ಸಂಘಟನಾತ್ಮಕ ಎಲ್ಲಾ ಜವಾಬ್ದಾರಿಗಳಿಗೂ ರಾಜೀನಾಮೆ ನೀಡುತ್ತೇನೆ: ವೀಣಾ ಕಾಶಪ್ಪನವರ್

2 years ago

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಆದರೆ ಸಂಘಟನಾತ್ಮಕ ಎಲ್ಲಾ ಜವಾಬ್ದಾರಿಗಳಿಗೂ ರಾಜೀನಾಮೆ ನೀಡುತ್ತೇನೆ ಎಂದು ವೀಣಾ ಕಾಶಪ್ಪನವರ್ ಹೇಳಿದರು.

ಪ್ರಸ್ತುತ ವಿದ್ಯಮಾನಗಳ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕ್ರೀನಿಂಗ್ ಕಮಿಟಿವರೆಗೂ ನನ್ನ ಹೆಸರಿತ್ತು. ಅಜಯ್ ಕುಮಾರ್ ಸರ್ ನಾಯಕ್ ಮತ್ತು ನನ್ನ ಹೆಸರಿಗೆ ಮಾತ್ರ ಬೆಂಬಲ ನೀಡಿದ್ದಾಗಿ ಜಿಲ್ಲೆಯ ಶಾಸಕರು ತಿಳಿಸಿದ್ದರು. ಆದರೆ ಹೈಕಮಾಂಡ್ ನ ಸಭೆಗೆ ನನ್ನ ಹೆಸರು ಹೋಗಿಲ್ಲ. ಇದರ ಹಿಂದೆ ಷಡ್ಯಂತ್ರ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆರೋಪಿಸಿದರು.

ಪಂಚಮಸಾಲಿ ಸಮುದಾಯದ ಹೆಣ್ಣುಮಗಳು ಪ್ರಬಲವಾಗಿ ಬೆಳೆಯುವುದನ್ನು ಕೆಲವರಿಗೆ ಸಹಿಸಿಕೊಳ್ಳಲಾಗಿಲ್ಲ. ಕಾಂಗ್ರೆಸ್ನ ಘೋಷಿತ ಅಭ್ಯರ್ಥಿ ಸಂಯುಕ್ತ ಪಾಟೀಲ್ ನೆರೆಯ ಬಿಜಾಪುರ ಜಿಲ್ಲೆಯವರು. ಆಕೆಯ ಗಂಡನ ಮನೆ ಬೀದರ್. ಅಲ್ಲಿಂದ ಬೇಕಾದರೆ ಸ್ಪರ್ಧಿಸಬಹುದಿತ್ತು. ಬಾಗಲಕೋಟೆಗೆ ಬಂದು ಸ್ಪರ್ಧೆ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಸಮರ್ಥಳು. ಯಾವ ಸ್ಥಾನಮಾನಕ್ಕೂ ಅರ್ಹಳಲ್ಲ ಎಂಬ ಭಾವನೆ ಮೂಡಿದಂತಾಗಿದೆ. ಈ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದ್ದು, ಆರೋಗ್ಯ ಹದಗೆಟ್ಟಿದೆ. ಎರಡು ದಿನಗಳ ಕಾಲ ವಿಶ್ರಾಂತಿ ಪಡೆದು ನಂತರ ಬಾಗಲಕೋಟೆಗೆ ಹೋಗಿ ಸ್ಥಳೀಯ ನಾಯಕರು ಹಾಗೂ ಬೆಂಬಲಿಗರ ಜೊತೆ ಚರ್ಚೆ ಮಾಡುತ್ತೇನೆ ಎಂದರು.

Leave a Reply