒಂದು ಮರಳಿನ ಸಣ್ಣ ಕಣ. ನೀವು ನಮ್ಮನ್ನು ಅಗಲಿದ ಮೇಲೆ ಇಲ್ಲಿನ ಅಸ್ಪೃಶ್ಯರನ್ನು ಹೇಗೆ ಹೇಗೆ ಹಿಂಸಿಸಿದರು? ಮಲ ಬಾಯಿಗೆ ತುರುಕಿದರು! ಗುಡಿಸಲುಗಳಿಗೆ ಕೂಡಿ ಹಾಕಿ ಜೀವಂತವಾಗಿ ಸುಟ್ಟರು! ಎಂಬ ಕ್ರೂರ ಸತ್ಯವನ್ನು ನಾನು ನಿಮಗೆ ರವಾನಿಸಲಾರೆ. ಇದಕ್ಕೆ ಸದ್ಯಕ್ಕೆ ನನ್ನ ಅಂತರಂಗ ಪರ್ಮಿಶನ್ ಕೊಡುತ್ತಿಲ್ಲ. ಆದರೆ ನೀವು ಮಾಡಿದ ಹಿಮಾಲಯದಂತಹ ಸಾಧನೆಯಲ್ಲಿ ನಾನು ಒಂದು ಸಣ್ಣ ಕಣದಷ್ಟು ಕೆಲಸ ಮಾಡಲು ನನ್ನ ಅಂತರಂಗವನ್ನು ನಿಮ್ಮ ಸ್ಫೂರ್ತಿಯು ಪುನಃಶ್ಚೇತನಗೊಳಿಸಲಿ. ನಾನು ಇದಿಷ್ಟನ್ನು ಮಾತ್ರ ನಿಮ್ಮಲ್ಲಿ ಕೇಳಿಕೊಳ್ಳಲು ಇಲ್ಲಿಗೆ ಬಂದಿರುವೆ; ಅಷ್ಟೆ.’

ಬಹುಶಃ ರಾಜಪ್ಪ ದಳವಾಯಿಯವರ ಮನಸ್ಸಿನಲ್ಲಿ ಕುದ್ಮುಲ್ ರಂಗರಾವ್ ಅವರ ಸ್ಮಾರಕದ ಮುಂದೆ ಇದೇ ಭಾವನೆಗಳು, ಇಂತಹವೇ ಭಾವನೆಗಳು ಹುಟ್ಟಿರಲು ಸಾಧ್ಯ. ಕುದ್ಮುಲ್ ರಂಗರಾಯರು ಮಾಡಿದ ಕೆಲಸಗಳನ್ನೇ ರಾಜಪ್ಪ ದಳವಾಯಿಯವರು ತಮ್ಮ ಸಾಮರ್ಥ್ಯವನ್ನು ಮೀರಿ ಮಾಡಿದ್ದಾರೆ. ಇದನ್ನು ಬಿಡಿಸಿ ಹೇಳುವ ಸಲುವಾಗಿ ಕುದ್ಮುಲ್ ಅವರ ಸಾಧನೆಯನ್ನು ಇಲ್ಲಿ ಉಲ್ಲೇಖಿಸಿದೆ. ಈಗ ಈ ಉಲ್ಲೇಖದ ಬಗೆಗೆ ಯಾರೂ ಕೂಡಾ ವಿಷಯಾಂತರ ಆಯಿತು ಎಂದು ಭಾವಿಸಲಾರರು ಎಂದು ನಾನು ಭಾವಿಸಿದ್ದೇನೆ.

ದಳವಾಯಿಯವರು ಕುದ್ಮುಲ್ ರಂಗರಾವ್ ಅವರ ಬಗೆಗೆ ಈ ಪುಸ್ತಕದಲ್ಲಿ ಲೇಖನ ಬರೆದಿರುವ ಶಿಷ್ಯರಿಗೆ ಹೇಳಿರಬಹುದು. ಅದರಲ್ಲಿ ಕೆಲವರು ಇವರು ಹೇಳಿದುದನ್ನು ಕೇಳಿಸಿಕೊಂಡಿರಬಹುದು; ಮತ್ತೆ ಕೆಲವರು ಕೇಳಿಸಿಕೊಳ್ಳದೇ ಇರಬಹುದು. ಅದು ಏನೇ ಇರಲಿ. ಕುದ್ಮುಲ್ ರಂಗರಾವ್ ಅವರನ್ನು ಇಲ್ಲಿ ಪ್ರಸ್ತಾಪ ಮಾಡಲು ಮತ್ತೂ ಒಂದು ಬಲವಾದ ಕಾರಣವಿದೆ. ಅದು ಏನು ಎಂದರೆ, ಯಾರು ಕುದ್ಮುಲ್ ರಂಗರಾವ್ ಅವರ ಬಗೆಗೆ ತಿಳಿದುಕೊಂಡಿಲ್ಲವೊ, ಓದಿಕೊಂಡಿಲ್ಲವೊ, ಅವರು ದಯವಿಟ್ಟು, ದಯವಿಟ್ಟು `ದಲಿತೋದ್ಧಾರಕ ಕುದ್ಮುಲ್ ರಂಗರಾವ್’ ಪುಸ್ತಕವನ್ನು ಕಡ್ಡಾಯವಾಗಿ ಓದಿ ಎಂದು ನಾನು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.

ದಳವಾಯಿ ಸರ್ ಅವರ ಬಳಿ ಈ ಪುಸ್ತಕದ ಝೆರಾಕ್ಸ್ ಪ್ರತಿ ಇದೆ.

