ಮೇ 7 ರಂದು ತಪ್ಪದೇ ಮತಗಟ್ಟೆಗೆ ಬನ್ನಿ, ಮತದಾನ ಮಾಡಿ: ರಾಜೇಶ್ವರಿ ಎನ್.ಹೆಗಡೆ

2 years ago

ಪ್ರಜಾಪ್ರಭುತ್ವದಲ್ಲಿ ನಾಯಕನ ಆಯ್ಕೆ ಮಾಡುವ ಅಧಿಕಾರ

ದಾವಣಗೆರೆ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ನಾಯಕರನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಅಧಿಕಾರ ಇದ್ದು, ನಾಯಕನ ಆಯ್ಕೆಯಾಗಿ ಮೇ 7ರಂದು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ.ಎನ್ ಹೆಗಡೆ ಕರೆನೀಡಿದರು.

ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮ ಕರ್ತವ್ಯ, ಇದನ್ನು ನಮ್ಮ ಆತ್ಮಸಾಕ್ಷಿಯಾಗಿ ಮತದಾನ ಮಾಡಬೇಕು ಎಂದರು.

ನಮ್ಮ ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನ ಆಗುವುದೇ ಇಲ್ಲ. ಆದರೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಮತದಾನವಾಗಿದೆ. ಚುನಾವಣೆಗಳಲ್ಲಿ ಈಗ ಮಹಿಳೆಯರು ಹೆಚ್ಚು ಮತದಾನ ಮಾಡುತ್ತಿದ್ದಾರೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಜನರು ಮತದಾನ ಮಾಡಬೇಕು. ಆ ಮೂಲಕ ಪ್ರತಿಯೊಬ್ಬ ಭಾರತೀಯರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಾತನಾಡಿ, ಇದೊಂದು ಅರ್ಥಪೂರ್ಣವಾದತಂಹ ಕಾರ್ಯಕ್ರಮವಾಗಿದ್ದು, ವಿಶ್ವದಲ್ಲಿ 195 ದೇಶಗಳಿವೆ. ಅದರಲ್ಲಿ ನಮ್ಮ ಭಾರತ ಅತೀ ದೊಡ್ಡದಾದಂತಹ, ಶಕ್ತಿಯುತವಾದ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿದೆ. ಈ ಪ್ರಜಾಪ್ರಭುತ್ವನ್ನು ನೀಡಿದ್ದು ಜನರೇ ಆಗಿದ್ದು ಸಂರಕ್ಷಣೆ ಮಾಡುವಂತಹ ಶಕ್ತಿ ಸಂವಿಧಾನಕ್ಕಿದೆ ಎಂದರು.

75 ವರ್ಷಗಳ ವಿಶ್ವದ ಇತಿಹಾಸ ನೋಡಿದಾಗ ಶೇ 25% ದೇಶಗಳಲ್ಲಿ ಮಾತ್ರ ಕಾಲಕಾಲಕ್ಕೆ ಚುನಾವಣೆ ನಡೆಯುತ್ತಿರುವುದನ್ನು ಕಾಣಬಹುದು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪರಿಪೂರ್ಣ ರೀತಿಯಲ್ಲಿ ಅನುಸರಣೆ ಮಾಡುತ್ತಾ ಬರಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಿಗದಿತ ಅವಧಿಯಲ್ಲಿ ಚುನಾವಣೆಗಳು ನಡೆದುಕೊಂಡು ಬಂದಿವೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯ, ಶಕ್ಷಿ ಹೆಚ್ಚಿದ್ದು ಇದಕ್ಕೆ ಚುನಾವಣಾ ಮತದಾನವೇ ಕಾರಣವಾಗಿದೆ ಎಂದರು.

18 ವರ್ಷ ತುಂಬಿದ ಎಲ್ಲಾ ನಾಗರೀಕರಿಗೆ ಮುಕ್ತವಾಗಿ, ಭಯವಿಲ್ಲದೆ ಮತದಾನ ಮಾಡಲು ಸಂವಿಧಾನಿಕ ಹಕ್ಕನ್ನು ನೀಡಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 72.96 ರಷ್ಟು ಮತದಾನ ಆಗಿದೆ. ಇದು ಶೇ 85 ಕ್ಕಿಂತಲೂ ಅಧಿಕವಾಗಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ.ಬಿ.ಇಟ್ನಾಳ್ ಮಾತನಾಡಿ, ನಮ್ಮ ಇತಿಹಾಸ ನೋಡಿದಾಗ ಸ್ವಾತ್ರಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದವರೂ ವಕೀಲರು. ಇವರು ಸ್ವಾತಂತ್ರ್ಯ ಹೋರಾಟಗಳಲ್ಲಿ ನೇತೃತ್ವ ವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ನಂತರದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಕಾನೂನು ತಜ್ಞರು, ವಕೀಲರ ಸಹಕಾರದಿಂದ ನಾವು ಒಳ್ಳೆಯ ಸಂವಿಧಾನವನ್ನು ಹೊಂದಲು ಹಾಗೂ ಪ್ರಜಾಪ್ರಭುತ್ವನ್ನು ಗಟ್ಟಿಗೊಳಿಸಲು ಕಾರಣೀಭೂತರಾಗಿದ್ದಾರೆ ಎಂದರು.

ಚುನಾವಣೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ಎಲ್ಲರೂ ಸೇರಿ ಮತದಾನ ಹೆಚ್ಚಳದ ಕಾರ್ಯದಲ್ಲಿ ಭಾಗಿಯಾಗಬೇಕಾಗಿದೆ. ದಾವಣಗೆರೆ ನಗರ, ಹೊನ್ನಾಳಿ, ಹರಿಹರ ಮತ್ತು ಚನ್ನಗಿರಿ ಪಟ್ಟಣಗಳಲ್ಲಿನ ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಜಿಲ್ಲೆಯಲ್ಲಿನ ಒಟ್ಟು 1,693 ಮತಗಟ್ಟೆಗಳ ಪೈಕಿ ಕಳೆದ ಚುನಾವಣೆಯಲ್ಲಿ 135 ಮತಗಟ್ಟೆಗಳಲ್ಲಿ ಅತೀ ಕಡಿಮೆ ಮಟ್ಟದ ಮತದಾನವಾಗಿದೆ. ದಾವಣಗೆರೆ ನಗರದಲ್ಲಿ ಭಾರತಿನಗರ, ಪೊಲೀಸ್ ಕ್ವಾರ್ಟರ್ಸ್ ನಿಟ್ಟುವಳ್ಳಿ, ಈ ಭಾಗದಲ್ಲಿ ಮತದಾನ ಕಡಿಮೆಯಾಗಿದೆ ಎಂದರು.

ವಕೀಲರ ಬಳಿ ಬರುವ ಕಕ್ಷಿದಾರರಿಗೆ, ಜೊತೆಯಲ್ಲಿ ಬರುವವರಿಗೂ ಮತದಾನ ಮಾಡಲು ಪ್ರೇರೇಪಿಸಲು ಮತ್ತು ಮತಗಟ್ಟೆ, ಕ್ರಮಸಂಖ್ಯೆ ಸೇರಿದಂತೆ ಮತಪಟ್ಟಿ ವಿವರ ಪಡೆಯಲು ವಿಹೆಚ್ಎ ಆಪ್ ಡೌನ್ಲೋಡ್ ಮಾಡಿಕೊಳ್ಳಲು ತಿಳಿಸಿದರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ವಿ.ವಿಜಯಾನಂದ್ ಮತದಾನದ ಪ್ರತಿಜ್ಞಾವಿಧಿ ಭೋದಿಸಿದರು. ಮರಣ ಹೊಂದಿದ ವಕೀಲರಾದ ಕೊಟ್ರಯ್ಯನವರ ಪತ್ನಿ ಪುಪ್ಪಾಲತಾ ಅವರಿಗೆ ರೂ.1 ಲಕ್ಷದ ಪರಿಹಾರದ ಚೆಕ್ ಅನ್ನು ಇದೇ ವೇಳೆ ವಿತರಣೆ ಮಾಡಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್ ಅರುಣಕುಮಾರ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು.ಎಸ್ ಬಳ್ಳಾರಿ, ಪಾಲಿಕೆ ಆಯುಕ್ತರಾದ ರೇಣುಕಾ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ, ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರಾದ ದಶರಥ, ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಧೀಶರಾದ ಶ್ರೀಪಾದ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಸವರಾಜ್ ಗೋಪಾನಾಳ್, ಕಾರ್ಯದರ್ಶಿ ಎಸ್.ಬಸವರಾಜ್ ಮತ್ತು ಸಹ ಕಾರ್ಯದರ್ಶಿ ಮಂಜುನಾಥ ಮೊದಲಾದವರು ಇದ್ದರು.

Leave a Reply