ತೆಂಗು ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ

1 year ago

ಚಿತ್ರದುರ್ಗ: ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಫ್ರೆಂಡ್ಸ್ ಆಫ್ ಕೊಕನಟ್ ಟ್ರೀ ಕಾರ್ಯಕ್ರಮದಡಿ ತೆಂಗು ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ವಿಮಾ ಯೋಜನೆಯಡಿ ತೆಂಗಿನಮರ ಹತ್ತುವವರು, ತೆಂಗಿನಕಾಯಿ ಕೀಳುವವರು, ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ ರೂ.7 ಲಕ್ಷ, ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದಲ್ಲಿ ರೂ.3.50ಲಕ್ಷ, ಆಸ್ಪತ್ರೆ ವೆಚ್ಚ (24 ಗಂಟೆ ಐಪಿ) ಗರಿಷ್ಠ ರೂ.2 ಲಕ್ಷ, ತಾತ್ಕಾಲಿಕ ಅಂಗವಿಕಲತೆ ಹೊಂದುವವರಿಗೆ ಪ್ರತಿವಾರ ರೂ.3500 ರಂತೆ ಗರಿಷ್ಠ ರೂ.21,000, ಅಂಬುಲೆನ್ಸ್ ಖರ್ಚು ರೂ.3500 ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ ರೂ.5,500 ನೀಡಲಾಗುತ್ತದೆ. ದುರ್ಘಟನೆ ಅಥವಾ ಅಪಘಾತ ಆದ ಏಳು ದಿನಗಳ ಒಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಮಾಹಿತಿ ತಲುಪಿಸಬೇಕು.

ವಾರ್ಷಿಕ ವಿಮಾ ಒಟ್ಟು ಕಂತು ರೂ.956 ಗಳಾಗಿದ್ದು, ಶೇ. 75:25 ರಂತೆ ತೆಂಗು ಅಭಿವೃದ್ಧಿ ಮಂಡಳಿ ವಂತಿಕೆ ರೂ. 717 ಮತ್ತು ರೈತರ ವಂತಿಕೆ ರೂ.239ಆಗಿರುತ್ತದೆ. ರೈತರ ವಂತಿಕೆಯನ್ನು ತೆಂಗು ಅಭಿವೃದ್ಧಿ ಮಂಡಳಿಗೆ ಡಿಡಿ ಮೂಲಕ ಅಥವಾ ಆನ್ಲೈನ್ ಮೂಲಕ ಪಾವತಿಸಬಹುದಾಗಿದೆ.

ಜಿಲ್ಲೆಯ ಆಸಕ್ತರು ತೆಂಗು ಅಭಿವೃದ್ಧಿ ಮಂಡಳಿಯ ನಿಗದಿತ ಅರ್ಜಿ ನಮೂನೆ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ  www.cocpnut.board.govt.in/Shceme.aspx  ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

Leave a Reply