ದಲಿತ ಸಿಎಂ ಕೂಗಿಗೆ ಬಲ ತುಂಬಲು ದಾವಣಗೆರೆಯಲ್ಲಿ ಐತಿಹಾಸಿಕ ಸಮಾವೇಶ

8 months ago

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಯ ಮಾತು ಜೀವಂತವಾಗಿರುವ ಬೆನ್ನಲ್ಲೇ ಅಕ್ಟೋಬರ್ ಕ್ರಾಂತಿಗೆ ದಲಿತ ನಾಯಕರು ಸಜ್ಜಾಗಿದ್ದಾರೆ. ದಲಿತ ಸಿಎಂ ಕೂಗಿಗೆ ಬಲ ತುಂಬಲು ದಾವಣಗೆರೆಯಲ್ಲಿ ಐತಿಹಾಸಿಕ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.

ದಲಿತ ಸಮುದಾಯದ ಬಹುದಿನದ ಬೇಡಿಕೆಯಾದ ಒಳಮೀಸಲಾತಿ ವಿವಾದವನ್ನು ಮಂಗಳವಾರ ಸಂಪುಟ ಸಭೆ ಇತ್ಯರ್ಥಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯವನ್ನು ಮರೆತ ದಲಿತ ಸಮುದಾಯಗಳು ಒಗ್ಗೂಡಿ ಬಲ ಪ್ರದರ್ಶನಕ್ಕೆ ತೀರ್ಮಾನಿಸಿದ್ದಾರೆ.

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನದ ಸಮಾವೇಶ ಮಾಡಲಿದ್ದು, ಇದರಲ್ಲಿ ಸುಮಾರು ಐದು ಲಕ್ಷ ಮಂದಿ ಸೇರಿಸುವ ಗುರಿ ಹೊಂದಲಾಗಿದೆ.

ಜನಸಂಖ್ಯೆಯಲ್ಲಿ ರಾಜ್ಯದ ನಂಬರ್ ಒನ್ ಸ್ಥಾನದಲ್ಲಿರುವ ದಲಿತರಿಗೆ ಈ ಬಾರಿ ಮುಖ್ಯಮಂತ್ರಿ ಹುದ್ದೆ ದಕ್ಕಲೇಬೇಕು ಎಂಬ ಘೋಷಣೆಯೊಂದಿಗೆ ನಡೆಯಲಿರುವ ಸಮಾವೇಶ ಇಡೀ ದೇಶದ ಗಮನವನ್ನು ತನ್ನತ್ತ ಸೆಳೆಯುವ ಉದ್ದೇಶ ಹೊಂದಿದೆ.

ಸ್ವಾತಂತ್ರ್ಯೋತ್ತರ ಕರ್ನಾಟಕದ ಇತಿಹಾಸಕ್ಕೆ ಎಂಟು ದಶಕಗಳು ಪೂರ್ಣಗೊಳ್ಳುತ್ತಿದ್ದು, ಇಷ್ಟಾದರೂ ಇದುವರೆಗೆ ಒಬ್ಬೇ ಒಬ್ಬ ದಲಿತ ನಾಯಕ ರಾಜ್ಯದ ಮುಖ್ಯಮಂತ್ರಿಯಾಗಿಲ್ಲ. ಇದು ಅಸಮಾನತೆಯ ಪರಾಕಾಷ್ಟೆ ಎಂದು ಸಮಾವೇಶ ಪ್ರತಿಪಾದನೆ ಮಾಡಲಿದೆ.

2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಸಿದ್ಧರಾಮಯ್ಯ ಕೆಳಗಿಳಿಯಲಿದ್ದಾರೆ ಎಂಬ ಮಾತು ಜೀವಂತವಾಗಿರುವುದೇ ದಲಿತ ಸಮಾವೇಶದ ಮೂಲ ಪ್ರೇರಣೆ.

ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಕಾಂಗ್ರೆಸ್ ನಲ್ಲಿ ಕೇಳಿ ಬರುತ್ತಿರುವ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಸ್ವತ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಬ್ರೇಕ್ ಹಾಕಿದ್ದರಾದರೂ, ಅಧಿಕಾರ ಹಂಚಿಕೆಯ ಮಾತು ಬೂದಿ ಮುಚ್ಚಿದ ಕೆಂಡದಂತೆ ಇದ್ದೇ ಇದೆ.

ಮೂಲಗಳ ಪ್ರಕಾರ, ಅಧಿಕಾರ ಹಂಚಿಕೆಯ ಒಪ್ಪಂದವಾಗಿಲ್ಲ ಎಂದು ಸಿದ್ಧರಾಮಯ್ಯ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರೂ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಧಿಕಾರ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡರೆ ಸಿದ್ಧರಾಮಯ್ಯ ಅವರು ಇಲ್ಲ ಅನ್ನಲಾರರು.

