ಆರೋಗ್ಯಕ್ಕಾಗಿ ಜೀವನಶೈಲಿ ಬದಲಾವಣೆ ಅಗತ್ಯ: ಡಾ.ಬಿ.ವಿ.ಗಿರೀಶ್

7 months ago

ಚಿತ್ರದುರ್ಗ: ತಾಂತ್ರಿಕ ಯುಗದಲ್ಲಿ ಯಂತ್ರಗಳ ಬಳಕೆಯಿಂದ ಸಾರ್ವಜನಿಕರು ದೈಹಿಕ ಚಟುವಟಿಕೆ ಇಲ್ಲದೆ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಜೀವನ ಶೈಲಿ ಬದಲಾಯಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ವಸ್ತ ನಾರಿ ಸಶಕ್ತ ಪರಿವಾರ ಅಭಿಮಾನದಡಿ ಅಸಾಂಕ್ರಾಮಿಕ ರೋಗಗಳ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌಷ್ಟಿಕ ಸಮತೋಲನ ಆಹಾರ, ಧಾನ್ಯಗಳ ಬಳಕೆ, ಜೀರ್ಣ ಕ್ರಿಯೆ ಆಗುವ ನಾರಿನ ಅಂಶ ಇರುವ ತರಕಾರಿಗಳ ಬಳಕೆ ಮಾಡಿ ಅಸಾಂಕ್ರಾಮಿಕ ರೋಗಗಳಿಂದ ದೂರ ಇರಬಹುದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಕುಮಾರ್ ಮಾತನಾಡಿ, ಮದ್ಯಪಾನ ಧೂಮಪಾನದಂತಹ ದುಶ್ಚಟಗಳಿಂದ ದೂರ ಇದ್ದು, ನಿಯಮಿತ ವ್ಯಯಾಮ, ಧ್ಯಾನ ಅಭ್ಯಾಸ ಮಾಡುವುದರೊಂದಿಗೆ 30 ವರ್ಷ ಮೇಲ್ಪಟ್ಟ ಸಾರ್ವಜನಿಕರು ಸಮೀಪದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಸಾಂಕ್ರಾಮಿಕ ರೋಗಗಳ ಪರೀಕ್ಷೆಗೆ ಒಳಪಡಬೇಕು ಎಂದು ಕರೆನೀಡಿದರು.

ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾಹಿತಿ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಸಣ್ಣ ಪುಟ್ಟ ಮನೆಯಲ್ಲಿನ ಕೆಲಸಗಳಿಗೂ ಸಹ ಯಂತ್ರಗಳ ಬಳಕೆ ಮಾಡುತ್ತಾ ದೈಹಿಕ ಚಟುವಟಿಕೆ ಇಲ್ಲದೆ ಬೊಜ್ಜು, ರಕ್ತದೊತ್ತಡ, ಮಧುಮೇಹ, ಮುಂತಾದ ಅಸಾಂಕ್ರಾಮಿಕ ರೋಗಗಳು ತಲೆದೋರುತಿದ್ದು, ಸಾರ್ವಜನಿಕರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒತ್ತಡ ಕಡಿಮೆ ಮಾಡುವ ಮುಖಾಂತರ ಎಣ್ಣೆ ಪದಾರ್ಥ ಕಡಿಮೆ ಮಾಡುತ್ತಾ ಜಂಕ್ ಫುಡ್ ಗಳಿಗೆ ಕಡಿವಾಣ ಹಾಕಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ದೇವಿಕಾ ರವರು ಬಾಲ್ಯ ವಿವಾಹ ತಡೆ ಕುರಿತು ಮಾಹಿತಿ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಮಪ್ಪ. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ, ಕಿರಣ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಲತಾ, ರುಕ್ಮಿಣಿ, ವಿನುತಾ, ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕ ತಾಯಂದಿರು ಉಪಸ್ಥಿತರಿದ್ದರು.

Leave a Reply