ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ನಿಧನರಾಗಿ 60 ವರ್ಷಗಳು ಕಳೆದಿವೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಟ್ಟಿರುವ ಸಂಸ್ಥೆಗಳು ನಮ್ಮ ದೇಶದ ಜನರ ಬದುಕನ್ನ ಕಟ್ಟಿಕೊಡುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸಿರುವುದನ್ನ ಯಾರು ಸಹ ಅಲ್ಲ ಗೆಳೆಯವಂತಿಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ತಿಳಿಯದಂತಹ ಮತ್ತು ತಿಳಿದಿದ್ದರೂ ಪೂರ್ವಗ್ರಹ ಪೀಡಿತರಾಗಿ ಮಾತನಾಡುವಂತಹ ಮಂದಿ ದೇಶಕ್ಕೆ ನೆಹರುರವರ ಕೊಡುಗೆಯ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಆದರೆ ಅವರು ಒಂದು ಬಾರಿ ಸರಿಯಾದ ರೀತಿಯಲ್ಲಿ ನೆಹರುರವರನ್ನು ಓದಿದರೆ ಆಗ ಅವರಿಗೆ ನೆಹರುರವರ ಕೊಡುಗೆ ಅರಿವಾಗುತ್ತದೆ.
ಇಂದು ದೇಶ ಪ್ರಗತಿಯಲ್ಲಿದೆ, ಆರ್ಥಿಕವಾಗಿ ಬಲಿಷ್ಠವಾಗಿದೆ, ಜಗತ್ತಿನ ಮುಂದೆ ತಲೆಯೆತ್ತಿ ನಿಲ್ಲುತ್ತಿದೆ ಎಂಬ ಎಲ್ಲ ಹೆಗ್ಗಳಿಕೆಗಳ ಹಿಂದೆ ನೆಹರುರವರ ದೂರದೃಷ್ಟಿತ್ವದ ಮುಂದಾಲೋಚನೆಯ ಯೋಜನೆಗಳು ಪ್ರಮುಖ ಪಾತ್ರವನ್ನು ವಹಿಸಿರುವುದನ್ನ ಗಮನಿಸಬೇಕಾಗಿದೆ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆ ಪ್ರಮಾಣ ತುಂಬಾ ಕೆಳಮಟ್ಟದಲ್ಲಿ ಇತ್ತು. ನಿರುದ್ಯೋಗ ದೊಡ್ಡ ಸಮಸ್ಯೆಯಾಗಿತ್ತು. ವೈಜ್ಞಾನಿಕವಾಗಿ ಮತ್ತು ಹೊಸ ರೀತಿಯ ಆಲೋಚನೆಯ ಕ್ರಮಗಳಿಗಾಗಿ ಸಂಸ್ಥೆಗಳು ಇರಲಿಲ್ಲ, ಅಣೆಕಟ್ಟುಗಳು ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಪ್ರಗತಿಗೆ ಅವರು ರೂಪಿಸಿದ ಕಾರ್ಯಕ್ರಮಗಳು ಅನುಷ್ಠಾನಗೊಳಿಸಿದ ಯೋಜನೆಗಳು ಒಂದಲ್ಲ ಎರಡಲ್ಲ ಹತ್ತಾರು; ಅವರು ಬರಿಯ ಮಾತುಗಾರರಾಗಿರಲಿಲ್ಲ ಆಡಳಿತಗಾರರಾಗಿದ್ದರು. ಸಣ್ಣತನದ ನಡವಳಿಕೆ ಮತ್ತು ಕೀಳುಮಟ್ಟದ ಟೀಕೆಗಳನ್ನು ಎಂದೂ ಮಾಡುತ್ತಿರಲಿಲ್ಲ. ಅವರ ಮಾತಿನಲ್ಲಿ ಗಾಂಭೀರ್ಯವಿರುತ್ತಿತ್ತು.