ಸುಮಾರು ಎರಡು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗಿನಿಂದ ರಾಜ್ಯ ಕಾಂಗ್ರೆಸ್ ನಲ್ಲಿ ತಮ್ಮ ದಾರಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡಿರುವ ಸೋನಿಯಾಗಾಂಧಿ ಅವರ ಬಗ್ಗೆ ಸಿದ್ಧರಾಮಯ್ಯ ಅವರಿಗೆ ಅಪಾರ ಗೌರವವಿದ್ದು, ಈ ಹಿನ್ನೆಲೆಯಲ್ಲಿ ಅವರೇ ಕೋರಿಕೊಂಡರೆ ಸಿದ್ದರಾಮಯ್ಯ ಅನಿವಾರ್ಯವಾಗಿ ಒಪ್ಪುತ್ತಾರೆ ಎಂಬುದು ಮೂಲಗಳ ಮಾತು.

ಆದರೆ ಹೀಗೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಧಿಕಾರ ಬಿಟ್ಟುಕೊಡಲು ಮನವಿ ಮಾಡಿಕೊಂಡಾಗ, ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲೇ ನಡೆಯಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಅಪಾಯವಿದೆ ಎಂದು ಹೇಳಲು ಸಿದ್ಧರಾಮಯ್ಯ ತಯಾರಿ ಮಾಡಿಕೊಂಡಿದ್ದಾರೆ. ಹೀಗೆ ಅವರು ಹೇಳಿದ್ದಕ್ಕೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಒಪ್ಪಿಕೊಂಡರೆ, ಶಾಸಕಾಂಗ ಪಕ್ಷದಲ್ಲಿ ನಡೆಯುವ ಚುನಾವಣೆಯಲ್ಲಿ ದಲಿತ ನಾಯಕರೊಬ್ಬರು ಕಣಕ್ಕಿಳಿಯಲಿದ್ದಾರೆ.

ಒಂದು ವೇಳೆ ಭವಿಷ್ಯದ ನಾಯಕನ ಆಯ್ಕೆಗಾಗಿ ಶಾಸಕಾಂಗ ಪಕ್ಷದಲ್ಲಿ ಚುನಾವಣೆ ನಡೆಸುವುದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಇಷ್ಟವಿಲ್ಲದಿದ್ದರೆ ಸರ್ಕಾರಕ್ಕೆ ಅಪಾಯ ಎದುರಾಗಲಿದೆ ಎಂಬುದು ಮೂಲಗಳ ಮಾತು.

ಇಂತಹ ಮಾತುಗಳ ನಡುವೆಯೇ ದಲಿತ ಸಿಎಂ ಕೂಗು ಪುನ: ಮೇಲಕ್ಕೆದ್ದಿದ್ದು, ಇದಕ್ಕೆ ಪೂರಕವಾಗಿ ಅಕ್ಟೋಬರ್ ತಿಂಗಳಲ್ಲಿ ಐತಿಹಾಸಿಕ ಸಮಾವೇಶವನ್ನು ದಾವಣಗೆರೆಯಲ್ಲಿ ನಡೆಸಲು ದಲಿತ ನಾಯಕರು ನಿರ್ಧರಿಸಿದ್ದಾರೆ.

ಈ ಹಿಂದೆ ಬಿ.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ,ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆಯ ಸನಿಹ ಬಂದಿದ್ದರೂ ಕೊನೆಯ ಕ್ಷಣದಲ್ಲಿ ವಂಚಿತರಾಗಿದ್ದರು. ಆದರೆ ಈ ಬಾರಿ ಸಿದ್ಧರಾಮಯ್ಯ ಅವರು ಕೆಳಗಿಳಿಯುವುದು ನಿಶ್ಚಿತವಾದರೆ, ಅವರ ಜಾಗಕ್ಕೆ ದಲಿತ ನಾಯಕರೊಬ್ಬರು ಬರಬೇಕು. ರಾಜ್ಯದ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಿರುವ ದಲಿತರಿಗೆ ಯಾವ ಕಾರಣಕ್ಕೂ ಈ ಬಾರಿ ಅವಕಾಶ ತಪ್ಪಬಾರದು ಎಂಬ ಹಕ್ಕೊತ್ತಾಯದೊಂದಿಗೆ ಈ ಐತಿಹಾಸಿಕ ದಲಿತ ಸಮಾವೇಶ ನಡೆಯಲಿದ್ದು, ಆ ಮೂಲಕ ರಾಜ್ಯ ರಾಜಕಾರಣ ಕುತೂಹಲಕಾರಿ ತಿರುವು ಪಡೆಯುವುದು ನಿಕ್ಕಿಯಾಗಿದೆ.

Leave a Reply