ಹಾಲು ಮಾರಾಟ ದರ ಹೆಚ್ಚಳಕ್ಕೆ ತೀರ್ಮಾನ

2 years ago

ಬೆಂಗಳೂರು: ಹಾಲು ಉತ್ಪಾದಕರಿಗೆ ಸಹಾಯಧನ ಹೆಚ್ಚಳ, ಹಾಗೂ ಹಾಲು ಖರೀದಿದರ ಹೆಚ್ಚಳ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಇದೀಗ ಹಾಲು ಮಾರಾಟ ದರ ಹೆಚ್ಚಳಕ್ಕೆ ತೀರ್ಮಾನಿಸಿದೆ.

ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲು, ಮಾರಾಟ ದರ ಸರಾಸರಿ ಐದು ರೂಪಾಯಿ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು ಸರ್ಕಾರ ಸರಾಸರಿ ಮೂರರಿಂದ ನಾಲ್ಕು ರೂಪಾಯಿ ದರ ಹೆಚ್ಚಳಕ್ಕೆ ಚಿಂತನೆ ನಡೆಸಿದೆ.

ಕಳೆದ ಕೆಲವು ತಿಂಗಳ ಹಿಂದೆ ಹಾಲಿನ ಪ್ರಮಾಣ ಹೆಚ್ಚಳ ಮಾಡಿ ಪ್ರತಿ ಪ್ಯಾಕೇಟಿಗೆ ಎರಡು ರೂಪಾಯಿ ದರ ಹೆಚ್ಚಿಸಲಾಗಿತ್ತು. ಆದರೆ ಈಗ ಪ್ಯಾಕೆಟ್ ಗಳ ಪ್ರಮಾಣವನ್ನು ಅರ್ಧ ಲೀಟರ್ ಗೆ ಇಳಿಸಿ ದರ ಅಷ್ಟೇ ಉಳಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ, ರಾಜ್ಯದ ರೈತರಿಗೆ ಈಗಾಗಲೇ ಪ್ರತಿ ಲೀಟರ್‌ ಹಾಲಿಗೆ 31ರೂ.ಗಳಿಗೆ ನೀಡಲಾಗುತ್ತಿದೆ ಹಾಗೂ ಗ್ರಾಹಕರಿಗೆ ಒಂದು ಲೀಟರ್ಗೆ 41ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹೀಗಿರುವಾಗ ದರ ಪರಿಷ್ಕರಿಸುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಹೊರೆಯಾಗುವಂತೆ ಹಾಲಿನ ದರ ಹೆಚ್ಚಳ ಮಾಡಲು ರಾಜ್ಯಸರ್ಕಾರ ಮುಂದಾಗಿದೆ. ಆದರೆ ವಿವಿಧ ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ಗೆ ಒಂದೂವರೆಯಿಂದ ಎರಡು ರೂಪಾಯಿವರೆಗೂ ಕಡಿಮೆ ಮಾಡಲಾಗಿದೆ. ರೈತರ ಹಿತ ಕಾಪಾಡುವ ಸರ್ಕಾರ ಏಕೆ ರೈತರ ಹಾಲಿನ ಖರೀದಿ ದರವನ್ನು ಕಡಿಮೆ ಮಾಡಿದೆ ಎಂದರು.

ಹಾಲಿನ ದರ ಏರಿಕೆಯಿಂದ ರೈತರಿಗೂ ಅನುಕೂಲವಿಲ್ಲ. ಗ್ರಾಹಕರಿಗೂ ಲಾಭವಿಲ್ಲ. ಆದರೆ ಸರ್ಕಾರ ಮಾತ್ರ ಹಾಲಿನ ದರ ಏರಿಕೆ ಮಾಡುತ್ತಿದೆ ಎಂದರು.

ಮಾಜಿ ಸಿಎಂ ಬಿ.ಎಸ್‌‍. ಯಡಿಯೂರಪ್ಪ ಅವರು ಪ್ರತಿ ಲೀಟರ್‌ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ನೀಡುವುದನ್ನು ಪ್ರಾರಂಭಿಸಿದರು. ಆನಂತರ 5 ರೂಪಾಯಿಗೆ ಏರಿಕೆಯಾಗಿತ್ತು. ತಾವು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಪ್ರತೀ ಲೀಟರ್‌ ಹಾಲಿಗೆ 6 ರೂ. ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿತ್ತು. ಅಷ್ಟರಲ್ಲಿ ಮೈತ್ರಿ ಸರ್ಕಾರವನ್ನೇ ಪತನಗೊಳಿಸಿದರು ಎಂದರು.

Leave a Reply