ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ನಾಗರಿಕರನ್ನು ಗೌರವಿಸೋಣ: ರಮೇಶ್ ಬಾಬು

1 year ago

ಬಳ್ಳಾರಿ: ಸಂವಿಧಾನದ ಆಶಯದಂತೆ ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರನ್ನು ಗೌರವದಿಂದ ಕಾಣುವುದರೊಂದಿಗೆ ತಾಯಿ ಮಗುವಿನ ಆರೋಗ್ಯ ಸೇರಿದಂತೆ ಎಲ್ಲ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ತಡೆಗೆ ಶ್ರಮಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಕರೆನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

1949 ನೇ ನ.26 ರಂದು ನಮ್ಮ ದೇಶದ ಲಿಖಿತ ಸಂವಿಧಾನವನ್ನು ಅಂಗೀಕರಿಸಿ ನಾವೆಲ್ಲರೂ ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ. ದೇಶದ ಸಮಗ್ರತೆಯನ್ನು ಎಲ್ಲರ ಸುರಕ್ಷತೆಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನಗಳು ಸಮಾನವಾಗಿರಬೇಕು ಎಂಬ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ಬೇಧವಿಲ್ಲದೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವ ಎಲ್ಲಾ ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದನೆ ಮಾಡಬೇಕು ಎಂದರು.

ಸುರಕ್ಷಿತ ಹೆರಿಗೆ, 12 ಮಾರಕ ರೋಗಗಳ ವಿರುದ್ಧ ಲಸಿಕೆ ನೀಡುವುದು, ಡೆಂಗ್ಯು ನಿಯಂತ್ರಿಸಲು, ಕ್ಷಯರೋಗ, ಕುಷ್ಠರೋಗಗಳನ್ನು ತಡೆಗಟ್ಟಲು, ನಾಯಿ ಕಡಿತ, ಇಲಿಜ್ವರಗಳ ಮುಂಜಾಗ್ರತೆ ಹಾಗೂ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹಗಳನ್ನು ತೊಡೆದು ಹಾಕುವ ಕಾರ್ಯ ನಾವೆಲ್ಲರೂ ಮಾಡೋಣ ಎಂದು ಕರೆನೀಡಿದರು.

ಸಂವಿಧಾನದ ಆಶಯಗಳನ್ನು ಗೌರವಿಸುವ ಮೂಲಕ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ತಾಯಿ ಮಗುವಿನ ಕಾಳಜಿಗಾಗಿ ಗುಣಮಟ್ಟದ ಸೇವೆಗಳನ್ನು ನೀಡಿ ಜಿಲ್ಲೆಯನ್ನು ಆರೋಗ್ಯಯುತ ಜಿಲ್ಲೆಯನ್ನಾಗಿ ಮಾಡಲು ಕೈಜೋಡಿಸೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ., ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಕಚೇರಿ ಅಧೀಕ್ಷಕ ಬಸವರಾಜ, ವೆಂಕಟೇಶ, ಸಾರಿಗೆ ಅಭಿಯಂತರರ ವಿಜಯಕುಮಾರ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ವಿರುಪಾಕ್ಷಪ್ಪ ಸೇರಿದಂತೆ ಸಹಾಯಕ ಸಾಂಖ್ಯಿಕ ಅಧಿಕಾರಿಗಳು, ಜಿಲ್ಲಾ ಮಟ್ಟದ ಸಲಹೆಗಾರರು, ಸಮಾಲೋಚಕರು, ಸಿಬ್ಬಂದಿ ಹಾಜರಿದ್ದರು.

Leave a Reply