ಕೆ ಎನ್ ರಾಜಣ್ಣ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ: ಜಿ. ಪರಮೇಶ್ವರ್

8 months ago

ಬೆಂಗಳೂರು: ಕೆ ಎನ್ ರಾಜಣ್ಣ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವನ್ನು ಗೌರವಿಸಲಾಗುತ್ತದೆ. ಯಾವ ಕಾರಣಕ್ಕೆ ವಜಾಗೊಸಲಾಯಿತು ಎಂಬ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಗೃಹಸಚಿವ ಡಾ ಜಿ. ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಅಧ್ಯಕ್ಷರಿಗೆ ಮಾಹಿತಿ ಇರಬಹುದು. ಇದರಿಂದ ಸ್ವಾಭಾವಿಕವಾಗಿ ರಾಜಣ್ಣ ಅವರಿಗೆ ಅಸಮಾಧಾನವಾಗಿದೆ‌ ಎಂದರು.

ಸಿಎಂ, ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಅವರೊಂದಿಗೆ ನಡೆದ ಪ್ರತ್ಯೇಕ ಸಭೆಯ ಬಗ್ಗೆಯೂ ಪರಮೇಶ್ವರ್ ಆಶ್ಚರ್ಯ ವ್ಯಕ್ತಪಡಿಸಿದರು. ನನಗೆ ಏನೂ ಅರ್ಥವಾಗುತ್ತಿಲ್ಲ. ನೀವಾದರೂ ಹೈಕಮಾಂಡ್‌ನವರನ್ನು ಕೇಳಿ ಮಾಹಿತಿ ಪಡೆಯಿರಿ ಎಂದು ಮಾಧ್ಯಮದವರಿಗೆ ಹೇಳಿದರು.

ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಇಳಿಸುವಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಪ್ರಯತ್ನ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದರ ಬಗ್ಗೆ ಗೊತ್ತಿಲ್ಲ. ಆ ರೀತಿ ಇರೋದಕ್ಕೆ ಸಾಧ್ಯವಿಲ್ಲ ಅನ್ನಿಸುತ್ತೆ. ಏಕೆಂದರೆ ನಮ್ಮ ಹೈಕಮಾಂಡ್ ಅವರು ನಾವು ಯಾರ ಮೇಲೆ ಚಾಡಿ ಹೇಳಿದರು ಹಾಗೆಯೇ ಕೇಳೋದಿಲ್ಲ. ಅವರದ್ದೇ ಆದಂತ ಅಸೆಸ್ಮೆಂಟ್ ಹಾಗೂ ಮಾಹಿತಿಯನ್ನು ಪಡೆದಿರುತ್ತಾರೆ. ಹೈಕಮಾಂಡ್ ಯಾರ ಚಾಡಿಯನ್ನೂ ಕೇಳದೆ, ತಮ್ಮದೇ ಆದ ಮಾಹಿತಿ ಮತ್ತು ಮೌಲ್ಯಮಾಪನದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಇನ್ನು ಕಾಂಗ್ರೆಸ್‌ನಲ್ಲಿ ಸತ್ಯ ಮಾತನಾಡಿದರೆ ತೆಗೆದುಹಾಕುತ್ತಾರೆ ಎಂಬ ಮಾತು ಸರಿಯಲ್ಲ. ಪಕ್ಷದಲ್ಲಿ ಶಿಸ್ತು ಮತ್ತು ಹೈಕಮಾಂಡ್‌ಗೆ ಬದ್ಧತೆ ಇರಬೇಕು ಎಂದರು.

Leave a Reply