ಮಂಗಳೂರು: ಆರ್ ಎಸ್ ಎಸ್ ನ ಕೋಮು ದ್ರುವೀಕರಣದ ಮತ್ತು ಜನತೆಯನ್ನು ಬೌದ್ಧಿಕ ಗುಲಾಮಗಿರಿಗೆ ತಳ್ಳುವ ಸಾಂಸ್ಕೃತಿಕ ರಾಜಕಾರಣಕ್ಕೆ ಮಾರ್ಕ್ಸ್ ವಾದವೇ ಉತ್ತರವಾಗಿದ್ದು ಈ ಕಾರಣಕ್ಕೆ ಆರ್ ಎಸ್ ಎಸ್ ನಾಯಕರುಗಳಿಗೆ ಮಾರ್ಕ್ಸ್ ವಾದದ ಭಯವಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯುತ್ತಿರುವ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಸಿಪಿಐಎಂ 24ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ ಎಸ್ ಎಸ್ ತನ್ನ ಭಾಷಣಗಳಲ್ಲಿ ಮಾರ್ಕ್ಸ್ ವಾದವನ್ನು ಸದಾ ಅಲ್ಲಗಳೆಯುತ್ತದೆ, ವಿಮರ್ಶಿಸುತ್ತದೆ. ಯಾಕೆಂದರೆ ಆರ್ ಎಸ್ ಎಸ್ ಸಿದ್ಧಾಂತಗಳಿಗೆ ಮಾರ್ಕ್ಸ್ ವಾದದ ಭಯವಿದೆ ಎಂದರು.
ಜಗತ್ತಿನಲ್ಲಿ ಸೋವಿಯತ್ ರಷ್ಯಾದ ಪತನದ ನಂತರ ಬಂಡವಾಳಶಾಹಿ ನೀತಿಗಳು ಪ್ರಬಲವಾಗತೊಡಗಿದವು. ಬಂಡವಾಳಶಾಹಿ ಆರ್ಥಿಕ ನೀತಿಗಳು ಜಗತ್ತಿನ ಮೇಲೆ ತನ್ನ ಸ್ವಾಧೀನವನ್ನು ಪಡೆದುಕೊಂಡವು. ಈ ಕಾರಣಕ್ಕಾಗಿ ಸಂಪತ್ತು ಧನಿಕರ ಪರ ಕ್ರೋಡಿಕರಣವಾಗುತ್ತಿದೆ. ಬಡವರು ದಟ್ಟ ದಾರಿದ್ರ್ಯತೆಗೆ ತಲುಪುತ್ತಿದ್ದಾರೆ ಎಂದರು.
ನವ ಉದಾರವಾದಿ ಸಾಮ್ರಾಜ್ಯಶಾಹಿ ಪಥವನ್ನು ಬಲವಂತದ ದಬ್ಬಾಳಿಕೆಯ ಮೂಲಕ ಸಾಧಿಸಲಾಗುತ್ತಿದೆ. ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ, ರಷ್ಯಾ ಉಕ್ರೇನ್ ಯುದ್ಧಗಳು ನಡೆಯುತ್ತಿವೆ. ಇತಿಹಾಸದುದ್ದಕ್ಕೂ ವಿಶ್ವಶಾಂತಿಯನ್ನು ಬಯಸುತ್ತಿದ್ದ ಭಾರತವು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಭಾರತ ಅಮೆರಿಕದ ಮಿತ್ರ ರಾಷ್ಟ್ರವಾಗಿ ಮಾರ್ಪಾಟಾಗಿದೆ. ಸಾಮ್ರಾಜ್ಯಶಾಹಿ ಅಮೆರಿಕದ ವಿದೇಶಾಂಗ ನೀತಿಯೊಂದಿಗೆ ಸಹಮತವನ್ನು ಹೊಂದಿದೆ. ಇದು ನಮ್ಮ ದೇಶವು ಸ್ವಾತಂತ್ರ್ಯ ನಂತರ ಉಳಿಸಿ ಬೆಳೆಸಿದ ಸಾಮ್ರಾಜ್ಯಶಾಹಿ ವಿರೋಧಿ ಅಲಿಪ್ತ ಧೋರಣೆಗೆ ವಿರುದ್ಧವಾಗಿದೆ ಎಂದರು.
