ಮಂಗಳೂರು: ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣಗುರುಗಳ ಸ್ತಬ್ದ ಚಿತ್ರ ನಿರಾಕರಿಸಿದ ಕೇಂದ್ರ ಸರಕಾರದ ವಿರುದ್ಧ ಎಡ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರು ನಗರದ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಾರಾಯಗುರುಗಳ ಭಾವಚಿತ್ರ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಪುರಭವನದ ಎದುರಿನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಗುರುಗಳ ಭಾವಚಿತ್ರದ ಮೆರವಣಿಗೆ ನಡೆಯಿತು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಂಘಪರಿವಾರಕ್ಕೆ ನಾರಾಯಣಗುರುಗಳ ಕುರಿತು ಯಾವುದೇ ಗೌರವವಿಲ್ಲ. ಕೆಳಜಾತಿಗಳಿಗೆ ಅತ್ಮಗೌರವ ಕೊಡಿಸುವ ಗುರುಗಳ ಸಾಮಾಜಿಕ ಚಳುವಳಿಯಿಂದ ಪರಿವಾರ ಶಕ್ತಿಗಳು ನಾರಾಯಣ ಗುರುಗಳ ಕುರಿತು ಹೊಂದಿರುವ ಅಸಹನೆ ಗಣರಾಜ್ಯೋತ್ಸವ ಪಥಸಂಚಲನದಿಂದ ಗುರುಗಳ ಸ್ತಬ್ದಚಿತ್ರ ನಿರಾಕರಣೆಯ ಮೂಲಕ ಹೊರಬಿದ್ದಿದೆ. ನಾರಾಯಣಗುರುಗಳಿಗೆ ಆಗಿರುವ ಅವಮಾನ ಬಿಜೆಪಿಯ ರಾಜಕೀಯ ಚದುರಂಗದಾಟಕ್ಕೆ ಬ್ರೇಕ್ ಹಾಕಲಿದೆ ಎಂದರು.
CPI ದ.ಕ.ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅವರು ಮಾತನಾಡಿ, ಕಮ್ಯುನಿಸ್ಟರು ನಾರಾಯಣಗುರುಗಳ ಸಮಾನತೆಯ ಸಂದೇಶಗಳನ್ನು ಸದಾ ಎತ್ತಿಹಿಡಿದಿದ್ದಾರೆ. ಬಡವರ ಭೂಹೀನರ ಅಸ್ಪ್ರಶ್ಯರ ಹಕ್ಕುಗಳಿಗಾಗಿ ಕೇರಳದ ಎಡರಂಗ ಸರಕಾರ ಅಳವಡಿಸಿರುವ ಕಾರ್ಯಕ್ರಮಗಳು ನಾರಾಯಣಗುರುಗಳು ಪ್ರತಿಪಾದಿಸಿದ ವಿಚಾರಗಳೇ ಆಗಿವೆ. ಬಿಜೆಪಿ ಪರಿವಾರದ ಚಿಂತನೆಗಳಿಗೂ ನಾರಾಯಣಗುರುಗಳ ವಿಚಾರಗಳಿಗೂ ಅಕಾಶ ಭೂಮಿಯಷ್ಟು ಅಂತರವಿದೆ ಎಂದರು.
DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರವರು ಮಾತನಾಡಿ, ತುಳುನಾಡಿನಲ್ಲಿ ಹಿಂದುಳಿದ ಜಾತಿಯ ಜನರನ್ನು ಪರಸ್ಪರ ಹಿಂಸೆಗೆ ಪ್ರಚೋದಿಸಿ ರಾಜಕೀಯ ಅಧಿಕಾರ ಹಿಡಿದಿರುವ ಬಿಜೆಪಿ, ನಾರಾಯಣಗುರುಗಳ ತತ್ವಗಳ ಬದ್ದ ವಿರೋಧಿಯಾಗಿದೆ ಎಂದರು.
