ಹೆಣ್ಣು ಭ್ರೂಣ ಹತ್ಯೆ, ಭ್ರೂಣ ಲಿಂಗ ಪತ್ತೆ ಮಟ್ಟಹಾಕಲು ಕಾರ್ಯೋನ್ಮುಖ: ದಿನೇಶ್ ಗುಂಡೂರಾವ್

2 years ago

ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಭ್ರೂಣ ಲಿಂಗ ಪತ್ತೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ನಮ್ಮ ಆರೋಗ್ಯ ಇಲಾಖೆ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಮಾತ್ರೆ ಮಾರಾಟದ ಲೆಕ್ಕ ನೀಡದ ಸಗಟು ಔಷಧ ಮಾರಾಟಗಾರರು ಹಾಗೂ ಚಿಲ್ಲರೆ ಔಷಧ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 4 ಔಷಧ ಅಂಗಡಿಗಳನ್ನು ಬಂದ್‌ ಮಾಡಿಸಲಾಗಿದ್ದು 30 ಅಂಗಡಿಗಳ ಲೈಸೆನ್ಸ್‌ ಸಸ್ಪೆಂಡ್‌ ಮಾಡಲಾಗಿದೆ. ಜೊತೆಗೆ ನಾಲ್ವರು ಔಷಧ ವಿತರಕರ ವಿರುದ್ಧ ಕೇಸ್‌ ದಾಖಲಿಸಲಾಗುತ್ತಿದೆ ಎಂದಿದ್ದಾರೆ.

ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಮಂಡ್ಯ ಜಿಲ್ಲೆಯಲ್ಲಿ ಔಷಧ ಸಗಟು ವರ್ತಕರು, ಮೆಡಿಕಲ್‌ ಸ್ಟೋರ್‌ಗಳ ಕಳ್ಳದಂಧೆಗಳನ್ನು ಬೆಳಕಿಗೆ ತಂದಿದ್ದಾರೆ. ರಾಜ್ಯಾದ್ಯಂತ ಭ್ರೂಣಲಿಂಗ ಪತ್ತೆ ಸಂಪೂರ್ಣ ತಡೆಗೆ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ಹಲವಾರು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಜೊತೆಗೆ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗೆ ಆಸ್ಪತ್ರೆಗಳು, ಸ್ಕ್ಯಾನಿಂಗ್‌ ಸೆಂಟರ್‌ ಮೇಲೆ ನಿಗಾ ವಹಿಸಲಾಗಿದೆ ಎಂದಿದ್ದಾರೆ.

ಸಾಮಾಜಿಕ ಪಿಡುಗಾಗಿರುವ ಹೆಣ್ಣು ಭ್ರೂಣ ಹತ್ಯೆ ಹಾಗೂ ಭ್ರೂಣ ಲಿಂಗ ಪತ್ತೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ತಡೆಯುವುದೇ ನಮ್ಮ ಆರೋಗ್ಯ ಇಲಾಖೆ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಸರ್ವ ರೀತಿಯಲ್ಲಿಯೂ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದಿದ್ದಾರೆ.

Leave a Reply