ಅಕಾಲಿಕ ಮಳೆ ಮತ್ತು ಅತಿವೃಷ್ಟಿಯಿಂದ ತೆವಾಂಶ ಹೆಚ್ಚಾದ ಅಥವಾ ನೀರು ನಿಂತ ಹೊಲದಲ್ಲಿ ಬೆಳೆಗಳ ನಿರ್ವಹಣೆ

2 years ago

ಧಾರವಾಡ: ಜಿಲ್ಲೆಯಲ್ಲಿ ಮೆಕ್ಕೆಜೋಳ, ಸೋಯಾಅವರೆ, ಹೆಸರು, ಶೇಂಗಾ, ಭತ್ತ ಮತ್ತು ಹತ್ತಿ ಬೆಳೆಗಳ ಬಿತ್ತನೆ ಕೈಗೊಂಡ ಹೊಲಗಳಲ್ಲಿ ಮುಂಜಾಗೃತ ಕ್ರಮವಾಗಿ ಇಳಿಜಾರಿಗೆ ಅಡ್ಡವಾಗಿ ಬೇಸಾಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ತಕ್ಷಣದ ಕ್ರಮವಾಗಿ ಹೆಚ್ಚಿನ ನೀರು ಬಸಿದು ಹೋಗಲು ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಣ್ಣು ಹದ ಬಂದ ಕೂಡಲೆ ಬೆಳೆಗೆ ಅನುಸಾರವಾಗಿ ಸೂಕ್ತವಾದ ಕುಂಟೆಯಿಂದ ಅಂತರ ಬೇಸಾಯ ಮಾಡಿ ಕಳೆಗಳನ್ನು ನಿಯಂತ್ರಿಸಬೇಕು. ನೀರು ನಿಂತ ಸನ್ನಿವೇಶದಲ್ಲಿ ಯೂರಿಯಾ ಗೊಬ್ಬರ ಬಳಕೆ ಮಾಡಬಾರದು. ಇದರಿಂದ ರೋಗಗಳ ಭಾಧೆ ತೀವ್ರವಾಗುವುದು. ಇಂತಹ ಸನ್ನಿವೇಶದಲ್ಲಿ ಬೆಳೆಗಳ ಬೆಳವಣಿಗೆ ಚೇತರಿಸಲು ಪ್ರತಿ ಲೀಟರ್ ನೀರಿಗೆ 2 ರಿಂದ 3 ಗ್ರಾಂ 17:44:00 ಅಥವಾ 13:00:45 ಅಥವಾ 19:19:19 ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಬೆರೆಸಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಅತಿ ತೇವಾಂಶದಿಂದ ರೋಗದ ಬಾಧೆ ಕಂಡು ಬಂದಲ್ಲಿ ರೋಗಕ್ಕೆ ಮತ್ತು ಬೆಳೆಗೆ ಅನುಗುಣವಾಗಿ ಶಿಫಾರಿತ ಶಿಲೀಂದ್ರ ನಾಶಕಗಳ ಬಳಕೆ ಮಾಡಬೇಕು.

ಮೆಕ್ಕೆಜೋಳದಲ್ಲಿ ಟರ್ಸಿಕಮ್ ಎಲೆ ಅಂಗಮಾರಿ ರೋಗ (TLB) ಮತ್ತು ಹೆಸರು ಬೆಳೆಯಲ್ಲಿ ಬೂದುರೋಗ ಕಂಡುಬಂದಲ್ಲಿ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಮ್ಯಾಂಕೋಜೆಬ್ 75% ಡಬ್ಲ್ಯು.ಪಿ. ಸಿಂಪರಣೆ ಮಾಡಬೇಕು.

ಮೆಕ್ಕೆಜೋಳದಲ್ಲಿ ಕಾಂಡಕೊರೆಯುವ ರೋಗ ಅಥವಾ ಸೊಯಾಅವರೆಯಲ್ಲಿ ಎಲೆ ಚುಕ್ಕೆ ರೋಗ, ತುಕ್ಕು ರೋಗ ಕಂಡುಬಂದಲ್ಲಿ 1 ಮಿ.ಲೀ. ಪ್ರತಿ ಲೀ. ನೀರಿಗೆ ಹೆಕ್ಸಾಕೋನೋಜೋಲ್ ಶೇ. 5 ಎಸ್.ಸಿ. ಬೆರೆಸಿ ಸಿಂಪರಣೆ ಮಾಡಬೇಕು.

