ಡಾ. ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಬೇಕು. ಯಾಕೆ ಆಗಬೇಕು ಅಂತ ಸರಕಾರ ಅಥವಾ ಯಾರಾದರೂ ಪ್ರಶ್ನಿಸಿದರೆ ಅವರ ಆತ್ಮಕಥನ “ಕಾಗೆ ಮುಟ್ಟಿದ ನೀರು” ನೀವೊಮ್ಮೆ ಓದಿ ಖಂಡಿತ ನಿಮ್ಮ ಪರಿಜ್ಞಾನಕ್ಕೆ ಬಂದೆ ಬರುತ್ತದೆ ಎಂದು ಪ್ರಶ್ನಿಸಿದವರಿಗೆ ಸೂಚಿಸಬಯಸುತ್ತೇನೆ.

ಸಣ್ಣ ಹಳ್ಳಿಯಾದ ಬಂಟಮಲೆಯಿಂದ ದೆಹಲಿಯವರೆಗೆ ಬೆಳೆದು ದೇಶ-ವಿದೇಶಗಳ ಸುತ್ತಿ ಅನೇಕ ಕಾರ್ಯಗಳನ್ನು ಮಾಡಿದ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಳಗಿಸಿದ್ದು ಸಹ ವಿಶೇಷ. ಅಮೆರಿಕನ್ ಆಫ್ ಇಂಡಿಯನ್ ಸ್ಟಡೀಸ್ನಲ್ಲಿನ ಅವರ ಸೇವೆ, JNU ಅಲ್ಲಿ ಕನ್ನಡಪೀಠ ಕಟ್ಟಿದ್ದು ಒಂದು ದಾಖಲೆ, ಇತಿಹಾಸವೇ ಸರಿ. ದೆಹಲಿಯಲ್ಲಿದ್ದುಕೊಂಡೆ ಕನ್ನಡ ನಾಡು-ನುಡಿ ಬಗ್ಗೆ ಚಿಂತಿಸುವ, ಜಾಗೃತಿಗೊಳಿಸುವ ಚುನಾವಣಾ ಸಮಯದಲ್ಲಿ “ಎದ್ದೇಳು ಕರ್ನಾಟಕ” ಎಂಬ ಅಭಿಯಾನದ ಮೂಲಕ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಕಾಂಗ್ರೆಸ್ ಆಡಳಿತ ಬರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಿಳಿಮಲೆ ಅವರ ಪಾಲೂ ದೊಡ್ಡದಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಅವರ ಶ್ರಮವನ್ನು ಸ್ಮರಿಸಿ ಪ್ರಾಧಿಕಾರಕ್ಕೆ ಅವಕಾಶ ಮಾಡಿಕೊಡಬೇಕು.
ಯಕ್ಷಗಾನದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಕಲಾವಿದ, ಲೇಖಕ, ಚಿಂತಕ, ಸಂಶೋಧಕ, ಜಾನಪದ ಸಂಶೋಧಕ, ಅಪ್ಪಟ ಕನ್ನಡವಾದಿ, ಮಹಿಳಾಪರರಾದ ಹೋರಾಟಗಾರ ಹಾಗೂ ನೇರ-ನಿಷ್ಠುರವಾದಿ ಆಗಿರುವಂತಹ ಇಂತಹ ವ್ಯಕ್ತಿ ಯಾವ ಶಿಫಾರಸ್ಸು ಇಲ್ಲದೆಯೂ ಆಯ್ಕೆಯಾಗಬೇಕೆಂಬುದೇ ಅಪ್ಪಟ ಕನ್ನಡದ ಅಸ್ಮಿತೆಯ ಅರಿವು ಉಳ್ಳವರ ಬಹುತೇಕರ ಅಪೇಕ್ಷೆ. ಆದರೆ ಇಂದಿನ ವಾಸ್ತವ ರಾಜಕಾರಣದಲ್ಲಿ ಇದೆಲ್ಲಾ ಸಾಧ್ಯವಾ, ಸಾಧ್ಯ ಆಗುವುದಾದರೆ ಬಿಳಿಮಲೆ ಅವರಿಗೆ ಅದು ದೊಡ್ಡ ಗೌರವ.
ಕನ್ನಡ ನಾಡಿನ ಅಸ್ಮಿತೆ ದೆಹಲಿಯ ತನಕ ಮುಟ್ಟಿ ಸದ್ದು ಮಾಡಿ ಉಳಿಯಬೇಕೆಂದರೆ ಸಮರ್ಥರು ಹಾಗೂ ಅನುಭವಸ್ಥರು ಆಗಿರುವ ಪುರುಷೋತ್ತಮ ಬಿಳಿಮಲೆಯವರು ಸೂಕ್ತರು ಅರ್ಹರು ಎಂದೇ ಹೇಳಬಹುದು. ಹಾಗಾಗಿ ಕನ್ನಡ ನೆಲದ ಸಂಸ್ಕೃತಿಯನ್ನು ಸೂಕ್ತ ಸಮಯದಲ್ಲಿ ಉಳಿಸಲು ಪಣತೊಡುತ್ತಿರುವ ಎಲ್ಲ ಅರ್ಹತೆ ಇರುವ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ಅವರ ಅನುಭವವನ್ನು ಕನ್ನಡಕ್ಕೆ ಸದುಪಯೋಗಪಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ “ಕನ್ನಡ ಅಭಿವೃದ್ಧಿ ಪ್ರಾಧಿಕಾರ”ದ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು. ಅವರ ಸೇವೆ ಕನ್ನಡಕ್ಕೆ ಈ ಸಕಾಲದಲ್ಲಿ ಅಗತ್ಯವಿದೆ. ಇದರ ನೆಪದಲ್ಲಾದರೂ ದೆಹಲಿ ಬಿಟ್ಟು ಅವರು ಬರಬಹುದು. ಈ ವಿಷಯವಾಗಿ ರಾಜ್ಯ ಕನ್ನಡಪರ ಹೋರಾಟಗಾರರ ನಿಯೋಗ ಹಾಗೂ ಸರ್ಕಾರದ ಗಮನಸೆಳೆಯುವಂತಹ ಹೋರಾಟಗಾರರು, ಚಿಂತಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತರಬೇಕಾದದ್ದು ಕೂಡ ತಮ್ಮ ಕರ್ತವ್ಯ.
- ಶಿವರಾಜ್ ಮೋತಿ, ಬುರ್ರಕಥಾ, ಜನಪದ ಕಲಾ ಟ್ರಸ್ಟ್ ಕಾರ್ಯದರ್ಶಿ




