ಕರ್ನಾಟಕ ಲೇಖಕಿಯರ ಸಂಘದ ಗೊಂದಲ ಇತ್ಯರ್ಥ: ಡಾ.ಎಚ್.ಎಲ್.ಪುಷ್ಪ

6 months ago

ಅಕ್ಟೋಬರ್, 11 ಶನಿವಾರದಂದು ನಡೆದ ‘ಕರ್ನಾಟಕ ಲೇಖಕಿಯರ ಸಂಘ’ದ ಸರ್ವ ಸದಸ್ಯರ ಸಭೆಯು ಸೆಪ್ಟೆಂಬರ್ 7 ರಂದು ನಡೆದ ಸಭೆಯ ಮುಂದುವರಿಕೆಯಾಗಿರುತ್ತದೆ. ಹಿಂದೆ ಮಂಡಿಸಿದ ಲೆಕ್ಕ ಪರಿಶೋಧನಾ ವರದಿ 2024-25 ಕನ್ನಡದಲ್ಲಿ ಇಲ್ಲವೆಂದು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಹಾಗೂ ಲೇಖಕಿಯರ ಸಮ್ಮೇಳನದ ಖರ್ಚು ವೆಚ್ಚದ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿತ್ತು.

ಲೆಕ್ಕಾಚಾರದಲ್ಲಿ ಗೊಂದಲ ಇತ್ತೆ ವಿನಃ ಯಾವುದೇ ಹಣದ ದುರುಪಯೋಗ ನಡೆದಿರಲಿಲ್ಲ. ಆದರೆ, ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನಾ ಪ್ರಸ್ತುತಿಯಲ್ಲಿ ವ್ಯತ್ಯಾಸವಿದೆ ಎಂಬ ಆಕ್ಷೇಪಗಳಿದ್ದರೂ ಕೆಲವು ತಿದ್ದುಪಡಿಗಳನ್ನು ಸೂಚಿಸಿ  ಬಹುಮತದಿಂದ ಲೆಕ್ಕಪತ್ರವನ್ನು ಸಭೆಯಲ್ಲಿ ಅಂಗಿಕರಿಸಿ ಅನುಮೋದಿಸಲಾಯಿತು.

ಶನಿವಾರ ನಡೆದ ಸಂಘಕ್ಕೆ ಸಂಬಂಧಿಸಿದ ಸರ್ವಸದಸ್ಯರ ಸಭೆಯಲ್ಲಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಲಾಗಿದೆ. ಈಗ ಲೇಖಕಿಯರ ಸಂಘದಲ್ಲಿ ಯಾವುದೇ ಸಮಸ್ಯೆ ಇಲ್ಲ.

ಸದಸ್ಯರಲ್ಲದವರು ಮತ್ತು ಇತರೆ ಸಂಘಟನೆಗಳ ಅಧ್ಯಕ್ಷರು ಸಂಘದ ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಸರ್ವ ಸದಸ್ಯರು ಈ ಮೂಲಕ ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಮುಂದಿನ ಚುನಾವಣೆಯನ್ನು ಆಯೋಜಿಸಬೇಕೆಂದು ತೀರ್ಮಾನಿಸಲಾಯಿತು. ಚುನಾವಣೆಯ ಅಧಿಕಾರಿಯಾಗಿ  ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲರಾದ ಪ್ರತಿಭ. ಆರ್ ಅವರನ್ನು ನೇಮಿಸಲಾಯಿತು.

ಇಂದಿನ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರು, ಹೊಸದಾಗಿ ನೇಮಕವಾದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಹಾಗೂ ಹಿಂದೆ ರಾಜಿನಾಮೆ ನೀಡಿದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಭೆ ಸಾಂಗೋಪವಾಗಿ ನಡೆಯಲು ಸಹಕರಿಸಿದ್ದು ನನಗೆ ಸಮಾಧಾನ ಸಂತೋಷ ತಂದಿದೆ.

ಲೇಖಕಿಯರ ಸಂಘದಲ್ಲಿ ಒಗ್ಗಟ್ಟು ಇದ್ದು,  ಮೊದಲಿನಂತೆ ಚಟುವಟಿಕೆಗಳು ನಡೆಯುತ್ತವೆ ಎಂದು ತಿಳಿಸಲು ಸಂತೋಷವಾಗುತ್ತದೆ.

ವಂದನೆಗಳೊಂದಿಗೆ ತಮ್ಮ ವಿಶ್ವಾಸಿ,

– ಡಾ. ಎಚ್.ಎಲ್. ಪುಷ್ಪ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ

Leave a Reply