ಹತ್ತಿ ಬೆಳೆಯಲ್ಲಿ ಮಿರಿಡ್ ತಿಗಣೆ ಕಂಡು ಬಂದಲ್ಲಿ ಒಂದು ಗ್ರಾಂ ಪ್ರತಿ ಲೀ. ನೀರಿಗೆ ಅಸಿಫೇಟ್ ರಾಸಾಯನಿಕವನ್ನು ಬೆರೆಸಿ ಸಿಂಪರಣೆ ಮಾಡಬೇಕು ಮತ್ತು ಹತ್ತಿ ಎಲೆಗಳು ಕೆಂಪಾದಲ್ಲಿ 10 ಗ್ರಾಂ ಪ್ರತಿ ಲೀ. ನೀರಿಗೆ, ಮೆಗ್ನೀಶಿಯಂ ಸಲ್ಫೇಟ್ ಅನ್ನು ಬೆರೆಸಿ ಸಿಂಪಡಿಸಬೇಕು.

ಶೇಂಗಾ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಅಥವಾ ಸೊರಗುರೋಗ ಬಂದಲ್ಲಿ 2 ಗ್ರಾಂ ಪ್ರತಿ ಲೀ. ನೀರಿಗೆ, ಕ್ಲೋರೊಥಲೋನಿಲ್ ಬೆರೆಸಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಹೆಸರು ಮತ್ತು ಸೋಯಾಅವರೆ ಬೆಳೆಯಲ್ಲಿ ಎಲೆ ತಿನ್ನುವ ಹುಳುಗಳ ಕೀಟ ಬಾಧೆ ಕಂಡುಬಂದಲ್ಲಿ 1 ಮಿ.ಲಿ. ಪ್ರತಿ ಲೀ. ನೀರಿಗೆ, ಮೊನೊಕ್ರೊಟೊಫಾಸ್ ಅಥವಾ 2 ಮಿ.ಲಿ. ಪ್ರತಿ ಲೀ. ನೀರಿಗೆ, ಕ್ವಿನಾಲ್ಫಾಸ್ ಬೆರೆಸಿ ಸಿಂಪರಣೆ ಮಾಡಬೇಕು.

ರಸಹೀರುವ ಕೀಟ ಬಾಧೆ ಕಂಡು ಬಂದಲ್ಲಿ ಇಮಿಡಾಕ್ಲೋಪ್ರಿಡ್ ಶೇ. 17.8 ಎಸ್. ಎಲ್. ಪ್ರತಿ ಲೀ. ನೀರಿಗೆ 1 ಮಿ.ಲೀ. ಅಥವಾ ಥೈಯೋಮಿಥಾಕ್ಸಾಮ್ ಶೇ. 25 ಡಬ್ಲ್ಯು.ಜಿ. ಪ್ರತಿ ಲೀ. ನೀರಿಗೆ 0.5 ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

ಥೈಯೋಮಿಥಾಕ್ಸಾಮ್ ಶೇ. 25 ಡಬ್ಲ್ಯು.ಜಿ. ಯು ಕಾಂಡ ಕೊರಕ, ಎಲೆ ಮಡಚುವ ಕೀಟ, ಜಿಗಿ ಹುಳು, ಬಿಳಿ ನೊಣ, ನುಸಿ, ಹಾರುವ ಕೀಟಗಳ ನಿರ್ವಹಣೆಗೂ ಬಳಸಬಹುದು.

