ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಯಶಸ್ಸಿನ ಕೀರ್ತಿ ಯೋಧರಿಗೆ ಸೇರಬೇಕು: ಸಿದ್ದರಾಮಯ್ಯ

11 months ago

ಮೈಸೂರು: ಪಾಕಿಸ್ತಾನದ ಕಿತಾಪತಿಗೆ ನಮ್ಮ ಯೋಧರು ತಕ್ಕ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಇದರ ಸಂಪೂರ್ಣ ಯಶಸ್ಸು ನಮ್ಮ ಯೋಧರಿಗೆ ಸಲ್ಲಬೇಕೆ ಹೊರತು ಯಾರು ಕೂಡ ಅದು ನಮ್ಮ ಯಶಸ್ಸು ಎಂದು ಹೇಳಿಕೊಳ್ಳಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಎಚ್ ಡಿ ಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ಸಿನ ಕೀರ್ತಿ ಯೋಧರಿಗೆ ಸೇರಬೇಕು. ಯಾವುದೇ ಪಕ್ಷ ಇದು ತಮ್ಮ ಸಾಧನೆ ಎಂದು ಹೇಳಿಕೊಳ್ಳಬಾರದು ಎಂದು ಹೇಳಿದರು.

1971ರ ಯುದ್ಧಕ್ಕೂ ಇವತ್ತಿನ ಸಂದರ್ಭಕ್ಕೂ ನಾನು ಹೋಲಿಕೆ ಮಾಡಿ ಮಾತನಾಡುವುದಿಲ್ಲ. ಅವತ್ತಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ ಎಂದರು.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಬಗ್ಗೆಯಾಗಲಿ, ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ. ನನ್ನ ಮಾತನ್ನು ಕದನ ವಿರಾಮಕ್ಕೆ ಮಾತ್ರ ಸಿಮಿತ ಗೊಳಿಸುತ್ತೇನೆ‌ ಎಂದರು.

ಕದನ ವಿರಾಮ ಘೋಷಣೆಗೂ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆಮಾಡಿ ನಿರ್ಧಾರ ಪ್ರಕಟಿಸಬಹುದಿತ್ತು. ಆದರೆ ಅದನ್ನು ಮಾಡಲಿಲ್ಲ ಎಂದರು.

ರಾಜ್ಯದಲ್ಲಿನ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನ ಹೊರಗೆ ಕಳುಹಿಸಿದ್ದೇವೆ‌. ಮೈಸೂರಿನಲ್ಲಿ ಮೂರು ಮಕ್ಕಳು ಮಾತ್ರ ಇದ್ದಾರೆ. ಅವರನ್ನ ಹೊರಗೆ ಕಳುಹಿಸಲು ತಾಂತ್ರಿಕ ಸಮಸ್ಯೆ ಇವೆ‌. ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವಳು. ಹೀಗಾಗಿ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಮಕ್ಕಳು ಮಾತ್ರ ಇಲ್ಲೆ ಇದ್ದಾರೆ ಎಂದರು.

Leave a Reply