ರೈಲಿನಿಂದ ಹೊರದಬ್ಬಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

1 year ago

ಕಲಬುರ್ಗಿ/ಬೆಂಗಳೂರು: ಸೀಟಿಗಾಗಿ ಉಂಟಾದ ಜಗಳದಲ್ಲಿ ಯುವಕನೊಬ್ಬನನ್ನು ಚಲಿಸುವ ರೈಲಿನಿಂದ ಹೊರದಬ್ಬಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಅರಳಹಳ್ಳಿ ಗ್ರಾಮದ ದೇವಪ್ಪ(45) ಹಲ್ಲಹಳ್ಳಿ ಗ್ರಾಮದ ಪೀರಪ್ಪ(31) ಬಂಧಿತ ಆರೋಪಿಗಳಾಗಿದ್ದಾರೆ ಎಂದು ರೈಲ್ವೆ ಎಸ್ ಪಿ ಡಾ. ಸೌಮ್ಯಲತಾ ತಿಳಿಸಿದ್ದಾರೆ.

ಕಳೆದ ಫೆ.11 ರಂದು ಹಾಸನ ಜಿಲ್ಲೆಯ ಮಾದಾನ ಗ್ರಾಮದ ಕುಮಾರ್, ಎಂ. ಜಿ.(26) ಯಶವಂತಪುರ ರೈಲು ನಿಲ್ದಾಣದಿಂದ ಯಶವಂತಪುರ-ಬೀದರ್ ಎಕ್ಸ್ಪ್ರೆಸ್ ಜನರಲ್ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದರು. ಅವರಿಗೆ ರೈಲಿನಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ಶೌಚಾಲಯದ ಬಳಿ ಕುಳಿತಿದ್ದ ಆರೋಪಿಗಳ ಬಳಿ ಕುಳಿತುಕೊಳ್ಳಲು ಹೋದರು. ಅಲ್ಲಿ ಕುಳಿತಿದ್ದವರು ಇವರಿಗೆ ಜಾಗ ಕೊಡದೇ ಜಗಳ ಮಾಡಿ ನಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಬರುತ್ತೀಯಾ ಎಂದು ಹೊಡೆದು ಚಲಿಸುವ ರೈಲಿನ ಬಾಗಿಲ ಮುಖಾಂತರ ಹೊರಗೆ ತಳ್ಳಿದ್ದರು.

ರೈಲಿನಿಂದ ಕೆಳಗೆ ಬಿದ್ದ ರಭಸಕ್ಕೆ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಕಾರ್ಯಾಚರಣೆ ಕೈಗೊಂಡು  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply