ಹಿರಿಯ ಕನ್ನಡ ಹೋರಾಟಗಾರರಾದ ಶ್ರೀ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವಿರುವುದಿಲ್ಲ. ಈ ಬಂದ್ ನಲ್ಲಿ ಕರವೇ ಯಾವುದೇ ಸ್ವರೂಪದಲ್ಲೂ ಪಾಲ್ಗೊಳ್ಳುವುದಿಲ್ಲ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
1. ಬೆಳಗಾವಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಸಂಬಂಧ ಕಳೆದ ಮಂಗಳವಾರ ಬೆಳಗಾವಿಯಲ್ಲಿ ದೊಡ್ಡ ಸ್ವರೂಪದ ಚಳವಳಿ ನಡೆಸಿದೆ. ನಾನು ಅಲ್ಲಿಗೆ ಹೋದ ನಂತರ ನಿರ್ವಾಹಕನ ಮೇಲೆ ಹೂಡಲಾಗಿದ್ದ ಸುಳ್ಳು ಪೋಕ್ಸೋ ದೂರನ್ನು ಹಿಂದಕ್ಕೆ ಪಡೆಯಲಾಗಿದೆ. ಮೊಕದ್ದಮೆ ದಾಖಲಿಸಿಕೊಂಡಿದ್ದ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸ್ವತಃ ತಾವೇ ಆಗಮಿಸಿದ ಬೆಳಗಾವಿ ಪೊಲೀಸ್ ಕಮಿಷನರ್ ಎಡಾ ಮಾರ್ಟಿನ್ ಮಾರ್ಬನ್ಯಾಂಗ್ ಕನ್ನಡಿಗರ ಮೇಲೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸ್ವರೂಪದ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
2. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ದಾಳಿ ನಡೆಸಿ ಬಸ್ ಚಾಲಕ, ನಿರ್ವಾಹಕರ ಮೇಲೆ ದಾಳಿಗಳು ಮುಂದವರೆದಲ್ಲಿ ಕರವೇ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ. ಈ ಸಂಘರ್ಷ ಮುಂದುವರೆಯುವುದು ಬೇಡವೆನ್ನುವುದಾದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡು ಕನ್ನಡಿಗರ ಮೇಲಿನ ದಾಳಿಗಳನ್ನು ತಡೆಗಟ್ಟಬೇಕು.
3. ಮೊದಲಿನಿಂದ ಕರ್ನಾಟಕ ರಕ್ಷಣಾ ವೇದಿಕೆ ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ “ಕರ್ನಾಟಕ ಬಂದ್” ಕರೆಗಳಿಗೆ ಕೈಜೋಡಿಸಿಲ್ಲ. ಬಂದ್ ನಿಂದ ಜನಸಾಮಾನ್ಯರಿಗೆ, ಅದರಲ್ಲೂ ವಿಶೇಷವಾಗಿ ಅಂದಿನ ಕೂಳು ಸಂಪಾದಿಸಲು ದಿನಗೂಲಿ ಮಾಡುವ ಬಡಪಾಯಿಗಳಿಗೆ ತೊಂದರೆಯಾಗುತ್ತದೆ. ನಮಗೆ ನಾವೇ ತೊಂದರೆ ಕೊಟ್ಟುಕೊಂಡು ಬಂದ್ ನಡೆಸುವುದರಲ್ಲಿ ಅರ್ಥವಿಲ್ಲ.
4. ಮಾರ್ಚ್ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ಇರುತ್ತವೆ. ಈ ಸಂದರ್ಭದಲ್ಲಿ ಬಂದ್ ನಡೆಸುವುದರಿಂದ ಅವರಿಗೆ ಅನಾನುಕೂಲವಾಗುತ್ತದೆ.
5. ಕರ್ನಾಟಕ ರಕ್ಷಣಾ ವೇದಿಕೆ ಯಾವಾಗಲೂ ‘ಬಂದ್’ ಹೋರಾಟಗಾರರ ಕೊನೆಯ ಅಸ್ತ್ರವಾಗಿರಬೇಕು ಎಂದು ನಂಬಿಕೊಂಡು ಬಂದಿದೆ. ಎಲ್ಲ ಸಮಸ್ಯೆಗಳಿಗೂ ಬಂದ್ ಪರಿಹಾರವಲ್ಲ. ಹೋರಾಟಕ್ಕೆ ನಾನಾ ಮಾರ್ಗಗಳು ಇವೆ. ನಾವು ಅಂಥ ಮಾರ್ಗಗಳನ್ನು ಹಿಡಿದು ಚಳವಳಿಯನ್ನು ಸಂಘಟಿಸುತ್ತ ಬಂದಿದ್ದೇವೆ.
6. ಕರ್ನಾಟಕ ರಕ್ಷಣಾ ವೇದಿಕೆ ಈಗ ಕೆಪಿಎಸ್ ಸಿ ಪರೀಕ್ಷೆಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸುಮಾರು 70,000 ಕ್ಕೂ ಹೆಚ್ಚು ಕನ್ನಡ ಮಾಧ್ಯಮದಲ್ಲಿ ಕಲಿತ ಕನ್ನಡದ ಮಕ್ಕಳ ಪರವಾಗಿ ಚಳವಳಿ ಸಂಘಟಿಸುತ್ತಿದೆ. ಇದು ಕನ್ನಡಿಗರ ಬದುಕಿನ ಪ್ರಶ್ನೆ, ಕನ್ನಡದ ಅಸ್ಮಿತೆಯ ಪ್ರಶ್ನೆ.
ಹಿರಿಯರಾದ ವಾಟಾಳ್ ನಾಗರಾಜ್ ಅವರ ಕುರಿತು ಅಪಾರವಾಗಿ ಗೌರವವಿಟ್ಟುಕೊಂಡೇ ಅವರು ಮಾರ್ಚ್ 22ರಂದು ಕರೆ ನೀಡಿರುವ “ಕರ್ನಾಟಕ ಬಂದ್” ನಿಂದ ಕರ್ನಾಟಕ ರಕ್ಷಣಾ ವೇದಿಕೆ ದೂರ ಉಳಿಯುತ್ತದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತದೆ.
– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ




