ಕಲಾಕುಟೀರ ಪ್ರಶಸ್ತಿ ಪ್ರಧಾನ ಸಮಾರಂಭ
ಬೆಂಗಳೂರು: ಶ್ರೀ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಲಾಕುಟೀರ ಸ್ಕೂಲ್ ಆಫ್ ಆರ್ಟ್ ವತಿಯಿಂದ ಜಾನಪದ ಸಾಂಸ್ಕೃತಿಕ ಮೆರಗು-2023 ಮತ್ತು ಕಲಾಕುಟೀರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ನೆ.ಲ.ನರೇಂದ್ರಬಾಬು ಮಾತನಾಡಿ, ಜಾನಪದ ಕಲೆ ಉಳಿದರೆ ನಾಡಿನ ಸಂಸ್ಕೃತಿ ಉಳಿಯುತ್ತದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ರಾಜಾಜಿನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಜಾನಪದ ಕಲಾ ಉತ್ಸವ ನನ್ನ ನೇತೃತ್ವದಲ್ಲಿ ಜರುಗಿತು. ನಾಡಿನ ಸಂಸ್ಕೃತಿ ಪ್ರತೀಕವಾದ ಜಾನಪದ ಕಲೆಯನ್ನು ಮಕ್ಕಳಿಗೆ ಕಲಿಸಬೇಕು ಅರಿವು ಮೂಡಿಸಬೇಕು ಎಂದು ಹೇಳಿದರು.
ಜಾನಪದ ಜಾತ್ರೆ ಹುಟ್ಟಿದ್ದು ರಾಜಾಜಿನಗರದಲ್ಲಿ. ಜಾನಪದ ಗೀತೆಗೆ ಸಿನಿಮಾ ಹಾಡಿಗೂ ವ್ಯತ್ಯಾಸವಿದೆ. ಜಾನಪದ ಹಾಡು ಮನೆ ಊಟದಂತೆ, ವಿದೇಶಿ ಸಂಗೀತ ಹೋಟಲ್ ಊಟದಂತೆ. ಮಾಜಿ ಶಾಸಕನಾಗಿ, ಮಾಜಿ ಪಾಲಿಕೆ ಸದಸ್ಯನಾಗಬಹುದು. ಮಾಜಿ ಕಲಾವಿದ ಅನ್ನುವ ಹಾಗಿಲ್ಲ, ಜೀವನ ಕೊನೆಯವರೆಗೆ ಕಲೆ ನಮ್ಮ ಜೊತೆಯಲ್ಲಿ ಇರುತ್ತದೆ ಎಂದು ಹೇಳಿದರು.
ಮನಸ್ಸಿನಲ್ಲಿ ಕಲೆ ಉಳಿಸಿಕೊಳ್ಳಿ ಇದರಿಂದ ಮನಸ್ಸು ಉಲ್ಲಾಸಿತವಾಗಿ ಇರುತ್ತದೆ. ಕಲಾವಿದರಿಗೆ ಬೇಕಾಗಿರುವುದು ನಿಮ್ಮ ಚಪ್ಪಾಳೆ, ಪ್ರೀತಿ ವಿಶ್ವಾಸ ಬೇಕು. ಸಂಗೀತ ಜಾನಪದ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಲ್ಲ ಮಕ್ಕಳು ಭಾಗವಹಿಸಿ ಇದರಿಂದ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಬದುಕು ಸಾಗಿಸಬಹುದು ಎಂದು ಹೇಳಿದರು.
ಖ್ಯಾತ ಚಲನಚಿತ್ರ ಕಲಾವಿದರಾದ ಡಾ.ಟಿ.ಲಕ್ಷ್ಮೀನಾರಾಯಣ್, ನಾಟ್ಯ ಸನ್ನಿಧಿ ಸ್ಕೂಲ್ ಡಾ.ಮೋನಿಷಾ ನವೀನ್, ನೆಲಸೊಗಡು ಸಾಂಸ್ಕೃತಿಕ ಸಂಘದ ಲಕ್ಷ್ಮಣ್, ಶಾಸ್ತ್ರೀಯ ಸಂಗೀತ ವಿದ್ವಾನ್ ಶ್ರೀನಿವಾಸ್ ವಿ.ರಾಘವ್ ರವರಿಗೆ ಕಲಕುಟೀರ ಪ್ರಶಸ್ತಿ -2023ನೀಡಿ ಸನ್ಮಾನಿಸಲಾಯಿತು.
ಪ್ರಾಂಶುಪಾಲರಾದ ಡಾ.ಶೀಲಾದೇವಿ ಎಸ್.ಮಳೀಮಠ, ಜಾನಪದ ಪರಿಷತ್ ಅಧ್ಯಕ್ಷ ಎಸ್.ಬಾಲಾಜಿ, ಚಲನಚಿತ್ರ ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ, ಕಲಾಕುಟೀರ ಸ್ಕೂಲ್ ಆಫ್ ಆರ್ಟ್ಸ್ ಅಧ್ಯಕ್ಷ ಬಿ.ಜಿ.ಸದಾಶಿವಾಚಾರ್ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಖಜಾಂಜಿ ಮಂಜುಳ, ನಿರ್ದೇಶಕಿ ಟಿ.ಪಿ.ತಾರ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಂಸಾಳೆ, ಡೊಳ್ಳು ಕುಣಿತ, ಕರಗ ಕುಣಿತ, ಸೋಮನ ಕುಣಿತ, ವೀರಗಾಸೆ, ತಮಟೆವಾದ್ಯ, ಗೀತೆ ಗಾಯನ ಏರ್ಪಡಿಸಲಾಗಿತ್ತು.


