ಜನ ದಂಗೆ ಎದ್ದರೆ ಯಾವುದೇ ಶಕ್ತಿಯಾದರೂ ಮಣಿಯಲೆಬೇಕು

3 years ago

#people #revolt #nomatter #power #must #yield #baldota

ಕೊಪ್ಪಳ: ತಾಳಿ ತಾಳಿ ಒಮ್ಮೆ ಗೂಳಿಯಾಗಿ ಗುದ್ದುವನು ಸಾಮಾನ್ಯನಲ್ಲೊ ಬಡ ಜೀವಿ (ಅಥವ ರೈತ ಕಾರ್ಮಿಕ) ಎನ್ನುವ ಕ್ರಾಂತಿಕಾರಿ ಜನಪರ ಹಾಡಿನ ಒಂದು ಸಾಲಿನಂತೆ ಇಂದು ಬಸಾಪುರ ಹಾಲವರ್ತಿ ಗ್ರಾಮದ ರೈತರು MSPL ಬಲ್ಡೋಟ ಕಂಪನಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಕರ್ನಾಟಕ ರೈತ ಸಂಘ (KRS-AIKKS)TUCI ಹಾಗೂ ಮೈಲಾರ ಲಿಂಗೇಶ್ವರ ಕುರಿ ಸಾಕಾಣಿಕ ಮತ್ತು ಉಣ್ಣೆ ಉತ್ಪಾದಕರ ಸಂಘದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಹಗ್ಗದ ಬೆಲೆಗೆ (ಕನಿಷ್ಠ 3 ಲಕ್ಷ ಗರಿಷ್ಠ 5 ಲಕ್ಷ ಕ್ಕೆ ಒಂದು ಎಕರೆ) ತಮ್ಮ ಸಾವಿರಾರು ಎಕರೆ ಭೂಮಿ ಕಳೆದುಕೊಂಡ ಮೂರು ಗ್ರಾಮಗಳ ರೈತರ ತಾಳ್ಮೆಯ ಕಟ್ಟೆ ಒಡೆದಿದೆ. ಕೈಗಾರಿಕೆಗೆ 200 ಎಕರೆ ಮಾತ್ರ ಉಪಯೋಗವಾಗಿದೆ. ಇನ್ನುಳಿದ 800 ಎಕರೆ ಭೂಮಿ ಪಾಳು ಬಿದ್ದಿದೆ. ಈ ಭೂಮಿಯ ಪೈಕಿ ಹೆಚ್ಚಿನ ಭೂಮಿಯು ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಬೇರೆ ಬೇರೆಯವರ ಕೈ ಸೇರಲಿದೆ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ. ಈಗಿನ ಬೆಲೆ ಎಕರೆಗೆ 50 ರಿಂದ 70 ಲಕ್ಷ ಇದೆ ಎಂದು ಹೇಳಿದ್ದಾರೆ.

ಹೈಕೋರ್ಟ್ ನಲ್ಲಿ ಗೆಲವು ಸಾದಿಸಿದ್ದ ಭೂ ಸಂತ್ರಸ್ತ ರೈತರಿಗೆ ಸುಪ್ರೀಂ ಕೋರ್ಟ್ ನಲ್ಲಿ ಸೋಲಾಗಿದೆ. ಕಂಪನಿಯವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಭೂಮಿ ಕಳೆದುಕೊಂಡ ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ರೈತರು ತಮ್ಮ ಭೂ ಪ್ರಕರಣವನ್ನು ಮರು ಪರಿಶೀಲನೆಗೊಳಪಡಿಸಲು ಸುಪ್ರೀಂ ಕೋರ್ಟಿನಲ್ಲಿ ಪುನಃ ದಾವೆ ಹೂಡಿದ್ದಾರೆ ಎಂದು ಮಾಹಿತಿ ನೀಡಿದರು.

ಆದರೂ ಕೂಡ ಕಂಪನಿಯವರು ಸಾವಿರಾರು ಎಕರೆ ಭೂಮಿಯ ಸುತ್ತ ರಾತ್ರೋ ರಾತ್ರಿ ಕೋಟೆ ಗೋಡೆಯ ರೀತಿಯಲ್ಲಿ ಕಂಪೌಂಡ್ ಕಟ್ಟುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ 44 ಎಕರೆ ಕೆರೆ ಭೂಮಿಗೆ ಸಂಬಂಧವಿಲ್ಲದಿದ್ದರು ಕಾನೂನ ಬಾಹಿರವಾಗಿ ಕಂಪೌಂಡ್ ಕಟ್ಟಲು ಮುಂದಾಗಿದ್ದರು. ರೊಚ್ಚಿಗೆದ್ದ ಗ್ರಾಮಗಳ ರೈತರು ಕೆರೆಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ರಸ್ತೆಯನ್ನು ಅಗೆದು ಪ್ರತಿಭಟನೆ ಮಾಡಿದರು.