ಸರಿಯಾದ ಮೊಳಕೆಯಾಗದೇ ಸಾಮಾನ್ಯವಾಗಿ ಸಸಿ ಸಂಖ್ಯೆ ಶೇ.60 ಕ್ಕಿಂತಲೂ ಕಡಿಮೆ ಇದ್ದಲ್ಲಿ ದ್ವಿ-ಹಂಗಾಮಿನ ಬೆಳೆಗಳಾದ ಹತ್ತಿ, ತೊಗರಿ ಮತ್ತು ಮೆಣಸಿನಗಿಡದಲ್ಲಿ ಮರು ಬಿತ್ತನೆ ಅಥವಾ ನಾಟಿ ಮಾಡುವುದು ಉತ್ತಮ. ಇತರ ಬೆಳೆಗಳಾದಲ್ಲಿ ತಕ್ಷಣ ಹುಸಿ ಹೋದ ಜಾಗದಲ್ಲಿ ಕಾಳು ಹಾಕಬೇಕು ಎಂದು ತಿಳಿಸಿದ್ದಾರೆ.

ಮುಂದೆ ಬಿತ್ತನೆ ಕೈಗೊಳ್ಳಬೇಕಾದ ಹೊಲಗಳಲ್ಲಿ ಮೇಲಿನ ಮುಂಜಾಗ್ರತಾ ಕ್ರಮದೊಂದಿಗೆ ತಡವಾದಂತೆ ಶೇಕಡಾ 5 ರಿಂದ 10 ರಷ್ಟು ಬಿತ್ತನೆ ಬೀಜದ ಪ್ರಮಾಣದಲ್ಲಿ ಹೆಚ್ಚಳ ಮಾಡುವುದರ ಜೊತೆಗೆ ಶಿಲೀಂಧ್ರನಾಶಕವಾದ ಕಾರ್ಬಾಕ್ಸಿನ್ ಇಲ್ಲವೇ ಕಾರ್ಬಾಕ್ಷಿನ್ ಒಳಗೊಂಡ ಯಾವುದೇ ಸಂಯುಕ್ತ ರಾಸಾಯನಿಕದಿಂದ ಪ್ರತಿ ಕೆ.ಜಿ. ಬೀಜಕ್ಕೆ 4 ಗ್ರಾಂ.ನಂತೆ ಬೀಜೋಪಚಾರವನ್ನು ತಪ್ಪದೇ ಮಾಡಬೇಕು. ಬೀಜ ಮತ್ತು ರಾಸಾಯನಿಕ ಗೊಬ್ಬರ ಬಿತ್ತುವ ಕೂರಿಗೆಯಿಂದ ಬಿತ್ತನೆ ಮಾಡಬೇಕು. ಬಿತ್ತನೆ ಸಮಯದಲ್ಲಿ ಬೆಳೆವಾರು ಉದಯಪೂರ್ವ ಕಳೆನಾಶಕಗಳಿಗೆ ಆದ್ಯತೆ ಕೋಡಬೇಕು. ಏಕದಳ ಬೆಳೆಗಳಾದಲ್ಲಿ ಆಟ್ರಾಜಿನ ಶೇ.50 ಡಬ್ಲ್ಯು.ಪಿ. ಕಳೆನಾಶವನ್ನು ಪ್ರತಿ ಲೀಟರ ನೀರಿಗೆ 2 ರಿಂದ 2.5 ಗ್ರಾಂ ನಷ್ಟು ಮತ್ತು ದ್ವಿದಳ ಮತ್ತು ಎಣ್ಣೆಕಾಳು ಬೆಳೆಯಾದಲ್ಲಿ ಪೆಂಡಿಮಿಥಾಲಿನ ಶೇ. 30 ಇ.ಸಿ.ಯನ್ನು ಪ್ರತಿ ಲೀಟರ್ ನೀರಿಗೆ 3.3 ಮಿ.ಲೀ. ನಂತೆ ಬೆರೆಸಿ ಎಕರೆಗೆ ಕನಿಷ್ಠ 200 ಲೀಟರ್ ದ್ರಾವಣವನ್ನು ಹಿಂಬದಿಯಲ್ಲಿ ಚಲಿಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ತಾಂತ್ರಿಕ ಮಾಹಿತಿಗಾಗಿ ಕ್ರಿಡ್ ಸಂಸ್ಥೆ, ಹೈದ್ರಾಬಾದ್ ಮತ್ತು ಧಾರವಾಡ ಕೃಷಿ ವಿಶ್ವವಿಧ್ಯಾಲಯವನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Leave a Reply