ಕಳ್ಳಸಾಗಣೆ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಗಳು ಶಾಮೀಲು

1 year ago

ಬೆಂಗಳೂರು: ವಿದೇಶಗಳಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡಿದ ಆರೋಪದಲ್ಲಿ ಚಿತ್ರನಟಿ ರನ್ಯಾ ರಾವ್ ಅವರನ್ನು ಬಂಧಿಸಿರುವ ಕಂದಾಯ ಗುಪ್ತಚರ ಇಲಾಖೆ ಈಗ ಈ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಗಳು ಶಾಮೀಲಾಗಿರುವುದನ್ನು ಪತ್ತೆಹಚ್ಚಿದೆ.

ಈ ಕುರಿರು ರನ್ಯಾ ರಾವ್ ಅವರು ನೀಡಿರುವ ಮಾಹಿತಿಯನ್ನು ಆಧರಿಸಿ ಬಳ್ಳಾರಿ ಮೂಲದ ವ್ಯಾಪಾರಿ ಸಾಹಿಲ್ ಜೈನ್ ಎಂಬಾತನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಕಳೆದ ರಾತ್ರಿ ಬಂಧಿಸಿ ವಿಚಾರಣೆ ನಡೆಸಿದೆ.

ಬಂದಿತ ಸಾಹಿಲ್ ಜೈನ್ ಚಿನ್ನದ ವ್ಯಾಪಾರಿಯಾಗಿದ್ದು, ರನ್ಯಾ ರಾವ್ ಕಳ್ಳಸಾಗಣೆ ಮಾಡಿದ ಚಿನ್ನವನ್ನು ವಿಲೇವಾರಿ ಮಾಡಲು ಮತ್ತು ಮಾರಾಟದ ಆದಾಯವನ್ನು ಹಂಚಿಕೊಳ್ಳಲು ಸಹಾಯ ಮತ್ತು ಪ್ರೋತ್ಸಾಹ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಕಳೆದ ಮಾರ್ಚ್ 3ರಂದು ದುಬೈನಿಂದ ಬಂದ ರನ್ಯಾ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ 12.56 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸಾಹಿಲ್ ಚಿಕ್ಕಂದಿನಿಂದಲೇ ಸೋದರ ಮಾವನ ಜೊತೆಯಲ್ಲಿ ಮುಂಬೈನಲ್ಲಿ ವಾಸ ಮಾಡುತ್ತಿದ್ದ. ಈಗಾಗಲೇ ಇದೇ ರೀತಿಯ ಪ್ರಕರಣದಲ್ಲಿ ಸಾಹಿಲ್ ಮುಂಬೈನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿದ್ದ. ಕಸ್ಟಮ್ಸ್ ಅಧಿಕಾರಿಗಳು ಮುಂಬೈ ಏರ್ಪೋರ್ಟ್ ನಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿಯೇ ಸಾಹಿಲ್ ಜೈನ್ ಬಂಧಿತನಾಗಿದ್ದ.

ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರುವ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು. ಸದ್ಯ ಸಾಹಿಲ್ ಜೈನ್ ವಶಕ್ಕೆ ಪಡೆದಿರುವ ಡಿಆರ್ಐ ಅಧಿಕಾರಿಗಳು ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ಗೂ ನೋಟೀಸ್ ನೀಡಿದ್ದಾರೆ. ಈ ನಡುವೆ ಪ್ರಕರಣದಲ್ಲಿ ಬಂದಿಯಾಗಿರುವ ನಟಿ ರನ್ಯಾ ರಾವ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಮಾಡಿದೆ.

Leave a Reply