ವಿಠಪ್ಪ ಗೋರಂಟ್ಲಿ ನೇತೃತ್ವದಲ್ಲಿ 2009 ರಿಂದ 2022 ರವರಿಗೆ ಹೈ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸಿದ್ದರಿಂದ ಗೆಲವು ದೊರೆತಿದೆ. ನಕಲಿ ಹೋರಾಟಗಾರರಿಗೆ ಇಂತಹ ಅವಕಾಶ ಸಿಕ್ಕಿದ್ದರೆ ಕೋಟ್ಯಂತರ ರೂ ಡೀಲ್ ಮಾಡಿಕೊಳ್ಳುತ್ತಿದ್ದರು. ರಾಜ್ಯದ ರಾಜಧಾನಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ನಕಲಿ ಹೋರಾಟಗಾರರು, ನೆಲಗಳ್ಳರ ವಿರುದ್ಧ ಹೋರಾಡಿ ನಂತರ ಕೋಟ್ಯಂತರ ರೂ.ಡೀಲ್ ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಮುಂದಿವೆ ಎಂದು ಅವರು ಆರೋಪಿಸಿದರು.

ದಿವಂಗತ ವಿಠಪ್ಪ ಗೋರಂಟ್ಲಿಯವರು ಸೇರಿದಂತೆ ನಾವು 5 ಜನರು MSPL ಕಂಪನಿಯೊಂದಿಗೆ ರಾಜಿಯಾಗಲಿಲ್ಲ. ಕೊಪ್ಪಳ ನಗರದ ರಾಜಕಾರಣಿಯೊಬ್ಬರು MSPL ಕಂಪನಿಯ ಮಾಲಿಕ ರಾಹುಲ ಬಲ್ಡೋಟಾ ರನ್ನು ಭೇಟಿ ಮಾಡಿಸಲು (ಕೆರೆ ಕೇಸ್ ನಲ್ಲಿ ರಾಜಿ ಮಾಡಿಕೊಳ್ಳಲು) ಮುಂಬೈಗೆ ನಮ್ಮನ್ನು ಕರೆದಿದ್ದರು. ನಾವು ನಯವಾಗಿ ಅವರ ಸಂಧಾನ ಹಾಗೂ ರಾಜಿ ಮಾಡಿಸುವ ಪ್ರಸ್ತಾಪವನ್ನು ತಿರಸ್ಕರಿಸಿದೆವು. ಇದೆ ರೀತಿ ಆಲ್ಟ್ರಾಟೇಕ್ ಸಿಮೆಂಟ್ ಕಂಪೆನಿ ವಿರುದ್ಧ ಹೋರಾಡಿ ಕೋಟ್ಯಂತರ ಬೆಲೆ ಬಾಳುವ ಹತ್ತಾರು ಎಕರೆ ಸರ್ಕಾರಿ ಭೂಮಿಯನ್ನು ಸಹ ರಕ್ಷಣೆ ಮಾಡಲಾಗಿದೆ. ಈ ಕಂಪನಿಯ ರಾಜಿ ಸಂಧಾನ ಮತ್ತು ಹತ್ತಾರು ಲಕ್ಷ ರೂ. ಡೀಲ್ ವ್ಯವಹಾರನ್ನು ತಿರಸ್ಕರಿಸಿ, ಗಿಣಿಗೇರ ಗ್ರಾಮದ ಜನರ ಪ್ರೀತಿ ಮತ್ತು ಗೌರವವನ್ನು ಉಳಿಸಿಕೊಂಡಿದ್ದೇವೆ ಎಂದರು.

MSPL ಬಲ್ಡೋಟ್ ಕಂಪನಿ ಕೋಟ್ಯಂತರ ರೂ. ಗೆ ನಮ್ಮೆಲ್ಲರನ್ನು ಖರೀದಿಸಲು ಪ್ರಯತ್ನಿಸಿ ವಿಫಲವಾದ ನಂತರ, ನಮ್ಮ ಮೇಲೆ ದೌರ್ಜನ್ಯ ನಡೆಸುವ ಕಾರ್ಯಕ್ಕೆ ಮುಂದಾಗಿತ್ತು. ಒಂದು ಬಾರಿ (2010 ರಲ್ಲಿ) ನಾವು ಕೆರೆಯ ವೀಕ್ಷಣೆಗೆ ಹೋದಾಗ ಕಂಪನಿ ಗೂಂಡಾಗಳು ಹಲ್ಲೆಗೆ ಪ್ರಯತ್ನಿಸಿದ್ದರು, ನಮ್ಮ ಕಾರ್ಯಕರ್ತರು ಕೂಡ ಎದಿರೇಟು ಕೊಡಲು ಮುಂದಾಗಿದ್ದರು. ನಾವು ಅವರ ವಿರುದ್ಧ ದೂರು ದಾಖಲಿಸಿದೆವು. ಅವರು ನಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದರು. ಬಸಾಪುರ ಗ್ರಾಮ ಘಟಕದ ನಮ್ಮ ರೈತ ಸಂಘದ ಇಬ್ಬರು ಕಾರ್ಯಕರ್ತರನ್ನು ಎರಡು ದಿನಗಳವರೆಗೆ ಜೈಲಲ್ಲಿ ಇಟ್ಟಿದ್ದರು. ನಾವು 5 ವರ್ಷ ಕೊಪ್ಪಳ ಕೋರ್ಟಿಗೆ ಅಲೆದಾಡಿ ಕೇಸ್ ಮುಗಿಸಿಕೊಂಡೆವು. ಆ ಸಂದರ್ಭಲ್ಲಿ ಕಂಪನಿಯ ಮೇನೇಜರ್ ಆಗಿದ್ದ ಶ್ರೀನಿವಾಸ ಈಗಲೂ ಓರಿಸ್ಸಾದಿಂದ ಕೊಪ್ಪಳ ಕೋರ್ಟಿಗೆ ( ಪ್ಲೈಟ್ ನಲ್ಲಿ) ಬಂದು ಹೋಗುತ್ತಾನೆ. ಒಟ್ಟಾರೆ MSPL ಕಂಪನಿಯವರಿಗೆ ನಮ್ಮ ಬದ್ಧತೆ ಅರ್ಥವಾಗಿದೆ ಎಂದರು.