ಈ ಪುಸ್ತಕದ ಬಹುತೇಕ ಎಲ್ಲಾ ಬರವಣಿಗೆಗಳು ಸಾಹಿತ್ಯಕೋಶ'ದ ಅಗತ್ಯವನ್ನು, ಮಹತ್ವವನ್ನು ಒತ್ತಿ ಹೇಳಿವೆ. ಇಲ್ಲಿನ ಬರಹಗಾರರು ಬಹುತೇಕ ತಮ್ಮ ಶೈಕ್ಷಣಿಕ ಜೀವನದಲ್ಲಿ ಹಲವು ಅಡೆತಡೆಗಳನ್ನು ಎದುರಿಸುತ್ತಾ ಬಂದವರು. ಇದನ್ನು ಸ್ವಲ್ಪ ವಿವರಿಸುವುದಾದರೆ, SSLC ಯಲ್ಲಿ ಇಂಗ್ಲಿಷ್ ಮತ್ತು ಗಣಿತ ಎಂಬ ಕೊರಾನಾದಂತಹ ಭಯಾನಕ ವಿಷಯಗಳನ್ನು ಎದುರಿಸಿ ಬಂದವರು. ಮುಂದೆ ಡಿಗ್ರಿಗೆ ಬಂದಾಗ ಅಲ್ಲಿ ಇಂಗ್ಲಿಷ್ ಮತ್ತೆ ನಕ್ಷತ್ರಕನಂತೆ ಬೆನ್ನಟ್ಟಿ ಬಂದಿದೆ. ಅದನ್ನೂ ಹೇಗೇಗೊ ಎದುರಿಸಿ ಕಂಠಪಾಠ ಮುಂತಾದುವುಗಳ ದಕ್ಷಿಣೆ, ಹರಕೆ ಇವನ್ನು ತೋರಿಸಿ ಮತ್ತು ತೀರಿಸಿ ಇನ್ನು ಶೈಕ್ಷಣಿಕವಾಗಿ ಭಯಾನಕ ಸಮಸ್ಯೆ ಎದುರಾಗಲಾರದು ಎಂದು ಎಂ.ಎ. ಮುಗಿಸಿದವರು. ಇದನ್ನು ಮುಗಿಸಿದ ನಂತರ ಉಪನ್ಯಾಸಕರ (ಈಗ ಸಹಾಯಕ ಪ್ರಾಧ್ಯಾಪಕರು ಎನ್ನಬೇಕು) ಹುದ್ದೆಯ ನೇಮಕಾತಿಗೆ U.G.C., N.E.T, S.L.E.T. ಮುಂತಾದುವು ಮತ್ತೆ ಬೆಟ್ಟದಂತೆ ಎದುರಾದವು. ಥಥ್ ಥರಿಕೆ! ಈ ಮಗಂದು ಯುಜಿಸಿನೂ ಬ್ಯಾಡ; ಪಾಜಿಸಿನೂ ಬ್ಯಾಡ ಎಂದು ಸೋತು ತಲೆಮೇಲೆ ಕೈಹೊತ್ತು ಕೂರುವಂತಹ ವಿಕೃತ ಬಿಕ್ಕಟ್ಟಿನಲ್ಲಿ ಸಂಜೀವಿನಿಯಂತೆ ಕೈಹಿಡಿದು ನಡೆಸುತ್ತಿರುವುದುಸಾಹಿತ್ಯ ಕೋಶ’. ಕನ್ನಡ ಎಂ.ಎ. ಮುಗಿಸಿರುವ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಸಾವಿರಾರು ವಿದ್ಯಾರ್ಥಿಗಳ ಕೈಲಿ ಇವತ್ತು ಸಾಹಿತ್ಯಕೋಶ' ಪುಸ್ತಕ ಇರುತ್ತದೆ. ಕನ್ನಡ ಎಂ.ಎ. ದೂರಶಿಕ್ಷಣದ ಮೂಲಕ ಓದುವ ಅನೇಕರಿಗೆ ಇಂದುಸಾಹಿತ್ಯಕೋಶ’ ದಾರಿದೀಪವಾಗಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ರಾಜಕಾರಣಿಗಳೂ ಸೇರಿದಂತೆ, ಇನ್ನೂ ಕೆಲವರು ಕನ್ನಡ ಸಾಹಿತ್ಯದ ಬಗೆಗೆ ನನಗೂ ಗೊತ್ತು ಎಂದು ತೋರಿಸಿಕೊಳ್ಳಲು ಸಾಹಿತ್ಯಕೋಶ'ದ ಮೊರೆ ಹೋಗಿರುವುದೂ ಇದೆ. ಶಿಕ್ಷಣದ ಬೇರೆ ಬೇರೆ ಹಂತಗಳಲ್ಲಿ ಕನ್ನಡ ಸಾಹಿತ್ಯ ಪಾಠ ಮಾಡುವ ಅನೇಕ ಶಿಕ್ಷಕರು ಇದನ್ನು ಬಳಸುತ್ತಿದ್ದಾರೆ. ಈ ಕೃತಿ ಘೋಷಿತ ಉದ್ದೇಶದ ವ್ಯಾಪ್ತಿಯ ಆಚೆಗೂ ಬಳಕೆಯಾಗುತ್ತಿದೆ ಎಂಬುದನ್ನು ಗಮನಿಸಬೇಕು. ಇನ್ನೂ ಮುಖ್ಯವಾದ ವಿಷಯ; ಉಪನ್ಯಾಸಕ ಹುದ್ದೆಯ ನೇಮಕಾತಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವವರು; ನಿಗದಿತ ಪಠ್ಯವಸ್ತು ಓದಲಾರದ ಪ್ರಶ್ನೆ ಪತ್ರಿಕೆ ತಯಾರಿಸುವ ವಿಷಯತಜ್ಞರು ಇದನ್ನು ಅವಲಂಬಿಸಿದ್ದಾರೆ. ದೊಡ್ಡ ಗಾತ್ರದ ಪಠ್ಯಕ್ರಮವನ್ನು ಓದಬೇಕಾದ ಪ್ರಾಮಾಣಿಕ ಶ್ರಮವನ್ನು ಬದಿಗೊತ್ತಿಸಾಹಿತ್ಯಕೋಶ’ಕ್ಕೆ ಮೊರೆಹೋಗಿದ್ದಾರೆ. ೨೦೧೬ರಲ್ಲಿ ಉಪನ್ಯಾಸಕರ ನೇಮಕಾತಿಗೆ K.P.S.C. ನಡೆಸಿದ ಪರೀಕ್ಷೆಯ ಪಠ್ಯವಸ್ತು ಮತ್ತು ಪ್ರಶ್ನೆ ಪತ್ರಿಕೆಯನ್ನು ನೋಡಿದರೆ ಇದು ಸ್ಪಷ್ಟವಾಗಿ ತಿಳಿಯುತ್ತದೆ.

ರಾಜಪ್ಪ ದಳವಾಯಿಯವರು ತುಮಕೂರು ಪಿ.ಜಿ. ಸೆಂಟರ್, ಕೋಲಾರ ಪಿ.ಜಿ. ಸೆಂಟರ್, ಗುಲಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ, ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಇಲ್ಲೆಲ್ಲ ಕೆಲಸ ಮಾಡಿ ಈಗ ಮತ್ತೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೆಲಸ ಮುಂದುವರಿಸಿದ್ದಾರೆ. ಇವರು ಕೆಲಸ ಮಾಡಿದ ಕನ್ನಡ ವಿಭಾಗಗಳಲ್ಲಿ U.G.C. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ನನ್ನ ಆಜನ್ಮಸಿದ್ಧ ಕರ್ತವ್ಯ ಎಂಬಂತೆ ಮಾಡುತ್ತಾ ಬಂದಿದ್ದಾರೆ. ಕೆಲವು ದೈಹಿಕ ಸಮಸ್ಯೆಗಳಿಗೆ ಸಿದ್ಧೌಷಧ',ರಾಮಬಾಣ’ ಮುಂತಾದ ಅಗ್ಗದ ಜಾಹೀರಾತುಗಳನ್ನು ನಿತ್ಯ ನೋಡುತ್ತಿರುತ್ತೇವೆ. ನಿಜವಾಗಿಯೂ ಅವು ರಾಮಬಾಣಗಳಾಗಿವೆಯೊ, ರೋಗಬಾಣಗಳಾಗಿವೆಯೋ ಗೊತ್ತಿಲ್ಲ. ಆದರೆ `ಸಾಹಿತ್ಯಕೋಶ’ವಂತೂ ಅನೇಕರಿಗೆ ಕನ್ನಡ ಸಾಹಿತ್ಯದ ಪಕ್ಷಿನೋಟವನ್ನು ಅಂಗೈ ಮೇಲೆ ತೆರೆದು ತೋರಿಸುವ ಮಹತ್ವದ ಕೃತಿಯಾಗಿದೆ.

ಸಾಹಿತ್ಯಕೋಶ' ನಮಗೆ ನೆರವಾಯಿತು, ಆಸರೆಯಾಯಿತು, ಮಾರ್ಗದರ್ಶಕವಾಯಿತು - ಈ ಮುಂತಾದ ಮಾತುಗಳನ್ನು ಇಲ್ಲಿಯ ಅನೇಕ ಬರಹಗಾರರು ಬರೆದುಕೊಂಡಿದ್ದಾರೆ. ಇದು ಸರಿ ಇದೆ. ಸರಿ ಇರುವ ಇದರ ಆಳವನ್ನು ಇನ್ನಷ್ಟು ಬಗೆದು ನೋಡಬೇಕು; ಅಗೆದು ನೋಡಬೇಕು. ಈ ಕೃತಿಯು ಕನ್ನಡ ರಾಜ್ಯೋತ್ಸವದಲ್ಲಿ ಭಾಷಣ ಮಾಡುವವರಿಗೆ, ವಿವಿಧ ರೀತಿಯ ಪರೀಕ್ಷೆ ಬರೆಯುವವರಿಗೆ, ತರಗತಿಯೊಳಗೆ ಪಾಠ ಮಾಡುವವರಿಗೆ ಮಾರ್ಗದರ್ಶಕ ಕೃತಿ ಮಾತ್ರ ಆಗದೆ, ಇವಕ್ಕೆಲ್ಲಾ ಸಾಹಿತ್ಯವನ್ನು ಹೇಗೆ ಓದಬೇಕು, ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದಕ್ಕೆ ಒಂದು ಚೌಕಟ್ಟನ್ನು ಸೃಷ್ಟಿ ಮಾಡಿತು. ಪ್ರಮಾಣದಲ್ಲಿ ಸಾಗರದಷ್ಟು ಇರುವ ಸಾಹಿತ್ಯವನ್ನು ವಿಭಾಗ ಮಾಡಿಕೊಂಡು, ಅಂಗೈ ಮೇಲೆ ತಂದುಕೊಳ್ಳುವ ವಿಧಾನಕ್ಕೆ ಸರಿಯಾದ ದಾರಿ ತೋರಿಸಿತು. ಇಷ್ಟೇ ಮುಖ್ಯವಾಗಿ ಇಡೀ ಕನ್ನಡ ಸಾಹಿತ್ಯವನ್ನು ಅತ್ಯಂತ ಸಂಕ್ಷಿಪ್ತೀಕರಿಸಿ, ಒಂದು ಕೈಪಿಡಿಯಂತೆ ಮಾರ್ಪಡಿಸಿಕೊಳ್ಳುವ ಕ್ರಮವನ್ನು ಇದು ತೋರಿಸಿತು. ಈ ಮೂಲಕ ಇದನ್ನು ಅಗತ್ಯವಾಗಿ ಬಳಸುವವರಿಗೆ ಕನ್ನಡ ಸಾಹಿತ್ಯದ ಪರಿಚಯದ ಬಗೆಗೆ ಆತ್ಮವಿಶ್ವಾಸವನ್ನು ಮೂಡಿಸಿತು. ಸ್ವಾವಲಂಬನೆತನವನ್ನು ಇದು ಹುಟ್ಟಿಸಿತು. ಇಂತಹವರ ಮನೋಬಲವನ್ನು ಗಟ್ಟಿಗೊಳಿಸಿ, ಅವರಲ್ಲಿ ಅವರ ಅರಿವಿಗೇ ಬಾರದಂತಹ ಧೈರ್ಯವನ್ನು ಹುಟ್ಟಿಸಿ ಬಲಪಡಿಸಿತು. ಹೀಗೆ ಧೈರ್ಯ ಹಾಗೂ ಸ್ವಾವಲಂಬನೆತನವನ್ನು ಮೂಡಿಸಿದ್ದುಸಾಹಿತ್ಯಕೋಶ’ದ ಮಹತ್ವದ ಕೊಡುಗೆ ಎಂದು ನಾನು ಗುರುತಿಸುತ್ತಿದ್ದೇನೆ. ಈ ನಡುವೆ ಹೇಳಬೇಕಾದ ಒಂದು ಪಾಯಿಂಟ್ ಮಿಸ್ ಆಗಿತ್ತು. ಅದು ಯಾವುದು ಎಂದರೆ, ಕೆಲವು ವಿಶ್ವವಿದ್ಯಾಲಯಗಳ ಕನ್ನಡ ಎಂ.ಎ. ಪಠ್ಯವಸ್ತುವನ್ನು ಸಾಹಿತ್ಯಕೋಶ'ದ ಸ್ವರೂಪದಲ್ಲಿ ರೂಪಿಸತೊಡಗಿದರು.ಸಾಹಿತ್ಯಕೋಶ’ ಇಷ್ಟೆಲ್ಲ ಕೆಲಸ ಮಾಡಿದೆ; ಇದರಿಂದ ಇಷ್ಟೆಲ್ಲ ಪರಿಣಾಮಗಳಾಗಿವೆ ಎಂಬುದನ್ನು ಬಿಡಿಸಿ ನೋಡಬೇಕಾಗಿದೆ.

