ಪ್ರಿಯಕರನ ಜೊತೆ ಸರಳ ವಿವಾಹವಾದ ಮದುವೆ ಬೇಡ ಎಂದು ಹಠ ಹಿಡಿದಿದ್ದ ವಧು

1 year ago

ಹಾಸನ: ತಾಳಿ ಕಟ್ಟುವ ವೇಳೆ ವರನ ಜೊತೆಗೆ ಮದುವೆ  ಬೇಡ ಎಂದು ಹಠ ಹಿಡಿದಿದ್ದ ವಧು ಕೊನೆಗೆ ಪ್ರಿಯಕರನ ಜೊತೆ ಸರಳ ವಿವಾಹವಾಗಿದ್ದಾರೆ. ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿರುವ ಗಣಪತಿ ದೇವಾಲಯದಲ್ಲಿ ವಧು ಪಲ್ಲವಿ ಪ್ರಿಯಕರ ರಘು ಜೊತೆ ಪೋಷಕರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಪಲ್ಲವಿ ಪತಿ ರಘು ಹಾಸನ ತಾಲೂಕಿನ ಬಸವನಹಳ್ಳಿ ನಿವಾಸಿಯಾಗಿದ್ದಾರೆ.

ಬೂವನಹಳ್ಳಿಯ ಪಲ್ಲವಿ ಮತ್ತು ಆಲೂರು ತಾಲ್ಲೂಕಿನ ಸರ್ಕಾರಿ ಶಾಲೆಯ ಶಿಕ್ಷಕ ನಡುವೆ ವಿವಾಹ ನಿಶ್ಚಯವಾಗಿತ್ತು. ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ವರ, ವಧು ಪಲ್ಲವಿಗೆ ತಾಳಿ ಕಟ್ಟಬೇಕಿತ್ತು. ಆದರೆ, ತಾಳಿ ಕಟ್ಟುವ ವೇಳೆ ವಧು ಪಲ್ಲವಿ ತಲೆ ಅಲ್ಲಾಡಿಸಿ ನನಗೆ ಈ ಮದುವೆ ಬೇಡ ಎಂದಿದ್ದರು.

ತಾಳಿ ಕಟ್ಟುವ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿತ್ತು. ಆಗ ವಧು ಪಲ್ಲವಿ ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರೂ ಕೇಳದ ವಧು ಪಲ್ಲವಿ ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದರು. ತಾಳಿ ಕೈಯಲ್ಲಿ ಹಿಡಿದು ಮದುಮಗ ಮಾಡಿದ ಮನವೊಲಿಕೆಗೂ ಪಲ್ಲವಿ ಮನಸ್ಸು ಕರಗಲಿಲ್ಲ. ಕಲ್ಯಾಣ ಮಂಟಪದಲ್ಲಿ ಗೊಂದಲ ಹಾಗೂ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಹೆಣ್ಣಿನ ಅಪ್ಪ-ಅಮ್ಮ ಹಾಗೂ ಕುಟುಂಬಸ್ಥರು ಯುವತಿಯ ಮನವೊಲಿಕೆ ಮಾಡಿದ್ದರೂ ಆಕೆ ಒಪ್ಪಿರಲಿಲ್ಲ. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದರು. ಪೊಲೀಸರ ಬಳಿ ಕೂಡ ಯುವತಿ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದರು. ರಘು ಎಂಬಾತನನ್ನು ಪಲ್ಲವಿ ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿತ್ತು.

ಇವೆಲ್ಲ ಬೆಳವಣಿಗೆಗಳ ನಡುವೆ, ಪಲ್ಲವಿ ತಾನು ಇಷ್ಟಪಟ್ಟ ಹುಡುಗನ ಜೊತೆಗೆ ವಿವಾಹವಾಗಿದ್ದಾರೆ. ಮದುವೆ ಅರ್ಧದಲ್ಲೇ ನಿಂತುಹೋಗಿದ್ದ ಕಲ್ಯಾಣ ಮಂಟಪದ ಆವರಣದಲ್ಲೇ ಈ ದೇವಾಲಯ ಇದ್ದು, ಗಣಪತಿ ದೇವಾಲಯದ ಆವರಣದಲ್ಲಿ ಸರಳ ವಿವಾಹ ನಡೆದಿದೆ. ಕೆಲ ಸ್ನೇಹಿತರು ಸಂಧಾನಕಾರರ ಮಧ್ಯಸ್ಥಿಕೆಯಲ್ಲಿ ಈ ವಿವಾಹ ನಡೆದಿದೆ.

Leave a Reply