ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸುವ ಯೋಜನೆ ರೂಪಿಸಿ

1 year ago

ಎರಡು ಶತಮಾನಗಳ ಹಿಂದೆ ರಾಜಾರಾಮ ಮೋಹನ ರಾಯರು ವಿಧವಾ ವಿವಾಹಕ್ಕೆ ಬೆಂಬಲವನ್ನ ನೀಡಿ ಜಾಗೃತಿಯನ್ನು ಉಂಟು ಮಾಡಿದರು. ತದನಂತರದಲ್ಲಿ ವಿಶೇಷವಾಗಿ ನಾರಾಯಣ ಗುರುಗಳು ಈ ನಿಟ್ಟಿನಲ್ಲಿ ಮತ್ತಷ್ಟು ಪ್ರೋತ್ಸಾಹವನ್ನು ನೀಡಿದರು. ಇತ್ತೀಚಿನ ದಶಕದಲ್ಲಿ ವಿಧವಾ ವಿವಾಹ ಅಂತ ದೊಡ್ಡ ಸಮಸ್ಯೆ ಏನಲ್ಲ. ಸಮಾಜ ಇದನ್ನು ಬಹಳ ಗೌರವದಿಂದ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಕೆಲವು ಯೋಜನೆಗಳನ್ನು ರೂಪಿಸಿದರೆ ಇದಕ್ಕೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ.

ಇಲ್ಲಿಯೂ ಸಹ ಹಲವಾರು ಸಾಧ್ಯತೆಯನ್ನು ಕಾಣಬಹುದಾಗಿದೆ. ಸರ್ಕಾರಿ ನೌಕರಿಯಲ್ಲಿದ್ದು ಪತಿಯನ್ನು ಕಳೆದುಕೊಂಡವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ದೊರೆಯುತ್ತದೆ ಮತ್ತು ಆರ್ಥಿಕವಾಗಿಯೂ ಒಂದಷ್ಟು ನೆರವು ದೊರೆಯುತ್ತದೆ ಇಂತಹ ಮಹಿಳೆಯರನ್ನು ಮದುವೆಯಾಗಲು ಆಸಕ್ತಿ ತೋರುವ ವ್ಯಕ್ತಿಗಳ ಸಂಖ್ಯೆ ಸಾಕಷ್ಟು ಇರುತ್ತದೆ.

ಅದೇ ರೀತಿಯಲ್ಲಿ ಆರ್ಥಿಕವಾಗಿ ಸಾಕಷ್ಟು ವ್ಯವಸ್ಥೆಗಳಿರುವ ಹೆಣ್ಣು ಮಕ್ಕಳು ವಿಧವೆಯರಾದರೆ ಅವರಿಗೂ ಸಹ ಆರ್ಥಿಕತೆಯ ಕಾರಣದಿಂದಲಾದರೂ ವಿವಾಹವಾಗಲು ಸಾಕಷ್ಟು ಜನ ಮುಂದೆ ಬರುತ್ತಾರೆ. ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ಸಾಮಾಜಿಕವಾಗಿ ಸಮಾನತೆಯನ್ನು ಕಾಣದಿರುವ ವರ್ಗದ ಸಹೋದರಿಯರು ಸಣ್ಣ ವಯಸ್ಸಿನಲ್ಲಿಯೇ ವತಿಯನ್ನು ಕಳೆದುಕೊಂಡ ಸಂದರ್ಭದಲ್ಲಿ  ಮರು ಮದುವೆಗೆ ಹೆಚ್ಚಿನ ಜನ ಆಸಕ್ತಿಯನ್ನು ತೋರುವುದಿಲ್ಲ ಕಾರಣ ಇವರು ನಮಗೆ ಹೊರೆಯಾಗುತ್ತಾರೆ ಎನ್ನುವ ಭಾವನೆಯು ಇರುತ್ತದೆ. ಇಲ್ಲಿಯೂ ಸಹ ಒಳ್ಳೆಯ ಭಾವನೆಯುಳ್ಳ ವ್ಯಕ್ತಿಗಳು ಶುದ್ಧವಾದ ಮನಸ್ಸಿನಿಂದ ವಿವಾಹವಾಗುವ ಸಾಧ್ಯತೆಗಳಿರುತ್ತದೆ, ಇದು ಅಪರೂಪದ ಪ್ರಸಂಗಗಳು.

ರಾಜ್ಯ ಸರ್ಕಾರ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ವಿಧವೆಯರಿಗೆ ಮದುವೆಯಾಗುವಂತಹ ಸಂದರ್ಭದಲ್ಲಿ ಅವರ ಆರ್ಥಿಕತೆಗೆ ಭದ್ರತೆಯನ್ನು ಒದಗಿಸುವ ಯಾವುದಾದರೂ ಒಂದು ಯೋಜನೆಯನ್ನು ರೂಪಿಸಿದರೆ ಇದರಿಂದ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗುತ್ತದೆ.

ಸಮಾಧಾನಕರವಾದ ಸಂಗತಿ ಏನೆಂದರೆ ಹಲವಾರು ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ವಿವಾಹ ವಿವಾಹವನ್ನು ಎಲ್ಲರೂ ಸಹ ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ.

ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಮಂಡಳಿಯ ಹಾಗೂ ಸಂಬಂಧಪಟ್ಟ ಸಚಿವರ ಜೊತೆಯಲ್ಲಿ ಕುಳಿತು ಯಾವುದಾದರೂ ಒಂದು ಉತ್ತಮವಾದ ಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕಾಗಿ ಕೋರುತ್ತೇನೆ

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply