ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿ ಪ್ರದಾನ

2 years ago

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಉತ್ತಮ ಹಾಗೂ ಜನಸ್ನೇಹಿ ಕೆಲಸ ನಿರ್ವಹಿಸಿರುವ ಅಧಿಕಾರಿಗಳನ್ನು ಗುರುತಿಸಿ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024” ಪ್ರಶಸ್ತಿ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಸಮಾರಂಭದಲ್ಲಿ 4 ಜಿಲ್ಲಾಧಿಕಾರಿಗಳು, 11 ಉಪ ವಿಭಾಗಾಧಿಕಾರಿಗಳು 21 ತಹಶೀಲ್ದಾರ್ 36 ಗ್ರಾಮ ಆಡಳಿತ ಅಧಿಕಾರಿ, ಕೇಂದ್ರ ಕಚೇರಿಯ 9, ವಿಪತ್ತುನಿರ್ವಹಣೆ ಮತ್ತು ನೋಂದಣಿ ಇಲಾಖೆಯ 9 ಹಾಗೂ ಭೂಮಾಪನ ಇಲಾಖೆ 83 ಅಧಿಕಾರಿಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆಧಾರ್ ಸೀಡಿಂಗ್, ಫ್ರೂಟ್ಸ್ ಅಪ್ಡೇಟ್ ಸೇರಿದಂತೆ ಕಳೆದ ಒಂದು ವರ್ಷದಿಂದ ಇಲಾಖೆ ನೀಡಿದ ವಿವಿಧ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಅಧಿಕಾರಿಗಳನ್ನು, ಡಿಜಿಟಲ್ ಆಧಾರದ ಮೂಲಕ ಲಭ್ಯವಾಗುವ ಅವರ ಕೆಲಸದ ದಕ್ಷತೆಯ ವಿವರಗಳ ಆಧಾರದಲ್ಲಿ ಪ್ರತಿಯೊಬ್ಬ ಅಧಿಕಾರಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಸಮಾರಂಭದ ವೇಳೆ ಮಾಹಿತಿ ನೀಡಿದರು.

ಅಲ್ಲದೆ, ದಕ್ಷ ಅಧಿಕಾರಿಗಳಿಗೆ ಹೀಗೆ ಸನ್ಮಾನಿಸುವ ಮೂಲಕ ಅವರು ಮತ್ತಷ್ಟು ಉತ್ತಮ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ. ಹಾಗೂ ಇತರೆ ಅಧಿಕಾರಿಗಳಿಗೂ ಇಂತಹ ಸಮಾರಂಭಗಳು ಸ್ಫೂರ್ತಿಯಾಗುತ್ತವೆ ಎಂದು ತಿಳಿಸಿದರು.

ಮುಂದಿನ ವರ್ಷದಿಂದ “ಕಂದಾಯ ದಿನ” ಆಚರಣೆಯ ವೇಳೆಯೇ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಸಮಾರಂಭವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

Leave a Reply