ಪ್ರಭಾವಿ ವ್ಯಕ್ತಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಮಾನವಾಗುವುದು ನಿಜಕ್ಕೂ ವಿಶೇಷ ಘಟನೆ

9 months ago

ಕೇವಲ ಒಂದೂಕಾಲು ವರ್ಷದಲ್ಲಿಯೇ ತನಿಖೆ ಮತ್ತು ವಿಚಾರಣೆ ನಡೆದು ನರಾಧಮನೊಬ್ಬನನ್ನು ಅಪರಾಧಿ ಎಂದು ಇಂದು ಕರ್ನಾಟಕದ ನ್ಯಾಯಾಲಯವೊಂದು ಘೋಷಿಸಿದೆ.

ಇಂತಹ ಪ್ರಕರಣಗಳು ಹತ್ತಾರು ವರ್ಷ ಎಳೆದಾಡುವ ಕಾಲದಲ್ಲಿ, ವಿಚಾರಣೆ ಹಂತದಲ್ಲಿ ಜಾಮೀನು ಪಡೆದುಕೊಂಡ ಆರೋಪಿಗಳು ಸಮಾಜದಲ್ಲಿ ಮತ್ತಷ್ಟು  ದೊಡ್ಡದೊಡ್ಡ ಅಧಿಕಾರ ಸ್ಥಾನಗಳಿಗೆ ಏರುವ ದಿನಗಳಲ್ಲಿ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಾದ ಪ್ರಜ್ವಲ್ ರೇವಣ್ಣ ಎನ್ನುವಂತಹ ಪ್ರಭಾವಿ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯದಲ್ಲಿ ತೀರ್ಮಾನವಾಗುವುದು ನಿಜಕ್ಕೂ ವಿಶೇಷ ಘಟನೆ. ಅಪರೂಪದ, ಸದ್ಯದ ಸ್ಥಿತಿಯಲ್ಲಿ ನಂಬಲಾಗದ ಆಶ್ಚರ್ಯಕಾರಿ ವಿದ್ಯಮಾನ.

ಇಂತಹದೇ ಇನ್ನೊಂದು ಪ್ರಕರಣದಲ್ಲಿ ಕರ್ನಾಟಕದ ಮತ್ತೊಬ್ಬ ಪ್ರಭಾವಶಾಲಿ ನರಾಧಮ ಜಾಮೀನಿನ ಮೇಲೆ ಹೊರಗಿದ್ದಾನೆ. ಆತನ ಹಾಗೆ ಇನ್ನೂ ಅನೇಕರಿದ್ದಾರೆ. ಹೀಗಿರುವಾಗ, ಇಂದಿನ ನ್ಯಾಯಾಲಯದ ಆದೇಶ ನೋಡಿದ ಮೇಲೆ ಜನರನ್ನು ಕಾಡುವ ಪ್ರಶ್ನೆ ಏನೆಂದರೆ, ಯಾಕೆ ಮಿಕ್ಕ ಘೋರ ಅಪರಾಧ ಕೃತ್ಯಗಳ (heinous crimes) ಪ್ರಕರಣಗಳಲ್ಲಿಯೂ ಪ್ರಜ್ವಲ್ ರೇವಣ್ಣ ಪ್ರಕರಣದಂತೆ ಶೀಘ್ರ ವಿಚಾರಣೆ ಆಗಬಾರದು ಮತ್ತು ತೀರ್ಪು ಪ್ರಕಟವಾಗುವ ತನಕ ಜಾಮೀನು ಸಿಗಬಾರದು ಎನ್ನುವುದು.

ಈ ಪ್ರಕರಣ ಇಂದಿನ ಕಾಲದಲ್ಲಿ ಅಸಹಜ ಪ್ರಕರಣವಾಗಿ ಇಷ್ಟು ಬೇಗ ವಿಚಾರಣೆ ಮುಗಿದು ತೀರ್ಪು ಬಂದದ್ದಾರೂ ಹೇಗೆ? ಮಿಕ್ಕವು ಇದೇ ರೀತಿ ತಾರ್ಕಿಕ ಅಂತ್ಯ ಕಾಣುವುದು ಎಂದು?

ನ್ಯಾಯ ಗೆದ್ದಿತು ಎಂದು ಹೇಳುವ ಸಮಯದಲ್ಲಿಯೂ ಈ ತರಹದ ಪ್ರಶ್ನೆಗಳಿಗೆ ಉತ್ತರ ಇಲ್ಲದಿರುವುದು ಈ ಕಾಲದ ದೌರ್ಭಾಗ್ಯ.

ಅಂದಹಾಗೆ, ಮೂರು ವರ್ಷಗಳ ಹಿಂದೆ #ಹೊಳೆನರಸೀಪುರಚಲೋ ಮಾಡುವ ಮೂಲಕ ಹೊಳೆನರಸೀಪುರ ರಿಪಬ್ಲಿಕ್’ಗೆ ನೂರಾರು ಜನ ಹಾಡುಹಗಲಿನಲ್ಲಿ ಧೈರ್ಯದಿಂದ ಹೋಗಿ ಅಲ್ಲಿದ್ದ ಸಾವಿರಾರು ಗೂಂಡಾಗಳನ್ನು ಎದುರಿಸಿ ಆ ಊರಿನಲ್ಲಿ ಆ ಮಟ್ಟದ ಹೋರಾಟ ಮಾಡಿದ ಏಕೈಕ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – KRS Party ಮಾತ್ರ. ಇದನ್ನು ನಾಡಿನ ಜನ ಮರೆಯಬಾರದು.

ಅಂದು KRS ಪಕ್ಷದವರ ಮೇಲೆ ಹಿಂಸಾತ್ಮಕ ದಾಳಿ ಮಾಡಿದ್ದಕ್ಕೆ ಪ್ರಕೃತಿ ನೀಡಿದ ಶಿಕ್ಷೆ ಇವತ್ತಿನ ತೀರ್ಪು. ಮಿಕ್ಕ ದಾನವರೂ ಇದನ್ನು ನೆನಪಿಡಲಿ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

– ರವಿಕೃಷ್ಣಾ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ

Leave a Reply