ವಿಶ್ವಗುರು ಟ್ರಂಪ್‌ ಅವರೋ ಅಥವಾ ಮೋದಿ ಅವರೋ?: ಶಿವರಾಜ ತಂಗಡಗಿ

1 year ago

ಬೆಂಗಳೂರು: ಪ್ರಧಾನಿ ಮೋದಿ ಅವರು ಆಪರೇಷನ್ ಸಿಂದೂರ ಏಕೆ ನಿಲ್ಲಿಸಿದರು? ನಮ್ಮ ಸೈನಿಕರು ಕದನಕ್ಕೆ ಸಿದ್ದರಿದ್ದರು. ಉಗ್ರರ ನೆಲೆ ನಾಶ ಮಾಡಲು ಸಿದ್ದರಿದ್ದರು. ಆದರೆ ಕದನ ವಿರಾಮ ಘೋಷಣೆ ಮಾಡಿದ್ದು ಏಕೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯೋಧರು ಯಶಸ್ಸು ಸಾಧಿಸುತ್ತಿರುವಾಗ ಕದನ ವಿರಾಮ ಘೋಷಣೆ ಮಾಡಲಾಗಿದೆ. ಇದು ಯಾವ ಕಾರಣಕ್ಕೆ ಮಾಡಿದ ಘೋಷಣೆ ಎಂಬುದನ್ನು ಪ್ರಧಾನಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಅವರು ಮನ್ ಕೀ ಬಾತ್ ನಲ್ಲಿಯಾದರೂ ಹೇಳಲಿ ಅಥವಾ ಮಾಧ್ಯಮದ ಮುಂದಾದರೂ ಹೇಳಲಿ. ದೇಶದ ಜನರಿಗೆ ಪ್ರಧಾನ ಮಂತ್ರಿಗಳು ಉತ್ತರ ಹೇಳಬೇಕು. ವಿಶ್ವಗುರು ಟ್ರಂಪ್‌ ಅವರೋ ಅಥವಾ ಮೋದಿ ಅವರೋ? ಪಾಕಿಸ್ತಾನವನ್ನು ಇಂದಿರಾ ಗಾಂಧಿ ಹಿಂದೆ ಮಂಡಿಯೂರಿ ನಿಲ್ಲಿಸಿದ ಉದಾಹರಣೆ ಇದೆ ಎಂದರು.

ತಿರಂಗಾ ಯಾತ್ರೆ ಮೊದಲು ಮಾಡಿದ್ದು ನಾವು, ಈಗ ಬಿಜೆಪಿ ತಿರಂಗಾ ಯಾತ್ರೆ ಮಾಡುತ್ತಿದೆ. ಭಾರತ ದೇಶ ಯುದ್ಧ ಮಾಡಿದರೆ ಪಾಕಿಸ್ತಾನ ಭೂಪಟದಲ್ಲಿರುವುದಿಲ್ಲ. ನಮಗೆ ದೇಶ ಮುಖ್ಯ. ನಾವು ರಾಜಕಾರಣ ಮಾಡುವುದಿಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಉಗ್ರರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನ ವಿರುದ್ಧದ ಯುದ್ಧ ಇಷ್ಟು ಬೇಗ ನಿಲ್ಲಿಸಿದ್ದು ಯಾಕೆ? ಯಾರ ಮಾತು ಕೇಳಿ ನಿಲ್ಲಿಸಿದ್ದು? ಇದು ಎಷ್ಟು ಸರಿ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ರಾಜಕಾರಣ ಮಾಡುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದೇವೆ. ಬಿಜೆಪಿಯವರೇ ರಾಜಕಾರಣ ಮಾಡುತ್ತಿದ್ದಾರೆ. ಪಾಕಿಸ್ತಾನದೊಂದಿನ‌ ಯುದ್ಧದಲ್ಲಿ ಪರಾಕ್ರಮ ತೋರಿದ‌ ನಮ್ಮ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಇಡೀ ದೇಶ ಅವರೊಂದಿಗಿದೆ ಎಂದರು.

Leave a Reply