`ಸಾಹಿತ್ಯಕೋಶ’ ಬಂದ ಮೇಲೆ U.G.C. ಮುಂತಾದ ಪರೀಕ್ಷೆಗಳಲ್ಲಿ ಕನ್ನಡ ಎಂ.ಎ. ಮಾಡಿದ ಅಭ್ಯರ್ಥಿಗಳು ಉಳಿದ ವಿಷಯಗಳ ಅಭ್ಯರ್ಥಿಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಪಾಸಾಗತೊಡಗಿದರು. ಅದರಲ್ಲೂ ತುಮಕೂರು ಪಿ.ಜಿ. ಸೆಂಟರಿಗೆ ಸಿಂಹಪಲು ಬರತೊಡಗಿತು. ನಮ್ಮಲ್ಲಿ S.S.L.C. ಮತ್ತು P.U.C. ಫಲಿತಾಂಶ ಪ್ರಕಟವಾದಾಗ ಯಾವ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯ ಅತ್ಯುತ್ತಮ ಅಂಕ ಗಳಿಸಿದ್ದಾರೆ ಎಂಬ ಅಂಕಿ ಅಂಶ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಇತ್ತೀಚೆಗಂತೂ ಅನೇಕ ಪಿ.ಯು. ಕಾಲೇಜುಗಳಲ್ಲಿ NEET ಮುಂತಾದ ಪರೀಕ್ಷೆಗಳಲ್ಲಿ ನಮ್ಮ ಕಾಲೇಜಿನ ಫಲಿತಾಂಶ ಏನು? ಎಷ್ಟು ಎಂಬುದನ್ನು ಅಭ್ಯರ್ಥಿಗಳ ಫೋಟೋ ಸಮೇತ ದೊಡ್ಡ ದೊಡ್ಡ ಫ್ಲೆಕ್ಸ್ ಗಳಲ್ಲಿ ಹಾಕಿರುತ್ತಾರೆ. ಅಂತವನ್ನು ನೋಡಿದಾಗ ನನಗನಿಸುವುದು; U.G.C. N.E.T. ಮುಂತಾದ ಪರೀಕ್ಷೆಗಳಲ್ಲಿ ಯಾವ ಪಿ.ಜಿ. ಸೆಂಟರಿನ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾದರು ಎಂಬ ಫ್ಲೆಕ್ಸ್ ಹಾಕಿಸಿದ್ದರೆ ಇದು ಅನೇಕ ಸಲ ತುಮಕೂರು ಪಿ.ಜಿ. ಸೆಂಟರಿಗೆ ಹೋಗುತ್ತಿತ್ತು ಅಂತ ನನಗನಿಸಿದೆ. ಇರಲಿ; ಈ ಆಯಾಮವನ್ನು ಆಸಕ್ತರು ತಮ್ಮ ಶಕ್ತ್ಯಾನುಸಾರ ವಿಸ್ತರಿಸಿಕೊಳ್ಳಲು ಸ್ವತಂತ್ರರು.

ಕೆಲವರು ಇಲ್ಲಿ, ತಾವು ಕನ್ನಡ ಎಂ.ಎ. ಓದಿ ಹೈಸ್ಕೂಲ್ ನಲ್ಲಿ, ಪಿ.ಯು. ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಸಾಹಿತ್ಯಕೋಶ' ಓದಿನ ನೆರವಿನಿಂದ U.G.C. ಪಾಸಾಯ್ತು. ಮುಂದೆ ಪದವಿ ಕಾಲೇಜಿಗೆ ಆಯ್ಕೆ ಆದೆ ಎಂದು ಬರೆದುಕೊಂಡಿದ್ದಾರೆ. ಇಂತಹವರ ಸಂಖ್ಯೆಯೂ ಕೂಡಾ ಬಹಳ ದೊಡ್ಡದಿದೆ. ಇಂತಹವರನ್ನುಸಾಹಿತ್ಯಕೋಶ’ವು ಪ್ರೊಮೋಶನ್ ಕೊಟ್ಟು ಮುಂದಿನ ಹುದ್ದೆಗೆ ಹೋಗುವಂತೆ ಪ್ರೇರೇಪಿಸಿದೆ.