ಸಿಪಿಐಎಂ ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ ಪ್ರಕಾಶ್ ಮಾತನಾಡಿ, ಭಾರತದ ಉತ್ತರಕ್ಕೆ ನೇಪಾಳ ಮತ್ತು ದಕ್ಷಿಣಕ್ಕೆ ಶ್ರೀಲಂಕಾದಲ್ಲಿ ಮಾರ್ಕ್ಸ್ ವಾದಿ ಸರ್ಕಾರಗಳಿವೆ. ಪಾಕಿಸ್ತಾನದಲ್ಲಿ ಆರ್ಥಿಕ ತೀವ್ರ ಬಿಕ್ಕಟ್ಟು ಮತ್ತು ರಾಜಕೀಯ ಬಿಕ್ಕಟ್ಟುಗಳು ಮುಂದುವರಿದಿದ್ದು ಅಲ್ಲಿಯೂ ಎಡಪಕ್ಷಗಳು ಹಾಗೂ ಸಾಮೂಹಿಕ ಸಂಘಟನೆಗಳು ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತದ ಸುತ್ತಮುತ್ತ ಕಮ್ಯುನಿಸ್ಟ್ ಪಕ್ಷಗಳ ಸರ್ಕಾರ ಮೂರು ಭಾಗದಿಂದಲೂ ಸುತ್ತುವರಿಯ ವಿಶೇಷ ವಿದ್ಯಮಾನವನ್ನು ನಾವು ಗಮನಿಸಬೇಕಾಗಿದ್ದು ಇದು ಭಾರತದ ಮಾರ್ಕ್ಸ್ ವಾದದ ಭವಿಷ್ಯವನ್ನು ತೋರಿಸುತ್ತದೆ ಎಂದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೋಲ್ ಗೇಟ್ ವಿರುದ್ಧದ ಹೋರಾಟ, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ, ಜಿಲ್ಲೆಯ ಕೋಮು ಸೌಹಾರ್ದತೆಯ ಉಳಿವಿಗಾಗಿ ನಿತ್ಯ ಮಿಡಿಯುತ್ತಿರುವ ಜನಾನುರಾಗಿ ರಾಜಕೀಯ ಪಕ್ಷ ಒಂದಿದ್ದರೆ ಅದು CPIM ಮಾತ್ರವಾಗಿದ್ದು, ಜಿಲ್ಲೆಯ ಅಲ್ಪಸಂಖ್ಯಾತರ, ದಲಿತರ ಆದಿವಾಸಿಗಳ ಮತ್ತು ದಮನಿತರ ನಿತ್ಯ ನೋವುಗಳಿಗೆ ಸದಾ ಸಿಪಿಐಎಂ ಮಿಡಿಯುತ್ತಿದೆ ಎಂದರು.
ಉದ್ಘಾಟನಾ ಸಮಾರಂಭದ ಮೊದಲಿಗೆ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಸ್ವಾಗತಿಸಿ, ಡಾ. ಕೃಷ್ಣಪ್ಪ ಕೊಂಚಾಡಿ ವಂದಿಸಿದರು. ಸಮ್ಮೇಳನದ ಧ್ವಜಾರೋಹಣವನ್ನು ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪ ಸಾಲ್ಯಾನ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಜನಪರ ಚಳುವಳಿಯ ನಾಯಕರಾದ ಸಂಜೀವ ಬಳ್ಕೂರುರವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕೊಟ್ಟು ಸದಾಶಿವದಾಸ್ ಹಾಜರಿದ್ದರು.




