ಡಿಕೆಶಿ ಮಾತುಗಳು ಗ್ಯಾರಂಟಿ ಯೋಜನೆಗಳ ರದ್ದತಿಯ ಮೊದಲ ಹಂತ: ಎಚ್.ಡಿ.ಕುಮಾರಸ್ವಾಮಿ

1 year ago

ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರಿಗೆ ಕನಸಿನಲ್ಲಿ ಮಹಿಳೆಯರು, ದೇವರು ಬಂದು ಜ್ಞಾನೋದಯ ಮಾಡಿದ್ದಾನೆಯೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಮರೆಯಾಗಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಹಾಗಾಗಿ ನೆಪಗಳನ್ನು ಹೇಳಿಕೊಂಡು ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸುವ ಮಾತುಗಳನ್ನು ಆಡುತ್ತಿದ್ದಾರೆ ಎಂದರು.

ಶಿವಕುಮಾರ್ ಅವರ ಮಾತುಗಳನ್ನು ಗಮನಿಸಿದರೆ ಗ್ಯಾರಂಟಿ ಯೋಜನೆಗಳ ರದ್ದತಿಯ ಮೊದಲ ಹಂತ ಇದಾಗಿದೆ. ಗ್ಯಾರಂಟಿ ಯೋಜನೆಗಳನ್ನು ದೀರ್ಘಾವಧಿ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಗ್ಯಾರಂಟಿಗಳನ್ನು ನಿಲ್ಲಿಸಲು ಡಿ.ಕೆ.ಶಿವಕುಮಾರ್ ಪೀಠಿಕೆ ಹಾಕಿದ್ದಾರೆ ಎಂದರು.

ರಾಜ್ಯ ಸರ್ಕಾರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸದೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಬೇಕು. ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿರುವವರು ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಹೊರೆ ಮಾಡಿ, ಜನರಿಂದಲೇ ಹಣ ಕಿತ್ತುಕೊಂಡು ಗ್ಯಾರಂಟಿ ಕಾರ್ಯಕ್ರಮ ಮುಂದುವರೆಸುವುದರಲ್ಲಿ ಅರ್ಥ ಇಲ್ಲ ಎಂದರು.

ನಾನು ಗ್ಯಾರಂಟಿ ಯೋಜನೆಗಳ ವಿರೋಧಿಯಲ್ಲ. ಗ್ಯಾರಂಟಿ ಯೋಜನೆಗಳನ್ನು ಕೊಡಿ, ಆದರೆ ಗ್ಯಾರಂಟಿ ಹೆಸರಿನಲ್ಲಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಬೇಡಿ. ಮುಂದಿನ ಪೀಳಿಗೆಯ ಭವಿಷ್ಯ ಹಾಳು ಮಾಡಬೇಡಿ. ರಾಜ್ಯವನ್ನು ದಿವಾಳಿ ಮಾಡಬೇಡಿ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ. ಇದರಿಂದ ಬಂಡವಾಳ ಆಸ್ತಿಗಳು ಸೃಷ್ಟಿಯಾಗುತ್ತಿಲ್ಲ. ನಮಗೆ ಗ್ಯಾರಂಟಿ ಬಗ್ಗೆ ಹೊಟ್ಟೆಉರಿ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ಇನ್ನು ಹೆಚ್ಚು ಮಾಡಲಿ. ಆದರೆ ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡುವುದು ಬೇಡ ಎಂದರು.

ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿ ಬೇರೆ ದೇಶಗಳ ರೀತಿ ಅರಾಜಕತೆ ಸೃಷ್ಠಿಯಾಗಬಾರದು ಎಂಬುದು ನಮ್ಮ ಕಳಕಳಿ ಅಷ್ಟೇ. ಗ್ಯಾರಂಟಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ ಎಂದರು.

Leave a Reply