ಹಸಿಸುಳ್ಳುಗಳು, ರಕ್ತ ಹರಿಸುವ ಇತಿಹಾಸ ಹೊಂದಿರುವ ಸಚಿವ ಸುನಿಲ್ ಕುಮಾರ್, ನಳೀನ್ ಕುಮಾರ್ ಕಟೀಲು, ಹರಿಕೃಷ್ಣ ಬಂಟ್ವಾಳ ಮುಂತಾದವರಿಗೆ ಶಾಂತಿ ಸಹಬಾಳ್ವೆ, ಮಾನವ ಧರ್ಮದ ಭೋಧಕ ನಾರಾಯಣ ಗುರುಗಳ ಹೆಸರೆತ್ತುವ ಯೋಗ್ಯತೆ ಇಲ್ಲ. ಸಚಿವ ಸುನಿಲ್ ಕುಮಾರ್ ಅವರನ್ನು ಹಿಂಸೆಯ ಮೂಲಕ ಧರ್ಮಗಳ ಧ್ರುವೀಕರಣ ನಡೆಸಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ಸಂಘಪರಿವಾರ ದ.ಕ.ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಕಾರ್ಕಳದಿಂದ ರಪ್ತು ಮಾಡಿದೆ. ಸುನಿಲ್ ಕುಮಾರ್ ರವರ ಮತೀಯ ಹಿಂಸೆಯ ರಾಜಕಾರಣವನ್ನು ಉದ್ಯೋಗ, ಶಿಕ್ಷಣ, ಆರೋಗ್ಯದ ಹಕ್ಕಿನ ಹೋರಾಟ ಹಾಗೂ ನಾರಾಯಣಗುರುಗಳ ಆತ್ಮಗೌರವದ ಚಿಂತನೆಗಳ ಮೂಲಕ ದ.ಕ. ಜಿಲ್ಲೆಯ ಜಾತ್ಯತೀತ ಸಂಘಟನೆಗಳು ಎದುರುಗೊಳ್ಳಲಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ಹಸಿಹಸಿ ಸುಳ್ಳು ಹೇಳುವ ಬಿಜೆಪಿ ಸಂಘಪರಿವಾರ ನಾರಾಯಣಗುರುಗಳ ಸ್ತಬ್ದಚಿತ್ರ ನಿರಾಕರಿಸಿ ಶಂಕರಾಚಾರ್ಯರ ಪ್ರಸ್ತಾಪ ನೀಡಿರುವ ಬಗ್ಗೆ ಸ್ಪಷ್ಟನೆ ನೀಡದೆ ಕೇರಳದ ಕಮ್ಯುನಿಸ್ಟ್ ಸರಕಾರದ ವಿರುದ್ದ ಇಲ್ಲಸಲ್ಲದ ದ್ವೇಷಪೂರಿತ ವಿಚಾರಗಳನ್ನು ಹರಿಯಬಿಟ್ಟು ಜನತೆಯಲ್ಲಿ ಗೊಂದಲ ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ ಎಂದರು.
ಸಭೆಯನ್ನುದ್ದೇಶಿಸಿ ದಲಿತ ಚಳುವಳಿಯ ಮುಖಂಡರಾದ ಡಾ.ಕೃಷ್ಣಪ್ಪ ಕೊಂಚಾಡಿ ಹಾಗೂ ಎಂ.ದೇವದಾಸ್, ರೈತ ಸಂಘಟನೆಯ ಮುಖಂಡರಾದ ರವಿಕಿರಣ ಪೂನಚರವರು ಮಾತನಾಡಿದರು.
ಕಾರ್ಯಕ್ರಮದಲ್ಲಿ CPIM ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಸುಕುಮಾರ್, ಸದಾಶಿವದಾಸ್, ಜಯಂತ ನಾಯಕ್, CPI ನಾಯಕರಾದ ಬಿ.ಶೇಖರ್, ತಿಮ್ಮಪ್ಪ ಕಾವೂರು, ಕೊರಗ ಸಂಘಟನೆಗಳ ಒಕ್ಕೂಟದ ಮುಖಂಡರಾದ ಸುಂದರ ಕೊರಗ ಬೆಳುವಾಯಿ, ದಲಿತ ಸಂಘಟನೆಗಳ ಮುಖಂಡರಾದ ರಘು ಎಕ್ಕಾರು, ಸರೋಜಿನಿ, ಸೀತಾ, ನಾಗೇಶ್, ಲಕ್ಷ್ಮಣ್ ಕಾಂಚನ್, ಕೃಷ್ಣ ತಣ್ಣೀರುಬಾವಿ, ಕಾರ್ಮಿಕ ಮುಖಂಡರಾದ ಎಚ್ ವಿ.ರಾವ್, ಸೀತಾರಾಂ ಬೇರಿಂಜ, ಸುರೇಶ್ ಕುಮಾರ್, ರಾಧಾ ಮೂಡಬಿದ್ರೆ, ಗಿರಿಜಾ, ಕರುಣಾಕರ್, ರವಿಚಂದ್ರ ಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಮುಸ್ತಾಫ, ಸಂತೋಷ್ ಅರ್.ಎಸ್, ಯುವಜನ ನಾಯಕರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ಸುನೀಲ್ ತೇವುಲ, ರಫೀಕ್ ಹರೇಕಳ, ಪುಷ್ಪಾರಾಜ್ ಬೋಳೂರು, ಕೃಷ್ಣಪ್ಪ ವಾಮಂಜೂರು, ದಿನೇಶ್, ಮಹಿಳಾ ನಾಯಕರಾದ ಶಾಂತಾ, ಸರೋಜಿನಿ, ರೇಣುಕಾ, ಭಾರತಿ ಬೋಳಾರ, ಜಯಂತಿ ಶೆಟ್ಟಿ ಸಾಮಾಜಿಕ ಚಿಂತಕರಾದ ಪದ್ಮನಾಭ ಕೋಟ್ಯಾನ್, ಪಟ್ಟಾಭಿರಾಮ ಸೋಮಯಾಜಿ, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ರಮೇಶ್ ಉಳ್ಳಾಲ, ವಿವಿಧ ಸಂಘಟನೆಗಳ ಮುಖಂಡರಾದ ಬಿ.ಎಂ.ಮಾಧವ, ಪುರುಷೋತ್ತಮ ಪೂಜಾರಿ, ಬಿ.ಎನ್ ದೇವಾಡಿಗ, ರಮೇಶ್ ಸುವರ್ಣ, ಪ್ರೇಮನಾಥ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.




