ನಕಲಿ ಔಷಧ ಕಂಪೆ‌ನಿಗಳು, ಮಾರಾಟಗಾರರ ವಿರುದ್ಧ ತ್ವರಿತ ಕಾನೂನು ಕ್ರಮಕ್ಕೆ ಸಿದ್ಧತೆ: ದಿನೇಶ್ ಗುಂಡೂರಾವ್

1 year ago

ಬೆಂಗಳೂರು: ನಕಲಿ ಔಷಧ ಕಂಪೆ‌ನಿಗಳು ಹಾಗೂ ಮಾರಾಟಗಾರರ ವಿರುದ್ಧ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದಡಿ ತ್ವರಿತ ಕಾನೂನು ಕ್ರಮ ಕೈಗೊಳ್ಳಲು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಲು ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೇಲ್ಮನೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ನಕಲಿ ಔಷಧ ತಯಾರಿಕಾ ಕಂಪೆನಿಗಳು ಹಾಗೂ ಮಾರಾಟಗಾರರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಕಾಂಗ್ರೆಸ್ ಸದಸ್ಯ ಎಸ್.ವಿ‌.ರವಿ ಕೇಳಿದ  ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಮೂರು ವರ್ಷಗಳಲ್ಲಿ  ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಮಾಡುತ್ತಿದ್ದ 21 ಪ್ರಕರಣಗಳನ್ನ ಪತ್ತೆ ಹಚ್ವಲಾಗಿದೆ ಎಂದರು.

ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದಡಿ  ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವೆಲ್ಲವೂ ವಿಚಾರಣೆ ಹಂತದಲ್ಲಿದೆ.‌ ನಕಲಿ ಔಷಧಿ ತಯಾರಕರ ಹಾಗೂ ಮಾರಾಟಗಾರರ ವಿರುದ್ಧ ತ್ವರಿತಗತಿ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಲು ಕಾನೂನು ಇಲಾಖೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಅಲ್ಲದೆ ಗುಣಮಟ್ಟವಲ್ಲದ ಔಷಧ ಸರಬರಾಜು ಮಾಡಿದ ಕಂಪೆನಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 772 ಅನುಮೋದಿತ ಔಷಧಗಳಿದ್ದು, ಈ ಪೈಕಿ 475 ಔಷಧಗಳ ದಾಸ್ತಾನು ಇದೆ. ಈ ವರ್ಷದಿಂದ ಅನುಮೋದಿತ ಔಷಧಗಳ ಸಂಖ್ಯೆಯನ್ನು 1032ಕ್ಕೆ ಹೆಚ್ಚಿಸುವ ತೀರ್ಮಾನ ಮಾಡಿದ್ದೇವೆ. ಔಷಧಗಳ ಕೊರತೆಯಾದರೆ ಅವುಗಳನ್ನು ಬೇರೆ ಜಿಲ್ಲೆಯಿಂದ ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಉಗ್ರಾಣಗಳಲ್ಲಿ ಔಷಧ ಕೊರತೆ ಬಗ್ಗೆ ಉಪಪ್ರಶ್ನೆಗೆ ಉತ್ತರಿಸಿದರು.

Leave a Reply