ಕೊರೊನಾ ಅಂಕಿ-ಅಂಶ ಮುಚ್ಚಿಡುವ ಉದ್ದೇಶ ಇಲ್ಲ: ಸುಧಾಕರ್

5 years ago

ಬೆಂಗಳೂರು: ಸರ್ಕಾರಕ್ಕೆ ಕೊರೊನಾ ಅಂಕಿ-ಅಂಶ ಮುಚ್ಚಿಡುವ ಉದ್ದೇಶವಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ರಾಜಕೀಯ ಲಾಭಕ್ಕಾಗಿ ಸುಳ್ಳು ಅಪಾದನೆಗಳನ್ನು ಮಾಡುವುದು ಸರಿಯಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿಪಕ್ಷ‌ ನಾಯಕ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಿರುವ ಆಪಾದನೆಗೆ ಟ್ವೀಟ್ ನಲ್ಲೇ ಪ್ರತಿಕ್ರಿಯಿಸಿರುವ ಸುಧಾಕರ್, ಈ ರೀತಿ ಆಪಾದನೆಗಳನ್ನು ಮಾಡುವುದು ಕೊರೊನಾ ಯೋಧರಿಗೆ ಮಾಡುವ ಅಪಮಾನ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರಕ್ಕೆ ಕೊರೊನಾ ಅಂಕಿಅಂಶಗಳನ್ನು ಮುಚ್ಚಿಡುವ ಉದ್ದೇಶ ಇಲ್ಲ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಕೇವಲ ರಾಜಕೀಯ ಲಾಭಕ್ಕಾಗಿ ಸುಳ್ಳು ಅಪಾದನೆ ಮಾಡುವುದು ಸರಿಯಲ್ಲ. ಇದು ಕಳೆದ 1 ವರ್ಷದಿಂದ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ಯೋಧರಿಗೆ ಎಸಗಿರುವ ಅಪಮಾನ ಎಂದಿದ್ದಾರೆ.

ಈ ಅಂಕಿ-ಅಂಶಗಳು ಇ-ಜನ್ಮ ತಂತ್ರಾಂಶದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿರುವ ದತ್ತಾಂಶವಾಗಿದ್ದು, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅವರು ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಪರಿಷ್ಕರಣೆ ನಡೆಯಬೇಕಿದೆ. ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು ಅಂತಿಮ ಅಂಕಿ-ಅಂಶಗಳ ಪ್ರಕಟಣೆ ಇನ್ನೂ ಬಾಕಿಯಿದೆ ಎಂದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ದಿನ ಬಿಡುಗಡೆ ಮಾಡುವ ಬುಲೆಟಿನ್ ನಲ್ಲಿ ಪರೀಕ್ಷೆ, ಹೊಸ ಪ್ರಕರಣಗಳು, ಗುಣಮುಖ ಹೊಂದಿರುವವರ ಸಂಖ್ಯೆ, ಮೃತಪಟ್ಟವರ ಸಂಖ್ಯೆ ಎಲ್ಲವನ್ನು ಜಿಲ್ಲಾ ಮಟ್ಟದಿಂದ ತರಿಸಿಕೊಂಡು ಕ್ರೂಢೀಕರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಪಕ್ಷ‌ ನಾಯಕ ಸಿದ್ದರಾಮಯ್ಯನವರು ಬೇಕಿದ್ದಲ್ಲಿ ಎಲ್ಲಾ ಜಿಲ್ಲಾಡಳಿತಗಳಿಂದ ಅಂಕಿ ಅಂಶಗಳನ್ನು ತರಿಸಿಕೊಂಡು ತಾಳೆ ಮಾಡಿ ನೋಡಬಹುದು. ಆದರೆ ಇನ್ನೂ ಅಂತಿಮವಾಗಿಲ್ಲದ ದತ್ತಾಂಶ, ಇನ್ನೂ ಪರಿಷ್ಕರಿಸಬೇಕಾದ ಅಂಕಿ ಅಂಶಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

Leave a Reply