ಬಡ ಮಕ್ಕಳನ್ನ ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಮಾಡುವುದು ದೇವರ ಪೂಜೆಗಿಂತ ದೊಡ್ಡದು: ಕೃಷ್ಣ ಬೈರೇಗೌಡ

2 years ago

ಕೊಡಿಗೇಹಳ್ಳಿ ಶಾಲೆಯಲ್ಲಿ ಅತ್ಯಾಧುನಿಕ 26 ಕೊಠಡಿ ಉದ್ಘಾಟನೆ

ಕಳೆದ 15 ವರ್ಷದಲ್ಲಿ 43 ಶಾಲಾ ಕೊಠಡಿಗಳ ಉದ್ಘಾಟಣೆ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 70 ಕೋಟಿ ಯೋಜನೆಯೂ ಘೋಷಣೆ

ಬ್ಯಾಟರಾಯನಪುರದಲ್ಲಿ ಮುಂದುವರೆದ ಸರ್ಕಾರಿ ಶಾಲೆಗಳ ಮೇಲ್ದರ್ಜೆ ಅಭಿಯಾನ

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಭಾಗಿ

ಬೆಂಗಳೂರು: ದುಡಿಯುವ ವರ್ಗದ ಬಡ-ಮಧ್ಯಮ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲು, ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಮಾರ್ಗದರ್ಶನ ಮಾಡುವುದು ದೇವರ ಪೂಜೆಗಿಂತಲೂ ಶ್ರೇಷ್ಠ ಕೆಲಸ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರ ಕೋಡಿಗೆಹಳ್ಳಿಯ ಬೆಂಗಳೂರು ಪಬ್ಲಿಕ್ ಶಾಲೆಯಲ್ಲಿ ಇಂದು 26 ನೂತನ ಮತ್ತು ಅತ್ಯಾಧುನಿಕ ಶಾಲಾ ಕೊಠಡಿಯನ್ನು ಲೋಕಾರ್ಪಣೆ ಮಾಡಲಾಯಿತು. ಅಲ್ಲದೆ, ಕೋಡಿಗೆಹಳ್ಳಿ ರೀತಿಯಲ್ಲೇ ಏಕ ಕಾಲದಲ್ಲಿ ನಗರದ ಇತರೆ ಭಾಗಗಳಲ್ಲೂ 15 ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು.

ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಕೃಷ್ಣ ಬೈರೇಗೌಡ, ಯಶಸ್ಸಿಗಿರುವ ಏಕೈಕ ಕೀಲಿಕೈ ಶಿಕ್ಷಣ ಮಾತ್ರ. ಹೀಗಾಗಿ ದುಡಿಯುವ ಶ್ರಮಿಕ ವರ್ಗದ ಮಕ್ಕಳಿಗೂ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಲಭ್ಯವಾಗಬೇಕು. ಈ ಮಕ್ಕಳೂ ಓದಿ ನಾಳೆ ದೊಡ್ಡ ದೊಡ್ಡ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ದೊಡ್ಡ ಉದ್ಯಮಿಗಳಾಗಿ ನೂರಾರು ಜನರಿಗೆ ಉದ್ಯೋಗ ನೀಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರು ಮೌಲ್ಯಯುತ ಶಿಕ್ಷಣದ ಜೊತೆಗೆ ಮಾರ್ಗದರ್ಶನವನ್ನೂ ನೀಡಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ಖಾಸಗಿ ಶಾಲೆಗಳಿಗೂ ಮೀರಿದ ಉತ್ತಮ ಸೌಲಭ್ಯಗಳನ್ನು ನಮ್ಮ ಸರ್ಕಾರಿ ಶಾಲೆಗಳಿಗೆ ನೀಡಲು ನಾವು ಬದ್ಧರಾಗಿದ್ದೇವೆ. ಕಳೆದ 15 ವರ್ಷದಲ್ಲಿ ಈ ಶಾಲೆಯಲ್ಲಿ ಮಾತ್ರ ನೂತನ 43 ಶಾಲಾ ಕೊಠಡಿಯನ್ನು ನಿರ್ಮಿಸಲಾಗಿದೆ. 2008ರಲ್ಲಿ 650 ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸ್ತುತ 1150ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಮೂಲಗಳಿಂದ ಹಣ ಹೊಂದಿಸಲಾಗಿದೆ. ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಇತರೆ ಪಠ್ಯೇತರ ಸಾಂಸ್ಕೃತಿಕ ಚಟುವಟಿಕೆಗೂ ಶಾಲಾ ಆವರಣ ಅನುಕೂಲಕರವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಕ್ಷೇತ್ರದ ಜಕ್ಕೂರು, ಬಾಗಲೂರು, ಥಣೀಸಂದ್ರದಲ್ಲಿ ನೂತನ ಪಿಯು ಕಾಲೇಜುಗಳನ್ನು ನಿರ್ಮಿಸಲಾಗಿದೆ. ಕುವೆಂಪು ನಗರ, ಕಟ್ಟಿಗೇನಹಳ್ಳಿಯಲ್ಲಿ ಹೊಸ ಪದವಿ ಕಾಲೇಜುಗಳ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿ ಏನೇ ಬೇಕಿದ್ರೂ ಅದನ್ನು ಪೂರೈಸಲು ನಾವು ಸಿದ್ದರಿದ್ದೇವೆ. ಆದರೆ, ಶಿಕ್ಷಕರು ಮಾತ್ರ ನಮಗೆ ಖಾಸಗಿ ಶಾಲೆಗಳನ್ನೂ ಮೀರಿಸುವ ಫಲಿತಾಂಶ ನೀಡಬೇಕು. ನಮ್ಮ ಪ್ರಯತ್ನಕ್ಕೆ ಮಕ್ಕಳ ಯಶಸ್ಸಿನ ಮುಖಾಂತರ ಪ್ರತಿಫಲ ಸಿಗುವಂತಾಗಬೇಕು. ಬಡ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಟ್ಟರೆ ಮಾತ್ರ ನಾವು ಅಧಿಕಾರಕ್ಕೆ ಬಂದದ್ದಕ್ಕೂ ಸಾರ್ಥಕ ಎಂದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಳಂತೆಯೇ ಉತ್ತಮ ಶಿಕ್ಷಣ ಲಭ್ಯವಾಗಬೇಕು ಎಂಬ ನಿಲುವಿನಲ್ಲಿ ನಮ್ಮ ಸರ್ಕಾರ ಗಟ್ಟಿಯಾಗಿದೆ. ಸಮಾಜದ ಎಲ್ಲಾ ವರ್ಗದ ಜನರೂ ಸಮಾನರಾಗಿ ಬದುಕಲು ಸಮಸಮಾಜ ನಿರ್ಮಿಸಲು ಶಿಕ್ಷಣವೊಂದೇ ಮಾರ್ಗ. ಹೀಗಾಗಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ರೂ.70 ಕೋಟಿ ತೆಗೆದಿರಿಸಲಾಗಿದೆ ಎಂದರು.

Leave a Reply