ರಾಜಪ್ಪ ದಳವಾಯಿ ಅವರ ತರಗತಿಯೊಳಗಿನ ಪಾಠದ ಬಗೆಗೆ, U.G.C. ಪರೀಕ್ಷೆಗೆ ಸಿದ್ಧಗೊಳಿಸುವ ವಿಧಾನದ ಬಗೆಗೆ ಬರೆದಿದ್ದಾರೆ. ಇಲ್ಲೆಲ್ಲ ದಳವಾಯಿಯವರ ಸಿದ್ಧತೆಯನ್ನು ನಾವು ಊಹಿಸಿಕೊಳ್ಳಬೇಕು. ಕನ್ನಡ ಸಾಹಿತ್ಯದ ಎಲ್ಲಾ ಏರಿಯಾಗಳು, ನಾಟಕ, ಸಿನಿಮಾ, ಸಂಗೀತ, ಯಕ್ಷಗಾನ, ಬಯಲಾಟ, ಶಿಲ್ಪಕಲೆ ಹೀಗೆ ಇದು ಇನ್ನೂ ವಿಸ್ತಾರವಾಗಿ ವಿಸ್ತರಿಸಿಕೊಳ್ಳುತ್ತದೆ. ಇಷ್ಟೆಲ್ಲ ವಿಷಯಗಳನ್ನು ಪಾಠ ಮಾಡುವ ಸಲುವಾಗಿ, ಉಪನ್ಯಾಸ ಮಾಡುವ ಸಲುವಾಗಿ ಓದಿಕೊಳ್ಳುವುದು ಸುಲಭದ ಮಾತಲ್ಲ. ಪ್ರಾಚೀನ ಸಾಹಿತ್ಯದಿಂದ ಹಿಡಿದು ಇಂದಿನ ಸಾಹಿತ್ಯದವರೆಗೆ, ಪ್ರಾಚೀನ ಕವಿಗಳಿಂದ ಹಿಡಿದು ಇಂದಿನ ಕವಿಗಳು, ಬರಹಗಾರರವರೆಗೆ ಇವರ ಪರಿಚಾಯಾತ್ಮಕ ಸಂಬಂಧವಿದೆ. ಜಿಲ್ಲಾವಾರು ಹೇಳುವುದಾದರೆ ಬೀದರ್ ಇರಬಹುದು, ಬೆಳಗಾವಿ ಇರಬಹುದು, ದಕ್ಷಿಣ ಕನ್ನಡ ಇರಬಹುದು. ಎಲ್ಲಾ ಕಡೆ ಪರಿಚಯ, ಸಂಪರ್ಕ, ಸ್ನೇಹ ಗೆಳೆತನವಿದೆ. ಇವರ ಹಲವು ಒತ್ತಡಗಳಲ್ಲಿ, ಅನೇಕ ಕೆಲಸಗಳಲ್ಲಿ ಓದಿಗೆ, ಅಧ್ಯಯನಕ್ಕೆ ಸಮಯವನ್ನು ಹೇಗೆ ಸಂಯೋಜಿಸಿಕೊಳ್ಳುತ್ತಾರೋ ಗೊತ್ತಿಲ್ಲ.

ತಾವು ಹೇಳುವ ಪಾಠ ಆಲಿಸಿಕೊಳ್ಳುವವರಿಗೆ ಮನಮುಟ್ಟುವಂತೆ ಇರಬೇಕು, ಅವರ ನೆನಪಿನಲ್ಲಿ ಗಟ್ಟಿಯಾಗಿ ಉಳಿಯುವಂತೆ ಇರಬೇಕು, ಮುಂದೆ ಅವರ ಭವಿಷ್ಯವನ್ನು ರೂಪಿಸುವಂತೆ ಇರಬೇಕು ಎಂಬುದು ಇವರ ಉದ್ದೇಶ ಮತ್ತು ಗುರಿ. ಈ ಉದ್ದೇಶ ಮತ್ತು ಗುರಿಯನ್ನು ಇವರು ಮೊದಲು ಸ್ಪಷ್ಟ ಮಾಡಿಕೊಂಡಿದ್ದಾರೆ; ಖಚಿತಪಡಿಸಿಕೊಂಡಿದ್ದಾರೆ. ಇದಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ; ನೋಟ್ಸ್ ಮಾಡಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಅತ್ಯಂತ ಪರಿಣಾಮಕಾರಿಯಾಗಿ ಪಾಠ ಮಾಡುತ್ತಾರೆ. ಸ್ಪಷ್ಟವಾದ, ಖಚಿತವಾದ ಗುರಿ – ಉದ್ದೇಶ ಇಟ್ಟುಕೊಂಡು ತಯಾರಿ ನಡೆಸಿ ಪಾಠ ಮಾಡುವುದು; ಗುರಿ-ಉದ್ದೇಶ – ತಯಾರಿ ಇಲ್ಲದೆ ಪಾಠ ಮಾಡುವುದು – ಹೀಗೆ ಎರಡು ತರ ಇದೆ. ಎರಡನೇ ವರ್ಗದವರು ಕೆಲವರು ತಮ್ಮ ತರಗತಿ ಇದ್ದಾಗ ವಿದ್ಯಾರ್ಥಿಗಳಿಗೆ `ಲೈಬ್ರರಿಗೆ ಹೋಗಿ’ ಎಂದು ಹೇಳುತ್ತಾರೆ. ಇದು ಕೆಲವು ವಿದ್ಯಾರ್ಥಿಗಳಿಗೂ ಅನುಕೂಲ; ಅಧ್ಯಾಪಕರಿಗೂ ಸುಲಭ.

