ಅಗಲಿದ ಗಣ್ಯರಿಗೆ ಭಾವಪೂರ್ಣ ಸಂತಾಪ ಸಲ್ಲಿಸಿದ ಜನಪ್ರತಿನಿಧಿಗಳು

3 months ago

ಬೆಂಗಳೂರು: ರಾಜ್ಯಪಾಲರ ಭಾಷಣ ಕುರಿತಂತೆ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಗದ್ದಲ ಹಾಗೂ ಮಾತಿನ ಚಕಮಕಿಯ ನಡುವೆಯೇ ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಭೀಮಣ್ಣ ಖಂಡ್ರೆ, ವಿಧಾನಸಭೆಯ ಮಾಜಿ ಸದಸ್ಯರಾದ ಕೆ.ಲಕ್ಕಣ್ಣ ಮತ್ತು ವಿಶ್ವ ವಿಖ್ಯಾತ ಪರಿಸರ ವಿಜ್ಞಾನಿ ಪ್ರೊ ಮಾಧವ ಗಾಡ್ಗೀಳ್‌ ಅವರ ನಿಧನಕ್ಕೆ  ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು.

ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರೆ, ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌‍ ಶಾಸಕರು ಆರೋಪಿಸಿ ಪರಸ್ಪರ ಮಾತನಾಡುವ ವೇಳೆ ಉಂಟಾದ ಗದ್ದಲದ, ಗೊಂದಲದ ನಡುವೆಯೇ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡರು.

ಕಳೆದ ವಿಧಾನಸಭೆಯ ಅಧಿವೇಶನದ ನಂತರ ಡಾ.ಭೀಮಣ್ಣ ಖಂಡ್ರೆ, ಕೆ.ಲಕ್ಕಣ್ಣ ಮತ್ತು ಪ್ರೊ ಮಾಧವ ಗಾಡ್ಗೀಳ್‌ ಅವರ ನಿಧನವಾಗಿರುವುದನ್ನು ಅತ್ಯಂತ ವಿಷಾದದಿಂದ ಸದನಕ್ಕೆ ತಿಳಿಸಿದರು.

ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭೀಮಣ್ಣ ಖಂಡ್ರೆ ಅವರು 103 ವರ್ಷಗಳ ಕಾಲ ಬದುಕಿದ್ದ ಶತಾಯುಷಿ. ನಾಲ್ಕು ಬಾರಿ ಶಾಸಕರಾಗಿದ್ದರು. ಮಹಾತಗಾಂಧೀಜಿಯಿಂದ ಪ್ರೇರಣೆ ಪಡೆದು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಅವರ ಗುಣಗಾನ ಮಾಡಿದರು.ಅದೇ ರೀತಿ ಕೆ.ಲಕ್ಕಣ್ಣ ಹಾಗೂ ಪ್ರೊ. ಮಾಧವ ಗಾಡ್ಗೀಳ್‌ ಅವರ ಗುಣಗಾನ ಮಾಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ಬಳಿಕ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ಬಿ.ವೈ.ವಿಜಯೇಂದ್ರ, ಸಚಿವರಾದ ಶರಣಪ್ರಕಾಶ್‌ ಪಾಟೀಲ್‌, ಕೆ.ಜೆ.ಜಾರ್ಜ್‌, ಜಿ.ಟಿ.ದೇವೇಗೌಡ, ಎಂ.ಟಿ.ಕೃಷ್ಣಪ್ಪ, ಬಿ.ಆರ್‌.ಪಾಟೀಲ್‌, ಶರಣು ಸಲಗರ ಮೊದಲಾದ ಶಾಸಕರು ಪಕ್ಷಭೇದ ಮರೆತು ಸಂತಾಪ ಸೂಚಿಸಿದರು. ಅಗಲಿದ ಗಣ್ಯರ ಗೌರವಾರ್ಥ ಸದನದಲ್ಲಿ ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು.

Leave a Reply