ಬೆಂಗಳೂರು: ಹಲವು ಸಂಕಷ್ಟಗಳಿಂದ ಬಳಲುತ್ತಿದ್ದ ವ್ಯಕ್ತಿ ಒಬ್ಬ ತನ್ನ ಬದುಕನ್ನು ಹಸನಾಗಿಸಿಕೊಳ್ಳಲು ಭವಿಷ್ಯ ಕೇಳಲು ಹೋದರೆ ಪರಿಹಾರ ಹೇಳಬೇಕಾದ ಜ್ಯೋತಿಷಿ, ಆ ವ್ಯಕ್ತಿಯ ಬದುಕನ್ನೇ ಕಸಿದುಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಜ್ಯೋತಿಷ್ಯ ಕೇಳಲು ಬಂದ ವ್ಯಕ್ತಿಗೆ ಖತರ್ನಾಕ್ ಜ್ಯೋತಿಷಿ ಭವಿಷ್ಯ ಹೇಳುವ ನೆಪದಲ್ಲಿ ಆತನ ಬಳಿ ಇದ್ದ 73 ಗ್ರಾಂ ಚಿನ್ನದ ಗಟ್ಟಿ ದೋಚಿ ಪರಾರಿಯಾಗಿದ್ದಾನೆ. ಕುಂಬಾರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನ ಬಳಿ ನಡೆದಿದೆ.
ಧರ್ಮರಾಯಸ್ವಾಮಿ ದೇವಸ್ಥಾನ ಬಳಿ ಚಿನ್ನದ ವ್ಯಾಪಾರಿಯೊಬ್ಬರಿಗೆ ಬಂಗಾಲಿ ಜ್ಯೋತಿಷಿಗಳು ಎಂದು ನಂಬಿಸಿ ನಿನ್ನ ಕೈ ರೇಖೆಯನ್ನು ನೋಡಿ ಭವಿಷ್ಯ ಹೇಳುತ್ತೇವೆ ಎಂದು ನಂಬಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮೊಂದಿಗೆ ಬಂದರೆ ಕೈ ನೋಡಿ ಒಳ್ಳೆಯ ಮಂತ್ರಿಸಿದ ದಾರವನ್ನು ಕೊಡುವುದಾಗಿ ಹೇಳಿದ್ದಾರೆ. ನಕಲಿ ಜ್ಯೋತಿಷಿಗಳ ಮಾತಿಗೆ ಮರುಳಾದ ಸುಮನ್ ಅವರೊಟ್ಟಿಗೆ ಹೋಗಿದ್ದಾರೆ. ಕುಡಿಯಲು ಯಾವುದೋ ನೀರನ್ನು ತೀರ್ಥ ಎಂದು ನೀಡಿದ್ದು ಅದನ್ನು ಕುಡಿದ ಬಳಿಕ ಏನಾಗುತ್ತಿದೆ ಎಂದು ತಿಳಿಯದ ಸುಮನ್, ನಕಲಿ ಜ್ಯೋತಿಷಿಗಳು ಹೇಳಿದ ಹಾಗೇ ಮಾಡಿದ್ದಾರೆ.
ಈ ವೇಳೆ ತನ್ನ ಬಳಿ ಇಟ್ಟುಕೊಂಡಿದ್ದ ಚಿನ್ನದ ಗಟ್ಟಿಯನ್ನು ಕೊಡು ಎಂದು ಕೇಳಿದ ಕೂಡಲೇ ಅರಿವಿಗೆ ಬಾರದೆ ತಂದಿದ್ದ 75 ಗ್ರಾಂ ಚಿನ್ನದ ಗಟ್ಟಿಯನ್ನು ಕೊಟ್ಟಿದ್ದಾರೆ.
ನಂತರ ವಂಚಕರು ಈತನಿಗೆ 100 ಹೆಜ್ಜೆ ಮುಂದಕ್ಕೆ ಹೋಗಿ ವಾಪಸ್ ಬರುವಂತೆ ತಿಳಿಸಿದ್ದಾರೆ. ಅವರು ಹೇಳಿದಂತೆ ಸ್ವಲ್ಪ ಮುಂದೆ ನಡೆದು ಹೋಗಿ ಹಿಂದಿರುಗಿ ನೋಡುವಷ್ಟರಲ್ಲಿ, ಖದೀಮರು ಪರಾರಿಯಾಗಿದ್ದಾರೆ .
ಜ್ಯೋತಿಷಿಗಳ ಮಾತು ಕೇಳಿ ಮೋಸ ಹೋಗಿರುವ ಚಿನ್ನದ ವ್ಯಾಪಾರ ಸುಮನ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಕೇಂದ್ರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.




