ಬೆಂಗಳೂರು: ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಸಂಚಾರಿ ಪೊಲೀಸರು ಇದೀಗ ವಾಹನಗಳ ವೇಗ ಮಿತಿಯ ಬಗ್ಗೆ ಗಮನ ಹರಿಸಿದ್ದಾರೆ. ಅತಿಯಾದ ವೇಗದಿಂದ ವಾಹನ ಚಲಾಯಿಸುವುದು ಅಪಘಾತಗಳಿಗೆ ಕಾರಣ ಎಂಬ ವರದಿಗಳ ಹಿನ್ನೆಲೆಯಲ್ಲಿ ವಾಹನಗಳ ವೇಗಮಿತಿ ಗಂಟೆಗೆ 130 ಕಿ.ಮೀ.ಗೆ ಮಿತಿಗೊಳಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇನ್ನು ಮುಂದೆ ಗಂಟೆಗೆ 130 ಕಿ.ಮೀ.ಗಿಂತ ವೇಗವಾಗಿ ಸಂಚರಿಸುವ ಎಲ್ಲಾ ವಿಧದ ವಾಹನ ಚಾಲನೆಗೆ ದಂಡ ಜೊತೆಗೆ ವಾಹನ ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ.
ವಾಹನಗಳ ವೇಗ ಮಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ – 281 (ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ) ಆರೋಪದಡಿ ಎಫ್ಐಆರ್ ದಾಖಲಿಸಲಿದ್ದಾರೆ.
ಕಳೆದ 2022ರಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ 90 ಪ್ರತಿಶತ ಗಂಭೀರ ಅಪಘಾತ ಪ್ರಕರಣಗಳಿಗೆ ಅತಿವೇಗದ ವಾಹನ ಚಾಲನೆ ಕಾರಣ ಎಂಬ ಅಂಶ ಬಯಲಾಗಿತ್ತು. ಅಲ್ಲದೆ ಇತ್ತೀಚೆಗೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಕಾರಿನಲ್ಲಿದ್ದ ಚಾಲಕ ಸಹಿತ ಮೂವರು ಸಾವನ್ನಪ್ಪಿದ್ದರು.
ಇದಕ್ಕೆ ಕಾರಿನ ಚಾಲಕ ಗಂಟೆಗೆ 160 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿರುವುದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವುದು ಕಂಡು ಬಂದಿತ್ತು. ಹೀಗಾಗಿ ಇನ್ನು ಮುಂದೆ ವೇಗ ಮಿತಿಯ ನಿಯಮ ಉಲ್ಲಂಘಿಸುವವರಿಗೆ 1 ಸಾವಿರ ರೂ. ದಂಡ ಅಥವಾ 6 ತಿಂಗಳವರೆಗೆ ಸಜೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ಅಪಘಾತ ಪ್ರಕರಣಗಳಿಗೆ ವಾಹನಗಳ ವೇಗ ಕಾರಣವಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸಾಮಾನ್ಯವಾಗಿ ಯಾವುದೇ ವಾಹನದ ವೇಗ ಗಂಟೆಗೆ 120 ಕಿ.ಮೀ ಮೀರಿದ ಬಳಿಕ ಅಪಾಯಕಾರಿಯಾಗಬಹುದು. ರಾಜ್ಯದಲ್ಲಿ ಈ ನಿಯಮ ಉಲ್ಲಂಘನೆ ಆಗುತ್ತಿರುವುದರಿಂದ ಆಗಸ್ಟ್ 1 ರಿಂದ ವೇಗ ಮಿತಿ ಮೀರುವ ಎಲ್ಲಾ ವಿಧದ ವಾಹನಗಳ ಚಾಲಕ/ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ನಗರ ಹಾಗೂ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳಿಗೆ ಈ ಬಗ್ಗೆ ಸೂಚಿಸಲಾಗಿದೆ. ಅದರನ್ವಯ ವೇಗದ ಮಿತಿ ಮೀರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಮೊದಲ ಬಾರಿಗೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುತ್ತದೆ. ಎರಡು ಅಥವಾ ಮೂರಕ್ಕಿಂತಲೂ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ನ್ಯಾಯಾಂಗ ಬಂಧನವಾಗುವ ಸಾಧ್ಯತೆಯೂ ಇರಲಿದೆ ಎಂದರು.
ನೂತನ ನಿಯಮ ಅನುಷ್ಠಾನಕ್ಕೆ ಇರುವ ಕೆಲ ಸವಾಲುಗಳ ಕುರಿತು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ‘ಬೆಂಗಳೂರು – ಮೈಸೂರು ರಸ್ತೆ, ಏರ್ಪೋರ್ಟ್ ರಸ್ತೆ ಸೇರಿದಂತೆ ಕೆಲವು ರಸ್ತೆಗಳಲ್ಲಿ ರಾತ್ರಿ ವೇಳೆ ವೇಗ ಮಿತಿ ಮೀರುವವರ ವಿರುದ್ಧ ಅತ್ಯಾಧುನಿಕ ಕ್ಯಾಮರಾಗಳ ಸಹಾಯದಿಂದ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದರು.
ಇನ್ನೂ ಕೆಲವು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಪೂರ್ಣವಾಗಿ ಕ್ಯಾಮೆರಾಗಳ ವ್ಯವಸ್ಥೆ ಇಲ್ಲ. ಅಂಥಹ ರಸ್ತೆಗಳಲ್ಲಿ ಹಗಲಿನಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ವೇಗ ಮಿತಿ ಮೀರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದು. ಅದೇ ರಾತ್ರಿ ಸಂದರ್ಭದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವುದೂ ಸಹ ಕಷ್ಟ ಸಾಧ್ಯವಾಗುವುದರಿಂದ ಸ್ವಲ್ಪ ಸವಾಲು ಎನಿಸಬಹುದು. ಆದರೂ ಸಹ ಸಾಧ್ಯವಾದಷ್ಟು ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರ ಪ್ರಯತ್ನ ನಿರಂತರವಾಗಿರಲಿದೆ ಎಂದರು.




