ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಕಠಿಣ ನಿರ್ಧಾರ

11 months ago

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಏರ್ಪಡಿಸಿದ್ದ ಆರ್ ಸಿ ಬಿ ತಂಡದ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಮತ್ತೊಂದು ಕಠಿಣ ನಿರ್ಧಾರ ಹೊರಬಿದ್ದಿದೆ.

ಐಪಿಎಲ್ ಗೆದ್ದ ಆರ್ ಸಿ ಬಿ ತಂಡಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅಭಿನಂದನೆ ಸಮಾರಂಭ ಏರ್ಪಡಿಸಬೇಕು ಎಂಬ ವಿಷಯದಲ್ಲಿ ಅತಿಯಾದ ಮುತುವರ್ಜಿ ವಹಿಸಿದರು ಎಂಬ ಆರೋಪಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ, ಗೋವಿಂದ ರಾಜು ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ಐಪಿಎಲ್ ಎನ್ನುವುದು ಸಂಪೂರ್ಣ ಖಾಸಗಿಯಾಗಿ ನಡೆಸುವ ಕ್ರೀಡೆ. ಇದರಲ್ಲಿನ ತಂಡಗಳನ್ನು ಹಲವು ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಮುನ್ನಡೆಸುತ್ತಿದ್ದಾರೆ. ಆಟಗಾರರಿಗೆ ಯಾವುದೇ ರಾಜ್ಯ ಮತ್ತು ದೇಶದ ಗಡಿ ಇಲ್ಲ ಯಾವುದೇ ತಂಡದಲ್ಲಿ ತಾವು ಇರುವಷ್ಟು ದಿನ ಆ ತಂಡದ ಪರವಾಗಿ ಆಡಬೇಕು ಎನ್ನುವುದಷ್ಟೇ ಇರುತ್ತದೆ. ಇಂತಹ ಸೀಮಿತ ಉದ್ದೇಶದ ತಂಡ ಕಪ್ ಗೆದ್ದಾಗ ಅದನ್ನು ರಾಜ್ಯ ಸರ್ಕಾರದ ಸಾಧನೆ, ಕರ್ನಾಟಕಕ್ಕೆ ಸಿಕ್ಕ ಕಿರೀಟ ಎಂಬಂತೆ ಬಿಂಬಿಸಲು ಹೊರಟಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಸಮಯದಲ್ಲಿ ಈ ಎಲ್ಲದಕ್ಕೂ ಕಾರಣ ರಾಜ್ಯ ಒಲಂಪಿಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಗೋವಿಂದರಾಜು ಎಂದು ಗೊತ್ತಾಗಿದೆ. 

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಅವರು ಆರ್ ಸಿ ಬಿ ತಂಡಕ್ಕೆ ಅಭಿನಂದನೆ ಸಲ್ಲಿಸಲು ತೋರಿಸಿದ ಉತ್ಸುಕತೆ ಇಂತಹ ಎಲ್ಲ ವಿದ್ಯಮಾನಗಳಿಗೆ ಕಾರಣ ಎಂಬ ವರದಿಗಳ ಬೆನ್ನಲ್ಲೇ ಸಿದ್ದರಾಮಯ್ಯ ಆಕ್ರೋಶಗೊಂಡು ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿದ್ದಾರೆ. ಎಂದು

ಮತ್ತೊಂದಡೆ ಕಾಲ್ತುಳಿತ ಹಾಗೂ ವಿಜಯೋತ್ಸವ ಸಮಾರಂಭ ಕುರಿತು ರಾಜ್ಯ ಗುಪ್ತದಳ ಸೂಕ್ತ ರೀತಿಯಲ್ಲಿ ಕೆಲಸ ಮಾಡಲಿಲ್ಲ. ಪೊಲೀಸರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಕಾಲದಿಂದ ಕಾಲಕ್ಕೆ ಸರಿಯಾದ ಮಾಹಿತಿ ನೀಡಲಿಲ್ಲ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಸೇರುವ ಕುರಿತು ಖಚಿತ ಮಾಹಿತಿ ನೀಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ರಾಜ್ಯ ಗುಪ್ತದಳದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಈ ಹುದ್ದೆಯ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಆ ಹುದ್ದೆಯಿಂದ ವರ್ಗಾವಣೆ ಮಾಡಿದ್ದಾರೆ. ಗುಪ್ತಚರ ಇಲಾಖೆ ಎಡಿಜಿಪಿಯಾಗಿ ರವಿಕುಮಾರ್ ಅವರನ್ನು ನೇಮಿಸಲಾಗಿದೆ.

Leave a Reply