ಆಲಿಸಿಕೊಳ್ಳುವುದು ಮತ್ತು ಮಾತಾಡುವುದು ಈ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಾಪಕರಲ್ಲಿ ಎರಡು ವರ್ಗಗಳಿವೆ. ಒಂದು ವರ್ಗದವರು ತಾವು ಮಾತ್ರ ಮಾತಾಡುತ್ತಾರೆ, ತಾವೇ ಮಾತ್ರ ಮಾತಾಡುತ್ತಾರೆ. ತಮ್ಮ ಜೊತೆಗೆ ಇರುವವರಿಗೆ ಒಂದೇ ಒಂದು ಮಾತನ್ನು ಆಡಲು ಬಿಡುವುದಿಲ್ಲ. ತಮ್ಮ ಜೊತೆ ಇರುವವರಿಗೆ ಮಾತನಾಡಲು ಬರುತ್ತದೆ ಎಂಬ ಕನಿಷ್ಠ ಜ್ಞಾನವನ್ನೂ ನಾಶ ಮಾಡಿಕೊಳ್ಳುತ್ತಾರೆ. ತಮ್ಮ ಮಾತನ್ನು ಮಾತ್ರ ನಿರಂತರವಾಗಿ ಆಲಿಸಿಕೊಳ್ಳುವವರಿಗೆ ಕಿರಿಕಿರಿಯಾಗುತ್ತಿರಬಹುದು; ಹಿಂಸೆಯಾಗುತ್ತಿರಬಹುದು ಎಂಬ ಕಾಮನ್ ಸೆನ್ಸ್ ಕೂಡ ಇರುವುದಿಲ್ಲ. ಇಂತವರನ್ನು ಮಾತಿನ ಮಲ್ಲರು' ಎಂದು ಕರೆಯಬಾರದು;ಮಾತಾಡುವ ರೋಗಿಗಳು’, `ಮಾತಾಡುವ ದಾಳಿಕೋರರು’ ಎಂದು ಕರೆಯಬೇಕು. ಇವರಿಗೆ ಕಿವಿ ಇರುವುದಿಲ್ಲ; ಇದ್ದರೂ ಅದನ್ನು ಬೇರೆಯವರ ಮಾತನ್ನು ಆಲಿಸಿಕೊಳ್ಳಲು ಬಳಸುವುದಿಲ್ಲ. ಹೀಗೆ ಕೆಲವು ಸಮಯ ಬಳಸದೇ ಹೋದಾಗ ಕಿವಿಗಳ ನರಮಂಡಲವು ಬಹುಶಃ ಆಲಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆಂದು ಕಾಣುತ್ತದೆ. ಎಣ್ಣೆ ಪಾರ್ಟಿಗಳಲ್ಲಿ ಕೆಲವರು ತಾವೊಬ್ಬರೇ ಮಾತಾಡುತ್ತಿರುತ್ತಾರೆ. ಬೇರೆಯವರಿಗೆ ಒಂದೇ ಒಂದು ಮಾತಾಡಲು ಅವಕಾಶ ಕೊಡುವುದಿಲ್ಲ. ಎಣ್ಣೆ ಪಾರ್ಟಿ ಬಿಟ್ಟರೆ, ಎಣ್ಣೇ ಮಾಷ್ಟ್ರಗಳೂ ಕೂಡ ಇನ್ನೊಬ್ಬರಿಗೆ ಒಂದು ಮಾತಾಡಲೂ ಅವಕಾಶ ಕೊಡುವುದಿಲ್ಲ. ಎಣ್ಣೆ ಮಾಷ್ಟ್ರು ವಿಷಯ ಬಿಡಿ. ನಮ್ಮಲ್ಲಿ ಕೆಲವರು ವಿದ್ವಾಂಸರು ಸೆಮಿನಾರುಗಳಲ್ಲಿ ಇನ್ನೊಬ್ಬರ ಉಪನ್ಯಾಸಕ್ಕೆ ಅಟೆಂಡ್ ಮಾಡುವುದಿಲ್ಲ. ತಮ್ಮ ಪಾಳಿ ಬಂದಾಗ ಬಂದು ಮಾತಾಡುತ್ತಾರೆ; ತಮ್ಮ ಮಾತುಗಳನ್ನು ಮಾತ್ರ ಉಳಿದ ಪ್ರಬಂಧಕಾರರು ಆಲಿಸಿಕೊಳ್ಳಬೇಕು ಎಂದು ಅಪೇಕ್ಷಿಸುತ್ತಾರೆ. ತಮ್ಮ ಉಪನ್ಯಾಸ ಮುಗಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಇನ್ನೊಂದು ವರ್ಗದವರು ತಾವೂ ಮಾತಾಡುತ್ತಾರೆ; ಜೊತೆಗಿದ್ದವರಿಗೂ ಮಾತಾಡಲು ಬಿಡುತ್ತಾರೆ, ಅವರ ಮಾತುಗಳನ್ನು ಆಲಿಸಿಕೊಳ್ಳುತ್ತಾರೆ. ಎಲ್ಲರೊಂದಿಗೆ ಇರುವಾಗ ಎಲ್ಲರಿಗೂ ಮಾತಾಡುವಂತಹ ಅವಕಾಶ ಕಲ್ಪಿಸುವುದು, ಬೇರೆಯವರ ಮಾತುಗಳನ್ನು, ಉಪನ್ಯಾಸಗಳನ್ನು ಆಲಿಸಿಕೊಳ್ಳುವುದು – ಈ ಸ್ವಭಾವ ಇರುವವರನ್ನು ಮಾತುಕತೆಗೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವವಾದಿಗಳು ಎನ್ನಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವವಾದಿಗಳನ್ನು ಪ್ರಮಾಣವನ್ನು ಮಾತಿನ ರೋಗಿಗಳು ಕಡಿಮೆ ಮಾಡುತ್ತಿದ್ದಾರೆ. ಇದರಲ್ಲಿ ರಾಜಪ್ಪ ದಳವಾಯಿ ಅವರು ಯಾವ ವರ್ಗದವರು ಎಂಬುದನ್ನು ಬಿಡಿಸಿ ಹೇಳಬೇಕಾಗಿದೆ.

