ಐದು ದಿನಗಳ ಸಿಪಿಐಎಂ ಅಖಿಲ ಭಾರತ ಮಹಾಧಿವೇಶನ

1 year ago

ಮಧುರೈನಲ್ಲಿ ನಾಳೆ ಚಾಲನೆ

ಚೆನ್ನೈ/ಮಂಗಳೂರು: ಸಿಪಿಐಎಂ ಪಕ್ಷದ 24ನೇ ಅಖಿಲ ಭಾರತ ಮಹಾ ಅಧಿವೇಶನ ಎಪ್ರಿಲ್ 2 ರಿಂದ 6 ರವರೆಗೆ ಐದು ದಿನಗಳ ಕಾಲ ತಮಿಳುನಾಡಿನ ಮಧುರೈ ನಗರಲ್ಲಿ ನಡೆಯಲಿದೆ.

ಕೋಮುವಾದಿ, ಬಂಡವಾಳಶಾಹಿ ಮೈತ್ರಿಯ ಮೋದಿ ನೇತೃತ್ವದ ಬಿಜೆಪಿ ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರ ಹೊರತಾಗಿಯೂ ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ, ಸಾಮಾಜಿಕ ಅಸಮಾನತೆ, ಕೋಮುವಾದಿ, ಬಂಡವಾಳಶಾಹಿ ಶಕ್ತಿಗಳ ಪರವಾದ ನಿರ್ಲಜ್ಜ ನೀತಿಗಳು, ರೈತರು, ಕಾರ್ಮಿಕರು ಎದುರಿಸುತ್ತಿರುವ ಬಿಕ್ಕಟ್ಟು ಮುಂತಾದ ಜ್ವಲಂತ ವಿಷಯಗಳ ಕುರಿತು ಮಹಾ ಅಧಿವೇಶನದಲ್ಲಿ ಚರ್ಚೆಗಳು ನಡೆಯಲಿದೆ ಎಂದು ಸಿಪಿಐಎಂ ದ‌.ಕ. ಜಿಲ್ಲಾ ಸಮಿತಿ ತಿಳಿಸಿದೆ.

ಮೋದಿ ಸರಕಾರದ ಈ ಅವಧಿಯಲ್ಲಿ ಫ್ಯಾಸಿಸಂ ಲಕ್ಷಣಗಳು ಗೋಚರಿಸುತ್ತಿರುವ ಅಪಾಯಕಾರಿ ಅಂಶಗಳ ಕುರಿತು ಅಧಿವೇಶನ ಚರ್ಚಿಸಲಿದೆ. ಮುಂದಿನ ಮೂರು ವರ್ಷಗಳ ಕಾಲ ಪಕ್ಷ ಅನುಸರಿಸಬೇಕಾದ ರಾಜಕೀಯ ನಿಲುವುಗಳು, ಕೋಮುವಾದಿ – ಬಂಡವಾಳ ಶಾಹಿ ನೀತಿಗಳೊಂದಿಗೆ ಮುಂದೊತ್ತಿ ಬರುತ್ತಿರುವ ಆಳುವ ಸರಕಾರವನ್ನು ಹಿಮ್ಮೆಟ್ಟಿಸುವ ಕಾರ್ಯತಂತ್ರಗಳು ಏನಿರಬೇಕು ಎಂಬ ನಿರ್ಣಯಗಳು ಅಧಿವೇಶನದಲ್ಲಿ ಅಂಗೀಕಾರಗೊಳ್ಳಲಿವೆ.

ದೇಶದ ಎಲ್ಲಾ ರಾಜ್ಯಗಳಿಂದ ಆಯ್ಕೆಯಾದ ಸುಮಾರು 700 ಪ್ರತಿನಿಧಿಗಳು ಮಹಾ ಅಧಿವೇಶನದಲ್ಲಿ ಭಾಗಿಗಳಾಗಲಿದ್ದಾರೆ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 13 ಪ್ರಮುಖ ನಾಯಕರು ಭಾಗವಹಿಸುತ್ತಿದ್ದು, ಕರಾವಳಿ ಕರ್ನಾಟಕದಿಂದ ದ.ಕ‌. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರತಿನಿಧಿಯಾಗಿ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

Leave a Reply