ನಟಿ ರನ್ಯಾ ರಾವ್ ಪ್ರಕರಣ: ಸಿಐಡಿ ತನಿಖೆಗೆ ಆದೇಶ

1 year ago

ಬೆಂಗಳೂರು: ವಿದೇಶದಿಂದ  ಅಕ್ರಮವಾಗಿ ಸಾಗಾಣಿಕೆ ಆರೋಪದಲ್ಲಿ ಬಂಧಿತ ನಟಿ ರನ್ಯಾ ರಾವ್ ಅತ್ತ ಜೈಲು ಕಂಬಿಗಳ ಹಿಂದೆ ನರಳುತ್ತಿದ್ದರೆ, ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಇದು ನಮಗೆಲ್ಲಿ ಅಂಟಿಕೊಳ್ಳುತ್ತದೆಯೋ ಎಂದು ಆತಂಕಿತರಾಗಿದ್ದಾರೆ. 

ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳಾಗಿರುವ ರನ್ಯಾ ರಾವ್ ಹಲವು ಉದ್ಯಮಿಗಳು, ರಾಜಕಾರಣಿಗಳು ಮತ್ತು ಪ್ರತಿಷ್ಠಿತ ಜ್ಯೋತಿಷಿಗಳಿಗೆ ಆಪ್ತರಾಗಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಈ ಎಲ್ಲರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿ ಇದ್ದರು.

ರನ್ಯಾ ರಾವ್ ಅವರನ್ನು ಬಂಧಿಸಿರುವ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆ ನಡೆಸಿರುವ ಬೆನ್ನಲ್ಲೇ ಅವರ ಮೊಬೈಲ್ ಪಡೆದುಕೊಂಡಿದ್ದು, ಅದರಲ್ಲಿನ ಕಾಂಟ್ಯಾಕ್ಟ್ ನಂಬರ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಗಿದ್ದಾರೆ. ಇದು ಆಕೆಯ ಜತೆಗೆ ಸಂಪರ್ಕದಲ್ಲಿದ್ದ ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದೆ.

ರನ್ಯಾ ರಾವ್ ಜತೆ ಸಂಪರ್ಕದಲ್ಲಿದ್ದ ಅನೇಕ ರಾಜಕಾರಣಿಗಳು, ಚಿನ್ನ ಕಳ್ಳ ಸಾಗಾಣಿಕೆ ಅಕ್ರಮದಲ್ಲಿ ಯಾರು ಶಾಮೀಲು ಎಂಬ ಬಗ್ಗೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವಂತಾಗಿದೆ.

ರನ್ಯಾ ರಾವ್ ಜತೆ ಸಂಪರ್ಕದಲ್ಲಿದ್ದ ಚಿನ್ನಾಭರಣ ವ್ಯಾಪಾರಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಮಾಹಿತಿಯನ್ನು ಡಿಆರ್‌ಐ ಅಧಿಕಾರಿಗಳು ಕಲೆ ಹಾಕಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲು ಪೂರ್ವಭಾವಿ ಸಿದ್ಧತೆ ಕೂಡ ನಡೆದಿದೆ.

ಈ ನಡುವೆ ಕೊಲ್ಲಿ ರಾಷ್ಟ್ರಗಳಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲು ಸೇರಿರುವ ರನ್ಯಾ ರಾವ್ ಪ್ರಕರಣದಲ್ಲಿ  ಐಪಿಎಸ್ ಹಿರಿಯ ಅಧಿಕಾರಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಮಿತಿ ರಚಿಸಿದೆ.

ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ನಟಿ ರನ್ಯಾ ರಾವ್ ಅವರ ಮಲ ತಂದೆಯಾಗಿದ್ದಾರೆ. ಈ ಕಾರಣಕ್ಕೆ ಅವರು ಶಿಷ್ಟಾಚಾರದ ಸೌಲಭ್ಯಗಳನ್ನು ಪಡೆಯುತ್ತಿದ್ದರು. ಚಿನ್ನ ಕಳ್ಳಸಾಗಣೆ ಮಾಡಲು ರನ್ಯಾ ರಾವ್ ಅವರು ಪೊಲಿಸ್ ಶಿಷ್ಟಾಚಾರ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.

ಈ ಬಗ್ಗೆ ಪರಿಶೀಲನೆ ನಡೆಸಿ, ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಶಿಷ್ಟಾಚಾರ ಸೌಲಭ್ಯಗಳ ಬಳಕೆಯನ್ನು ಪಡೆದುಕೊಳ್ಳಲು ಕಾರಣವಾದ ಸಂಗತಿಗಳು ಹಾಗೂ ಸಂದರ್ಭಗಳು ಮತ್ತು ಈ ಪ್ರಕರಣದಲ್ಲಿ ಕಂಡುಬಂದರೆ ಪತ್ತೆ ಹಚ್ಚಿ, ತನಿಖಾ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಮತ್ತೊಂದೆಡೆ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪೊಲೀಸ್‌‍ ಸಿಬ್ಬಂದಿ ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ರನ್ಯಾ ರಾವ್ ವಿದೇಶಗಳಿಗೆ ಹೋಗುವಾಗ ಮತ್ತು ವಾಪಸ್‌‍ ಬರುವ ಸಂದರ್ಭದಲ್ಲಿ ಪೊಲೀಸ್‌‍ ಸಿಬ್ಬಂದಿಯಿಂದ ಲೋಪಗಳು ಆಗಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಸದರಿ ಪ್ರಕಣದಲ್ಲಿ ಪೊಲೀಸ್‌‍ ಸಿಬ್ಬಂದಿ ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.

ಪ್ರಕರಣದ ವಿಚಾರಣೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಅದರ ವರದಿಯನ್ನು ಆದಷ್ಟು ಬೇಗ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ. ಸಿಐಡಿ ತನಿಖಾಧಿಕಾರಿಗಳಿಗೆ ವಿಚಾರಣೆ ನಡೆಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ಸಹಕಾರ ಮತ್ತು ಅವಶ್ಯಕ ದಾಖಲಾತಿಗಳನ್ನು ಸಹ ಒದಗಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.

Leave a Reply