ಒಂದು ಪ್ರಸಂಗದ ಎಳೆ ಹಿಡಿದು ಇದನ್ನು ವಿವರಿಸುತ್ತೇನೆ. ೨೦೦೫ರಲ್ಲಿ ಮತ್ತು ೨೦೦೬ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ರಿಫ್ರೆಶರ್ ಕೋರ್ಸ್ ನಡೆಸಲಾಯಿತು. ಈ ಎರಡೂ ವರ್ಷ ರಾಜಪ್ಪ ದಳವಾಯಿ ಅವರು ಅಭ್ಯರ್ಥಿಯಾಗಿ ಭಾಗವಹಿಸಿದ್ದರು. ಈ ಎರಡು ವರ್ಷಗಳಲ್ಲಿ ಯಾವುದೋ ಒಂದು ಕೋರ್ಸ್, ಡಿಸೆಂಬರ್ ತಿಂಗಳ ಕೊನೆಯ ಹಾಗೂ ಜನವರಿ ತಿಂಗಳ ಮೊದಲ ದಿನಗಳನ್ನು ಒಳಗೊಂಡಿತ್ತು. ಡಿಸೆಂಬರ್ ೨೨ ತನ್ನ ಪಾಡಿಗೆ ತಾನು ಬಂತು. ರಾಜಪ್ಪ ದಳವಾಯಿ ಅವರು ಆ ಸಮಯದಲ್ಲಿ ಹೊಸಪೇಟೆಯ ವ್ಯಾಪ್ತಿ ಪ್ರದೇಶದಲ್ಲಿ ಇದ್ದುದರಿಂದ, ನಮಗೆ ಕಂಪನಿ ಸಿಗುತ್ತದೆ ಅಂತ ನಾವು ಕೆಲವು ಗೆಳೆಯರು ಸಹಜವಾಗಿ ತೀರ್ಮಾನಿಸಿದೆವು. ಆದರೆ ಇವರಿಗೆ ಒಂದು ಕಡೆ ಕೊಪ್ಪಳದಿಂದ ಮತ್ತೊಂದು ಕಡೆ ಚಿತ್ರದುರ್ಗದಿಂದ ಕಾಲ್ಶೀಟ್ ಬಂದಿದ್ದವಂತೆ. ಆ ಕೋರ್ಸ್ ನಲ್ಲಿ ನಾನು, ಸಬಿತಾ ಮೇಡಂ ಅಭ್ಯರ್ಥಿಗಳಾಗಿದ್ದೆವು. ಡಿಸೆಂಬರ್ ೩೧ರ ಸಂಜೆ ಕೋರ್ಸಿನ ತರಗತಿ ಮುಗಿಸಿದ ದಳವಾಯಿ ಸರ್ ಅವರು ಇದ್ದಕ್ಕಿದ್ದಂತೆ ನಾನು ಇವತ್ತು ಸಂಜೆ ದುರ್ಗಕ್ಕೆ ಹೋಗ್ತೀನಿ; ಬೆಳಿಗ್ಗೆ ಬರ್ತಿನಿ' ಎಂದರು.ಅಯ್ಯೋ, ನೀವು ಅಲ್ಲಿಗೆ ಹೋದ್ರೆ ಇಲ್ಲಿ ನಮಗೆ ಕಂಪನಿ ಯಾರು’ ಅಂದೆ. ಇರಲಿ ತಗೊಳ್ಳಿ, ಈ ಕೋರ್ಸ್ ಅಷ್ಟೂ ದಿನಗಳು ನಮಗೆ ಸಂಜೆ ಟೈಮಲ್ಲಿ ಡಿಸೆಂಬರ್ ೩೧ರ ರಾತ್ರಿ ಪಾರ್ಟಿಯಲ್ಲಿ ಸಂಪೂರ್ಣ ಮುಳುಗುವುದರಿಂದ ಜನವರಿ ೧ರ ತರಗತಿಗೆ ಇವರು ಬರಲ್ಲ ಅಂತ ನಾನು ತೀರ್ಮಾನಿಸಿದೆ. ಸರಿ, ಮಾರನೇ ದಿನ ಬೆಳಿಗ್ಗೆ ೧೦.೩೦ಕ್ಕೆ ತರಗತಿ ಶುರುವಾಯಿತು. ಇವರು ಎಲ್ಲರಂತೆ ಇನ್ನು ಸ್ವಲ್ಪ ಮೊದಲೇ ೧೦.೨೦ರ ಹೊತ್ತಿಗೆ ತರಗತಿಗೆ ಬಂದರು. ಮಾಮೂಲಿ ಮುಂದಿನ ಸಾಲಿನಲ್ಲಿ ಕುಳಿತರು. ತರಗತಿಯ ಉಪನ್ಯಾಸವನ್ನು ಎಂದಿನಂತೆ ಜೆರಾಕ್ಸ್ ಹಾಳೆಯಲ್ಲಿ ಕಡುಕಪ್ಪು ಕಲರಿನ ಜೆಲ್ ಪೆನ್ನಿನಲ್ಲಿ ತಮ್ಮ ಮುದ್ದಾದ ಮತ್ತು ಸ್ಪಷ್ಟವಾದ ಅಕ್ಷರಗಳಲ್ಲಿ ಬರೆದುಕೊಂಡರು. ಉಪನ್ಯಾಸವನ್ನು ಸರಿಯಾಗಿ ಆಲಿಸಿಕೊಂಡರು. ಎಂದಿನಂತೆ ಚರ್ಚೆ ಸಂವಾದದಲ್ಲಿ ತೊಡಗಿದರು. ನನಗೆ ಕುತೂಹಲ ತಡೆಯಲಾಗಲಿಲ್ಲ. ಆ ರಿಫ್ರೆಶರ್ ಕೋರ್ಸಿನ ಅಷ್ಟೂ ದಿನ ನಾವು ಮಧ್ಯಾಹ್ನ ಕಮಲಾಪುರದ ಸಾವಜಿ ಹೋಟೆಲಿಗೆ ಹೋಗಿ ಊಟ ಮಾಡಿಕೊಂಡು ಬರುತ್ತಿದ್ದೆವು. ಅವತ್ತು ಮಧ್ಯಾಹ್ನ ಊಟಕ್ಕೆ ಹೋದಾಗ ಕೇಳಿದೆ,ನಿಮಗೆ ತರಗತಿಯಲ್ಲಿ ನಿದ್ದೆ ಬರಲಿಲ್ಲವೆ?’ ಎಂದು. ಇವರು ಹೇಳಿದರು, `ನಿನ್ನೆ ರಾತ್ರಿ ೯.೩೦ಕ್ಕೆ ದುರ್ಗ ತಲುಪಿದೆ. ೧೦.೩೦ರಿಂದ ಎಣ್ಣೆ ಪಾರ್ಟಿ ಶುರುವಾಯಿತು. ಬೆಳಗಿನ ಜಾವ ೩.೩೦ರ ಹೊತ್ತಿಗೆ ಊಟ ಮಾಡಿದೆವು. ೪.೩೦ರ ನಂತರ ದುರ್ಗದಿಂದ ಬಸ್ ನಲ್ಲಿ ಹೊಸಪೇಟೆಗೆ ಬಂದೆ’ ಎಂದರು. ನನಗೆ ಮುಂದೆ ಮಾತು ಹೊರಡಲಿಲ್ಲ. ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.

