ನಿರುದ್ಯೋಗ ನಿವಾರಣೆಯಿಂದ ಸೌಹಾರ್ದ ಭಾರತ ನಿರ್ಮಾಣ ಸಾಧ್ಯ: ಡಾ.ಗಣನಾಥ ಶೆಟ್ಟಿ ಎಕ್ಕಾರು

1 year ago

ಮಂಗಳೂರು: ಸಾಮಾನ್ಯ ಜನರು ಉದ್ಯೋಗವನ್ನು ಪಡೆಯಲು‌ ಹರಸಾಹಸ ಪಡುತ್ತಿದ್ದಾರೆ. ಕಾರಣ ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ಯುವಜನತೆಯನ್ನು ಕಾಡುತ್ತಿದೆ. ಇಂತಹ ನಿರುದ್ಯೋಗವನ್ನು ಕಾರ್ಪೊರೇಟ್ ವಲಯ ಪ್ರೋತ್ಸಾಹಿಸುತ್ತಾ ಬರುತ್ತಿದೆ. ಜೊತೆಗೆ ಕೋಮುವಾದಿ ಶಕ್ತಿಗಳು ಇದರ ದುರ್ಲಾಭವನ್ನು ಪಡೆಯುತ್ತಿವೆ ಎಂದು ಜನಪದ ವಿದ್ವಾಂಸರೂ, ಸಾಹಿತಿಗಳಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಚಳುವಳಿಯ ಧ್ರುವತಾರೆ ಭಗತ್ ಸಿಂಗ್ ರವರ 94ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಮುನ್ನೂರು ಯುವಕ ಮಂಡಲದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ವಿಚಾರವನ್ನು ಮಂಡಿಸುತ್ತಾ ಈ ಮಾತುಗಳನ್ನು ಹೇಳಿದರು.

ನಿರುದ್ಯೋಗದಿಂದ ಹತಾಶರಾದ ಯುವಜನರಲ್ಲಿ ಜಾತಿ ಧರ್ಮದ ಅಮಲನ್ನೇರಿಸಿ ಕೋಮುದ್ವೇಷವನ್ನು ಹಬ್ಬಿಸಲು  ಪ್ರಚೋದನೆ ನೀಡಲಾಗುತ್ತಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ಲಭಿಸುವಂತಾದರೆ ಮಾತ್ರವೇ ಸೌಹಾರ್ದ ಭಾರತವನ್ನು ನಿರ್ಮಿಸಲು ಸಾಧ್ಯವಿದೆ ಎಂದರು.

ಪ್ರತಿಕ್ರಿಯೆ ನೀಡಿದ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ನಿಜವಾದ ದೇಶಪ್ರೇಮ ಅಂದರೆ ದೇಶಕ್ಕಾಗಿ ಶ್ರಮ ಪಡುವುದು, ದುಡಿಯುವುದು. ಸಾರ್ವಜನಿಕ ವಲಯ ಆರೋಗ್ಯ ಶಿಕ್ಷಣ ಉದ್ಯೋಗಕ್ಕೆ ಗಮನ ಹರಿಸಬೇಕಾಗಿದೆ. ಆದರೆ ಸರ್ಕಾರ ಇದೆಲ್ಲವನ್ನು ಖಾಸಗಿ ವಲಯಕ್ಕೆ ಕೊಡುತ್ತಿದೆ. ಸಾರ್ವಜನಿಕ ವಲಯ ಎಲ್ಲವನ್ನು ಕಳಚಿಕೊಳ್ಳುತ್ತಾ ಇದೆ. ಬಂಡವಾಳಶಾಹಿ ವ್ಯವಸ್ಥೆ ಎಲ್ಲವನ್ನು ನಿಯಂತ್ರಣ ಮಾಡ್ತಾ ಇದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ DYFI ಉಳ್ಳಾಲ ತಾಲೂಕು ಅಧ್ಯಕ್ಷ ನಿತಿನ್ ಕುತ್ತಾರ್ ಮಾತನಾಡಿ, ಆರ್ಥಿಕ ಸ್ವಾತಂತ್ರ್ಯ ಇಲ್ಲದೆ ನಿಜವಾದ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಿಲ್ಲ. ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಬೇಕಾದ ಕೇಂದ್ರ, ರಾಜ್ಯ ಸರಕಾರಗಳು ಸದಾ ಕಾರ್ಪೊರೇಟ್ ಪರ ಮಂತ್ರಗಳನ್ನು ಜಪಿಸುವ ಮೂಲಕ ದೇಶದ ಹಿತಾಸಕ್ತಿಗಳನ್ನು ಬಲಿಕೊಟ್ಟಿವೆ ಎಂದರು.

ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಯುವಜನ ನಾಯಕರಾದ ರಿಜ್ವಾನ್ ಹರೇಕಳ, ರೈತ ಚಳುವಳಿಯ ಹಿರಿಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಪ್ರಗತಿಪರ ಚಿಂತಕ ರಮೇಶ್ ಉಳ್ಳಾಲ, ಕಾರ್ಮಿಕ ನಾಯಕರಾದ ಜನಾರ್ಧನ ಕುತ್ತಾರ್, ಮುನ್ನೂರು ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಾಂತಾಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುನ್ನೂರು ಪಂಚಾಯತ್ ಉಪಾಧ್ಯಕ್ಷ ಮಹಾಬಲ‌ ದೆಪ್ಪಲಿಮಾರ್, ರೈತ ನಾಯಕ ಶೇಖರ್ ಕುಂದರ್, ಯುವ ನಾಯಕರಾದ ಸುನಿಲ್ ತೇವುಲ, ಮಿಥುನ್ ರಾಜ್, ದೀಕ್ಷಿತ್, ಪೃಥ್ವಿರಾಜ್, ರಜಾಕ್ ಮುಡಿಪು, ಕಾರ್ಮಿಕ ಮುಖಂಡರಾದ ಚಂದ್ರಹಾಸ ಪಿಲಾರ್, ರೋಹಿದಾಸ್ ತೊಕ್ಕೋಟ್ಟು, ಮಹಿಳಾ ಮುಖಂಡರಾದ ಪ್ರಮೋದಿನಿ, ವಿಲಾಸಿನಿ, ಬೇಬಿ, ನಳಿನಾಕ್ಷಿ ಶೆಟ್ಟಿ, ಪದ್ಮಾವತಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply