ಭಾರತ ಸಂವಿಧಾನ ನಮ್ಮ ರಕ್ಷಾ ಕವಚ: ರಾಮಪ್ಪ ಬಡಿಗೇರ

1 year ago

ಧಾರವಾಡ: ಪ್ರತಿ ಭಾರತೀಯನ ಹುಟ್ಟಿನಿಂದ ಸಾಯುವರೆಗೆ ಸಿಗುವ ಹಕ್ಕು, ಸೌಲಭ್ಯ ಮತ್ತು ಮಾಡಬೇಕಾದ ಕರ್ತವ್ಯಗಳ ಕುರಿತು ಕಾನೂನುಗಳನ್ನು ನೀಡುವ ಭಾರತದ ಸಂವಿಧಾನ ನಮ್ಮ ರಕ್ಷಾ ಕವಚವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಹೇಳಿದರು.

ಧಾರವಾಡದ ಡಾ. ಅಣ್ಣಾಜಿರಾವ್ ಸಿರೂರ ಸೃಜನಾ ರಂಗಮಂದಿರದಲ್ಲಿ ಧಾರವಾಡ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಂಯುಕ್ತವಾಗಿ ಸಂವಿಧಾನ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಭಾರತ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

ಭಾರತದ ಸಂವಿಧಾನ ಎಲ್ಲರಿಗೂ ಪ್ರಾತಿನಿಧ್ಯ ನೀಡಿದೆ. ಎಲ್ಲದಕ್ಕೂ ಸಂವಿಧಾನದಲ್ಲಿ ಪರಿಹಾರವಿದೆ. ಸಂವಿಧಾನ ಜಾರಿಗೆ ಬಂದ 75 ವರ್ಷಗಳಲ್ಲಿ ದೇಶವು ಅಭಿವೃದ್ಧಿಯ ಮೆಟ್ಟಿಲುಗಳನ್ನು ಏರುತ್ತಿದೆ. ಅತ್ಯಂತ ಸುಗಮ, ಸುಲಲಿತ ಆಡಳಿತ ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ ಎಂದರು.

ಯಾವುದೇ ಕ್ಷೇತ್ರದಲ್ಲಿ ಅಸಮಾನತೆ, ತಾರತಮ್ಯ ಆಗದಂತೆ ಸಂವಿಧಾನ ಸೂಕ್ತ ಕ್ರಮವಹಿಸಿದೆ. ಎಲ್ಲರಿಗೂ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲದರಲ್ಲೂ ಸ್ವಾತಂತ್ರ್ಯ ಕಲ್ಪಿಸಿದೆ. ಭಾರತದ ಸಂವಿಧಾನ ನಮ್ಮ ಭವಿಷ್ಯತ್ತಿನ ದಿಕ್ಸೂಚಿಯಾಗಿದೆ ಎಂದರು.

ಸಂವಿಧಾನ ದಿನಾಚರಣೆಯ ಈ ಸಂದರ್ಭ ಸಂವಿಧಾನದ ಹಬ್ಬವಾಗಿದೆ. ಈ ಹಬ್ಬದ ಅಂಗವಾಗಿ ಸಂವಿಧಾನ ಅರಿವು ಮತ್ತು ಅದರ ಪ್ರಾಮುಖ್ಯತೆ ಕುರಿತು ಚಿಂತನ-ಮಂಥನ ನಡೆಯಬೇಕು ಎಂದರು. 

ಕಾರ್ಯಕ್ರಮದಲ್ಲಿ ಉಪಮೇಯರ್ ದುರ್ಗಮ್ಮ ಶಶಿಕಾಂತ ಬಿಜವಾಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮೂ. ಕೊರವಿ, ಪಾಲಿಕೆ ವಿಪಕ್ಷ ನಾಯಕ ರಾಜಶೇಖರ ಕಮತಿ, ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಪೀಠಿಕೆ ಬೋಧಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಅರವಿಂದ ಮೂಲಿಮನಿ ಭಾರತದ ಸಂವಿಧಾನ ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಪಾಲಿಕೆ ಸದಸ್ಯರಾದ ಕವಿತಾ ದಾನಪ್ಪ ಕಬ್ಬೇರ, ತುಳಜಪ್ಪ ಪೂಜಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಕಲ್ಮೇಶ ಹಾದಿಮನಿ, ಸಮಿತಿ ಸದಸ್ಯರು ವೇದಿಕೆಯಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Leave a Reply