ಮೈಕ್ರೋ ಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆ ಸ್ವರೂಪ ಶೀಘ್ರದಲ್ಲೇ ಅಂತಿಮ: ಪರಮೇಶ್ವರ್

1 year ago

ಬೆಂಗಳೂರು: ಸಾಲ ವಸೂಲಾತಿ ಹೆಸರಿನಲ್ಲಿ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿರುವ ಆರೋಪಕ್ಕೆ ಸಿಲುಕಿರುವ ಮೈಕ್ರೋ ಫೈನಾನ್ಸ್ ಗಳ ಹಾವಳಿ ತಡೆಗಟ್ಟಲು ರೂಪಿಸಲಾಗುತ್ತಿರುವ ಸುಗ್ರೀವಾಜ್ಞೆ ಅಂತಿಮ ಅಂತ ತಲುಪಿದ್ದು ಒಂದೆರಡು ದಿನಗಳಲ್ಲಿ ಅಧಿಸೂಚನೆ ಮೂಲಕ ಪ್ರಕಟವಾಗಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸುಗ್ರೀವಾಜ್ಞೆ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು, ಸಂಸದೀಯ ವ್ಯವಹಾರ, ಆರ್ಥಿಕ‌ ಇಲಾಖೆ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ಈಗಾಗಲೇ ಹಲವು ಕಾನೂನುಗಳಿವೆ ಈ ಕಾನೂನುಗಳ ಅಧ್ಯಯನ ನಡೆಸಿ ಹೊಸ ಕಾನೂನು ಮಾಡಲಾಗುತ್ತದೆ ಎಂದರು.

ಸುಗ್ರೀವಾಜ್ಞೆ ಸ್ವರೂಪ ಬಗ್ಗೆ ಇನ್ನೆರಡು ಮೂರು ದಿನಗಳಲ್ಲಿ ಅಂತಿಮಗೊಳಿಸಿ ನಂತರ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ. ಯಾವಾಗ ಸುಗ್ರೀವಾಜ್ಞೆ ಹೊರಡಿಸಬೇಕು ಅಂತ ಸಮಯ ನಿಗದಿಗೊಳಿಸಿಲ್ಲ ಎಂದರು.

ಜನರಿಗೆ ಕಿರುಕುಳ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ, ಆತ್ಮಹತ್ಯೆ, ಊರು ಬಿಡುವ ಘಟನೆಗಳು ಆಗುತ್ತಿವೆ. ಇದು ನಿಲ್ಲಬೇಕು, ನೋಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೂ ಕಡಿವಾಣ ಹಾಕಬೇಕು. ನಮ್ಮ ಊರಿನಲ್ಲಿ ಎರಡೂವರೆ ಲಕ್ಷ ಕೊಟ್ಟು ನಾಲ್ಕೂವರೆ ಲಕ್ಷ ವಸೂಲು ಮಾಡಿದ್ದಾರೆ ಎಂದರು.

ಮತ್ತೊಂದೆಡೆ ಮೈಸೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜನ ಎಲ್ಲಿ ಸಾಲ ಸಿಗುತ್ತದೆಯೋ ಅಲ್ಲಿಗೆ ಹೋಗುತ್ತಿದ್ದಾರೆ. ಹೆಚ್ಚು ಬಡ್ಡಿ ಹಾಕುತ್ತಿದ್ದಾರೆ. ಹೊರಗುತ್ತಿಗೆ ಮೂಲಕ ಗೂಂಡಾಗಳನ್ನು ಬಳಸಿಕೊಂಡ ಹಣ ವಸೂಲಿ ಮಾಡುತ್ತಿದ್ದಾರೆ. ಮೈಕ್ರೊ ಫೈನಾನ್ಸ್‌ಗಳು ಆರ್‌ಬಿಐ ನಿಯಮದಡಿ ಬರುತ್ತದೆ. ಕಡಿವಾಣ ಹಾಕಲು ಇನ್ನೂ ಸುಗ್ರೀವಾಜ್ಞೆ ಹೊರಡಿಸಿಲ್ಲ‌. ಸುಗ್ರೀವಾಜ್ಞೆ ಹೊರಡಿಸಿದ ನಂತರ ಇದಕ್ಕೆ ಕಡಿವಾಣ ಬೀಳಲಿದೆ ಎಂದರು.

ಶೇ 28, 29, 30ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾರು ವೀಪರೀತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆಯೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಜನ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸರ್ಕಾರ ನಮ್ಮ ಪರವಿದೆ ಎಂದರು.

Leave a Reply