ನೆಹರುರವರು ಏನು ಮಾಡಿದ್ದಾರೆ ಎಂದು ಕೇಳುವವರು ಅವರ ಕಾಲದಲ್ಲಿ ಸ್ಥಾಪಿಸಿದ ಸಾರ್ವಜನಿಕ ಸಂಸ್ಥೆಗಳು, ಸಾರ್ವಜನಿಕ ಉದ್ಯಮಗಳು, ಲಕ್ಷಾಂತರ ಮಂದಿಗೆ ಉದ್ಯೋಗವನ್ನು ನೀಡಿತು. ಇಂದಿಗೂ ಅಂದು ಕಾರ್ಖಾನೆಗಳಲ್ಲಿ ನೌಕರರಾಗಿ ದುಡಿದು, ಪಿಂಚಣಿಯನ್ನ ಪಡೆಯುತ್ತಿರುವ ಒಂದಷ್ಟು ಮಂದಿ ನೆಹರುರವರನ್ನ ನೆನೆಯುತ್ತಾರೆ. ಕೈಗಾರಿಕೆಗಳನ್ನ ಸ್ಥಾಪಿಸಿ ಉದ್ಯೋಗವನ್ನು ಕೊಡುವುದರ ಜೊತೆಗೆ ಕೈಗಾರಿಕಾ ಕ್ರಾಂತಿಯನ್ನೇ ಮಾಡಿದರು. ಇದು ನೆಹರುರವರ ಕೊಡುಗೆ.
ಆರೋಗ್ಯ ಕ್ಷೇತ್ರಕ್ಕಾಗಿ ಏಮ್ಸ್ ಅಂತಹ ಸಂಸ್ಥೆಗಳನ್ನು ಸ್ಥಾಪಿಸಿದರು. ಸಂಶೋಧನೆಗಾಗಿ ಸಂಸ್ಥೆಗಳನ್ನು ಸ್ಥಾಪಿಸಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಇದರ ಜೊತೆಗೆ ಬಾಹ್ಯಾಕಾಶ ಸಂಸ್ಥೆಗಳ ಸ್ಥಾಪನೆ, ದೇಶದ ರಕ್ಷಣೆಗಾಗಿ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಸಂಸ್ಥೆಗಳು, ಟಾಟಾ ಅಣು ಪರೀಕ್ಷಾ ಕೇಂದ್ರ ಇವುಗಳು ನೆಹರುರವರ ಕೊಡುಗೆಗಳು.
ವಿದ್ಯುತ್ ಉತ್ಪಾದನಾ ಘಟಕಗಳು, ಬೃಹತ್ ಪ್ರಮಾಣದ ಅಣೆಕಟ್ಟುಗಳು, ನೀರಾವರಿಗಾಗಿ ವಿಶೇಷವಾದ ಯೋಜನೆಗಳು ಇವುಗಳು ನೆಹರುರವರ ಕೊಡುಗೆಗಳು.
ಅಲಿಪ್ತ ನೀತಿಯ ಮೂಲಕ ಭಾರತದ ವಿದೇಶಾಂಗ ನೀತಿಯನ್ನ ಗಟ್ಟಿಗೊಳಿಸಿದರು. ವಿಶ್ವದಲ್ಲಿಯೇ ನಮ್ಮದೇ ಆದಂತಹ ಮಾದರಿಯನ್ನು ಅನುಸರಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಮಾಡುವುದರ ಮೂಲಕ ಭಾರತದ ಘನತೆಯನ್ನು ಹೆಚ್ಚಿಸಿದರು. ಭಾರತ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೇಶವೆಂಬ ಕೀರ್ತಿಗೆ ಪಾತ್ರವಾಯಿತು.
