ಬಿಜೆಪಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದೆ: ಎಂ.ಲಕ್ಷ್ಮಣ್ 

6 months ago

ಬೆಂಗಳೂರು: ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಟನಲ್ ಮಾಡುವುದಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತದೆ. ಇದರಲ್ಲಿ ಏನು ಸಿಗುವುದಿಲ್ಲ ಎಂದು ಅಶೋಕ್, ತೇಜಸ್ವಿಸೂರ್ಯ ಕೊರಗುತ್ತಿದ್ದಾರೆ. ನಮ್ಮ ಸರ್ಕಾರ ಲಂಚಮುಕ್ತವಾಗಿ ಆಡಳಿತ ನಡೆಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.



ಮೌರ್ಯ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಬೆಂಗಳೂರು ನಗರದ ಅಭಿವೃದ್ದಿ ಕೆಲಸಗಳನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿಸೂರ್ಯ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ನಡೆಯನ್ನು ಖಂಡಿಸಿದರು.

ಬಗರ್ ಹುಕುಂನಲ್ಲಿ ಆರ್.ಅಶೋಕ್ ರವರು ತನ್ನ ಹಿಂಬಾಲಕರಿಗೆ ಜಮೀನು ಮಂಜೂರು ಮಾಡಿರುವ ಭೂಹಗರಣವನ್ನು ಮಾಡಿದ್ದಾರೆ. ವಿಶ್ವದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು ನಗರವಾಗಿದೆ. 4 ಲಕ್ಕ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. ಅದರಲ್ಲಿ ಶೇಕಡ 50 ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಅದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದರು.

ಮೆಟ್ರೋ ರೈಲು ಯೋಜನೆಗೆ ರಾಜ್ಯ ಸರ್ಕಾರ ಶೇಕಡ 80ರಷ್ಟು ಹಣ ನೀಡುತ್ತಿದೆ. ಬೀದಿಯಲ್ಲಿ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಫೀಸ್ ಕೊಡಬೇಕು ಅಂತಾರೆ ಬಿಜೆಪಿಯವರು. ತೇಜಸ್ವಿಸೂರ್ಯ ಮನೆಯಲ್ಲಿ ಆರು ಕಾರುಗಳು ಇದೆ ಎಲ್ಲಿ ಪಾರ್ಕ್ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ದೇಶದ ಸಾಲ 53 ಲಕ್ಷ ಕೋಟಿಯಾಗಿತ್ತು. ಬಿಜೆಪಿ ಸರ್ಕಾರ ಬಂದ ನಂತರ 250 ಲಕ್ಷ ಕೋಟಿಗೆ ಸಾಲದ ಪ್ರಮಾಣ ಏರಿಕೆಯಾಗಿದೆ. ಪ್ರತಿ ವ್ಯಕ್ತಿಯ ಮೇಲೆ 4 ಲಕ್ಷ ಸಾಲವಿದೆ. ಕೇಂದ್ರ ಸರ್ಕಾರದ ದುರಾಡಳಿತದಿಂದ ಸಾಲದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಆಡಳಿತದಲ್ಲಿ ಪಾರಂಪರಿಕ ಕಟ್ಟಡಗಳನ್ನು ಅಡಮಾನವಿಟ್ಟು ರಾಜ್ಯವನ್ನು ದಿವಾಳಿ ಮಾಡಿದರು. ಟನಲ್ ವೈಜ್ಞಾನಿಕವಾಗಿ ತಂತ್ರಜ್ಞರ ಸಲಹೆ ಮೇರೆಗೆ ಯೋಜನೆ ರೂಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಧಾಕರ್, ಆನಂದ್, ಪುಟ್ಟರಾಜು, ಕುಶಾಲ್ ಗೌಡ ಮೊದಲಾದವರು ಹಾಜರಿದ್ದರು.

Leave a Reply