ಆ ರಿಫ್ರೆಶರ್ ಕೋರ್ಸಿನಲ್ಲಿ ಇವರು ಮೊದಲ ದಿನವೇ ಒಂದು ಬಂಡಲ್ ಝೆರಾಕ್ಸ್ ಪೇಪರ್ ತಂದಿದ್ದರು. ಜೊತೆಗೆ ಐದಾರು ಕಪ್ಪು ಕಲರಿನ ಜೆಲ್ ಪೆನ್ನು ತಂದಿದ್ದರು. ಝೆರಾಕ್ಸ್ ಪೇಪರ್ ನೋಡಿ ಇದು ಯಾವುದೋ ಪುಸ್ತಕ ಝೆರಾಕ್ಸ್ ಮಾಡಿಸಿಕೊಳ್ಳಲು ತಂದಿರಬಹುದು' ಎಂದು ನಾನು ಅಂದುಕೊಂಡಿದ್ದೆ. ಆದರೆ ತಂದುದು ಅದಕ್ಕಲ್ಲ. ಪ್ರತೀ ತರಗತಿಯ ಎಲ್ಲಾ ಉಪನ್ಯಾಸ ಮತ್ತು ಚರ್ಚೆಗಳನ್ನು ಆಲಿಸಕೊಳ್ಳುತ್ತಿದ್ದರು; ಜೊತೆ ನೀಟಾಗಿ ಬರೆದುಕೊಳ್ಳುತ್ತಿದ್ದರು. ಆ ಎರಡೂ ವರ್ಷಗಳ ರಿಫ್ರೆಶರ್ ಕೋರ್ಸಿನಲ್ಲಿ ಪ್ರತೀ ತರಗತಿಯ ಉಪನ್ಯಾಸ ಮತ್ತು ಚರ್ಚೆಗಳನ್ನು ಬರೆದುಕೊಂಡರು. ಮುಂದೆ ಅವನ್ನುರಿಫ್ರೆಶರ್ ಕೋರ್ಸ್ ೨೦೦೫’, `ರಿಫ್ರೆಶರ್ ಕೋರ್ಸ್ ೨೦೦೬’ ಎಂಬ ಹೆಸರಿನಲ್ಲಿ ಪುಸ್ತಕಗಳಾಗಿ ಪ್ರಕಟಿಸಿದರು. ರಿಫ್ರೆಶರ್ ಕೋರ್ಸಿನ ಪರಂಪರೆಯಲ್ಲಿ ವಿಶೇಷವಾಗಿ ದಾಖಲಾಗಬೇಕಾದ ಅತ್ಯಂತ ಮಹತ್ವದ ಸಂಗತಿ ಇದು. ಇವರು ಯಾವುದೇ ಸೆಮಿನಾರಿಗೆ ಹೋದರೂ ಕೂಡ ಬೇರೆ ಉಪನ್ಯಾಸಕರ ಮಾತುಗಳನ್ನು ಆಲಿಸಿಕೊಳ್ಳುತ್ತಾರೆ. ಜ್ಞಾನದಾಹ ಇರುವವರ ಮೂಲಸ್ವಭಾವ ಇದು. ವಿದ್ಯಾರ್ಥಿ ಸಮೂಹ ಮತ್ತು ನಾವೆಲ್ಲ ದಳವಾಯಿ ಮೇಷ್ಟ್ರಿಂದ ಈ ದೊಡ್ಡ ಗುಣವನ್ನು ಕಲಿಯಬೇಕು; ಅನುಸರಿಸಬೇಕು.

  • ಡಾ. ಬಿ.ಎಂ. ಪುಟ್ಟಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ

Leave a Reply