2022 ಜನವರಿಯಲ್ಲಿ ಹೈ ಕೋರ್ಟ್, ಕೆರೆಯನ್ನು ಬಸಾಪುರ ಹಾಗೂ ಸುತ್ತಲ ಗ್ರಾಮಗಳ ಜನರು ಉಪಯೋಗಿಸಲು ತಕರಾರು ಮಾಡಬಾರದೆಂದು ತೀರ್ಪು ನೀಡಿದೆ. ಕೋರ್ಟ್ ಆದೇಶ ಉಲ್ಲಂಘಿಸಿದ MSPL ಬಲ್ಡೋಟಾ ಕಂಪನಿ ಆಡಳಿತದವರು ಜಾನುವಾರುಗಳು, ದನಕರುಗಳು ಕುರಿ ಮೇಕೆಗಳಿಗೆ ನೀರು ಕುಡಿಯಲು ಅವಕಾಶ ನೀಡಿರಲಿಲ್ಲ. ರೊಚ್ಚಿಗೆದ್ದ ಎರಡು ಗ್ರಾಮಗಳ ಜನರು ಇಂದು ಬೆಳಿಗ್ಗೆ 10 ಗಂಟೆಗೆ ಕೆರೆಯ ದಂಡೆಯ ಹತ್ತಿರ ಪ್ರತಿಭಟನೆ ನಡೆಸಿದರು. ಪೋಲೀಸ ಅಧಿಕಾರಿಗಳು ರೈತರನ್ನು ಸಮಾಧಾನ ಮಾಡಲು ಮುಂದಾದರು.

ಮಳೆಯ ಕೊರತೆಯಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಕಂಪನಿಯವರು ಕೆರೆಯ ನೀರನ್ನು ಖಾಲಿ ಮಾಡುತ್ತಿದ್ದಾರೆಂದು ರೈತರು ಅಧಿಕಾರಿಗಳಿಗೆ ಹೇಳಿದರು. ಅಧಿಕಾರಿಗಳು, ಕಂಪನಿಯವರಿಗೆ ಒತ್ತಡ ಹಾಕಿ ಕೈಗಾರಿಕೆಗೆ ನೀರು ಬಳಕೆ ಮಾಡಿಕೊಳ್ಳಬಾರದು ಮತ್ತು ಕುರಿ ಮೇಕೆ, ಜಾನುವಾರುಗಳಿಗೆ ನೀರಿನ ಅನುಕೂಲ ಮಾಡಬೇಕೆಂದು ತಾಕೀತು ಮಾಡಿದರು.

10 ದಿನಗಳಲ್ಲಿ ಅತಿಕ್ರಮಣಗೊಂಡಿರುವ (ಮುಚ್ಚಿರುವ 10 ಎಕರೆ ಕೆರೆಯನ್ನು ಪುನರ್ನಿರ್ಮಾಣ ಮಾಡಬೇಕು) ಕೆರೆಯ ಭೂಮಿಯನ್ನು ಬಿಡದಿದ್ದರೆ, ಪುನಃ ಹೋರಾಟ ನಡೆಸಲು ರೈತರು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೋರಾಟಗಾರರು, ಜನರು ದಂಗೆ ಎದ್ದರೆ ಯಾವುದೆ ಶಕ್ತಿಯು ಮಣಿಯಲೆಬೇಕು. ಹೈಕೋರ್ಟ್ ಆದೇಶಕ್ಕೆ ಮತ್ತುಈ ದಿನದ ರೈತರ ಹೋರಾಟಕ್ಕೆ ತಾತ್ಕಾಲಿಕ ಜಯ ದೊರೆತಿದೆ ಎಂದಿದ್ದಾರೆ.

Leave a Reply