ಸಿಎಂ ಆಗಿ ಐದು ವರ್ಷ ಪೂರ್ಣಗೊಳಿಸುತ್ತೇನೆ ಎಂದಿರುವ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ: ಡಿ.ಕೆ.ಶಿವಕುಮಾರ್

5 months ago

ಬೆಂಗಳೂರು: ಅಧಿಕಾರ ಹಸ್ತಾಂತರ ಚರ್ಚೆ ನಡೆದಿರುವಾಗ ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು  ಹೇಳಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭಾಶಯ ಕೋರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿ ಐದು ವರ್ಷ ಪೂರ್ಣಗೊಳಿಸುತ್ತೇನೆ ಎಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿರುವುದಾಗಿ ತಿಳಿಸಿದರು.

ತಾವು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಎಲ್ಲ 140 ಮಂದಿ ಕಾಂಗ್ರೆಸ್ ಶಾಸಕರಿಗೂ ನಾಯಕನಾಗಿದ್ದೇನೆ. ನನಗೆ ಯಾವುದೇ ಬಣ ಇಲ್ಲ. ಈ ಬಣ ರಾಜಕಾರಣದಲ್ಲಿ ನನಗೆ ನಂಬಿಕೆ ಇಲ್ಲ. ಎಲ್ಲಾ 140 ಶಾಸಕರು ನನ್ನ ಬಣದಲ್ಲಿಯೇ ಇದ್ದಾರೆ ಎಂದರು.

ಸಿಎಂ ಹೈಕಮಾಂಡ್ ಹೇಳಿದಂತೆ ಕೇಳುತ್ತಾರೆ. ಹೈಕಮಾಂಡ್ ಹೇಳಿದರೆ ಮಂತ್ರಿಮಂಡಲ ಪುನಾರಚನೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನದ ಮೇಲೆ ಕಣ್ಣು ಇಟ್ಟಿರುವ ಅನೇಕ ಮಂದಿ ಶಾಸಕರು ತಮ್ಮನ್ನು ಭೇಟಿ ಮಾಡಿ ಅವರ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಗುಂಪು ರಾಜಕಾರಣ ಅಥವಾ ಬಣ ರಾಜಕಾರಣ ಎಂದು ಹೇಳುವುದು ತಪ್ಪು ಎಂದರು.

ಕೆಲವು ಶಾಸಕರು ಕೂಡ ಇದೇ ಕಾರಣಕ್ಕೆ ದೆಹಲಿಗೆ ಹೋಗಿರಬಹುದು. ಹೈಕಮಾಂಡ್ ನ ನಾಯಕರನ್ನು ಭೇಟಿ ಮಾಡಿ ತಮಗೆ ಮಂತ್ರಿ ಮಾಡುವಂತೆ ಮನವಿ ಮಾಡುತ್ತಿರಬಹುದು. ಈ ಬಗ್ಗೆ ತಮಗೆ ತಮಗೇನೂ ತಿಳಿದಿಲ್ಲ. ಆದರೆ ಎಂದಿಗೂ ತಾವು ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ತಮ್ಮನ್ನು ಸಿಎಂ ಮಾಡಿ ಎಂದು ಕೇಳುವುದಿಲ್ಲ ಹೈಕಮಾಂಡ್ ಗೆ ಎಲ್ಲವೂ ಗೊತ್ತಿದೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

Leave a Reply