ಆಹಾರ ಉತ್ಪಾದನೆಗೆ ಚಾಲನೆಯನ್ನು ನೀಡಿದರು, ಕ್ಷೀರಕ್ರಾಂತಿಗೆ ಬೇಕಾದಂತಹ ಅಡಿಪಾಯವನ್ನು ಹಾಕಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷವಿಲ್ಲದೆ ಸಾಮರಸ್ಯದೊಂದಿಗೆ ಆಡಳಿತವನ್ನು ನಡೆಸಿ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಬದುಕಿದ್ದರು. ವಿರೋಧ ಪಕ್ಷದವರನ್ನು ಎಂದೂ ಸಹ ಶತ್ರುಗಳು ಎಂದು ಭಾವಿಸಿರಲಿಲ್ಲ. ಅವರೊಂದಿಗೂ ಸಹ ಸಿದ್ದಾಂತದಲ್ಲಿ ಅಭಿಪ್ರಾಯ ಭೇದವನ್ನು ಹೊಂದಿದ್ದರು ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಆತ್ಮೀಯತೆಯಿಂದ ಇದ್ದರು. ಮಾನವೀಯ ನೆಲೆಯಲ್ಲಿ ಎಲ್ಲರನ್ನೂ ಕಾಣುತ್ತಿದ್ದರು.
ಶ್ರೀಮಂತ ಮನೆಯಲ್ಲಿ ಹುಟ್ಟಿದ್ದರು ಗಾಂಧೀಜಿರವರ ಸಂಪರ್ಕಕ್ಕೆ ಬಂದ ನಂತರ ಸರಳತೆಯನ್ನು ಮೈಗೂಡಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡು ಗಾಂಧೀಜಿಯವರ ಪ್ರೀತಿಯ ಅನುಯಾಯಿಯಾದರು.
ಇವರ ಆಲೋಚನೆಗಳು ವೈಜ್ಞಾನಿಕವಾಗಿರುತ್ತಿತ್ತು. ಇವರ ಚಿಂತನೆಗಳು ದೂರದೃಷ್ಟಿತ್ವದಿಂದ ಕೂಡಿತ್ತು. ಒಬ್ಬ ರಾಜಕಾರಣಿಯಾಗಿರದೇ ಒಬ್ಬ ದೇಶ ಕಂಡ ಮುತ್ಸದ್ದಿ ನಾಯಕರಾಗಿದ್ದರು. ಪಕ್ಷ ರಾಜಕಾರಣವನ್ನು ಮೀರಿ ದೇಶದ ಚಿಂತನೆಯನ್ನು ನಡೆಸಿದರೆ ಸಣ್ಣತನ ಎಲ್ಲಿಯೂ ಸಹ ಇವರ ಬದುಕಿನಲ್ಲಿ ಕಾಣಲು ಸಾಧ್ಯವಿಲ್ಲ. ವೈರತ್ವದ ಮಾತುಗಳು ಇವರಿಂದ ಎಂದೂ ಬಂದಿರುವುದಿಲ್ಲ. ಚುನಾವಣೆಗಾಗಿ ಅಥವಾ ಮತ ಗಳಿಕೆಗಾಗಿ ಧರ್ಮವನ್ನು ಎಂದೂ ಬಳಸಿದವರಲ್ಲ. ಎಂತಹ ಸಂದರ್ಭದಲ್ಲಿಯೂ ತಮ್ಮ ಜಾತ್ಯತೀತ ನಿಲುವಿನಿಂದ ವಿಚಲಿತರಾಗಿರಲಿಲ್ಲ. ತಮ್ಮ ಸಿದ್ಧಾಂತ ಮತ್ತು ನಂಬಿಕೆಗಳಿಗೆ ಸದಾ ಬದ್ಧರಾಗಿದ್ದರು.
ನೆಹರುರವರ ವೈಜ್ಞಾನಿಕ ಚಿಂತನೆಗಳು ಅವರ ನಡವಳಿಕೆ ಅವರ ಕಾರ್ಯವೈಖರಿ ಇವುಗಳ ಬಗ್ಗೆ ನಮ್ಮ ನಾಡಿನ ರಾಷ್ಟ್ರಕವಿ ಜಗದ ಕವಿ ಕುವೆಂಪುರವರು ಸಹ ಅತ್ಯಂತ ಅಭಿಮಾನದ ಮಾತುಗಳನ್ನಾಡಿದ್ದಾರೆ. ಇದೇ ರೀತಿಯಲ್ಲಿ ದೇಶದ ಮತ್ತು ವಿಶ್ವದ ಅನೇಕ ನಾಯಕರು ಇವರ ವ್ಯಕ್ತಿತ್ವವನ್ನು ತಮ್ಮದೇ ಆದ ಮಾತುಗಳಲ್ಲಿ ವರ್ಣಿಸಿರುತ್ತಾರೆ.
ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸದ, ಸಂಕಷ್ಟದ ಸಮಯದಲ್ಲಿ ದೇಶವನ್ನ ಕಟ್ಟಲು ಯಾವುದೇ ಕೊಡುಗೆಯನ್ನ ನೀಡದ ಕೆಲವು ಮಂದಿ ಈಗ ದೇಶದ ಅಭಿವೃದ್ಧಿ ತಮ್ಮಿಂದಲೇ, ತಾವೇ ಜಗತ್ತಿನ ನಾಯಕರು ಎಂಬ ರೀತಿಯಲ್ಲಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿದ್ದಾರೆ. ಆದರೆ ದೇಶದ ಜನರಿಗೆ ಗೊತ್ತಿದೆ ಕೈಗಾರಿಕೆಗಳನ್ನ ಸ್ಥಾಪಿಸಿದವರು ಯಾರು, ಅಣೆಕಟ್ಟು ಕಟ್ಟಿದವರು ಯಾರು, ಸಂಶೋಧನಾ ಸಂಸ್ಥೆಗಳನ್ನ ಸ್ಥಾಪಿಸಿದವರು ಯಾರು, ಭಾರತ ದೇಶವನ್ನ ಆಧುನಿಕ ರಾಷ್ಟ್ರವನ್ನಾಗಿ ಯಾರ ಪಾತ್ರ ಎಷ್ಟಿದೆ ಎನ್ನುವುದು ತಿಳಿಯಲಾರದಷ್ಟು ಭಾರತದ ದೇಶದ ಜನತೆ ದಡ್ಡರಲ್ಲ.
ಯಾವುದೋ ಒಂದೆರಡು ಘಟನೆಗಳನ್ನು ಸದಾಕಾಲ ಪ್ರಸ್ತಾಪಿಸುತ್ತಾ ನೆಹರುರವರ ವ್ಯಕ್ತಿತ್ವವನ್ನ ಸಣ್ಣದಾಗಿ ಬಿಂಬಿಸುವಂತಹ ಪೂರ್ವಗ್ರಹ ಪೀಡಿತ ಮನಸ್ಸುಗಳಿಗೆ ನೆಹರುರವರು ಏನೂ ಮಾಡಿಲ್ಲ ಎನ್ನುವುದು ಅವರುಗಳ ಅಭಿಪ್ರಾಯವಾಗಿರುತ್ತದೆ ಅಷ್ಟೇ.
ಅಧಿಕಾರದಲ್ಲಿದ್ದ ಜನ ಬರೀ ಮಾತನಾಡಿದರೆ ಆ ಮಾತುಗಳು ಯಾರಿಗೂ ಬದುಕು ಕಟ್ಟಿಕೊಡುವುದಿಲ್ಲ. ತುಂಬಾ ದಿನ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಸಂಸ್ಥೆಗಳನ್ನ ನಿರ್ಮಿಸಿದರೆ ಅಧಿಕಾರದಲ್ಲಿದ್ದವರು ಸತ್ತು ಹೋದರು ಆ ಸಂಸ್ಥೆಗಳ ಮೂಲಕ ಜೀವಂತವಾಗಿರುತ್ತಾರೆ ಎನ್ನುವುದಕ್ಕೆ ನೆಹರುರವರೇ ಉದಾಹರಣೆಯಾಗಿದ್ದಾರೆ. ಅವರು ಹೋಗಿ ಆರು ದಶಕ ಕಳೆದರೂ ಸಂಸ್ಥೆಗಳಿಂದ ಮುಂದಿನ ನೂರಾರು ವರ್ಷ ಭಾರತ ದೇಶದ ಆಸ್ತಿಗಳಾಗಿ ಉಳಿದುಕೊಂಡಿರುತ್ತದೆ.
- ಕೆ ಎಸ್ ನಾಗರಾಜ್, ಬೆಂಗಳೂರು




