ಮಹಾಲಕ್ಷ್ಮೀ ಕೊಲೆ ಪ್ರಕರಣ: ಸಾಕ್ಷ್ಯ ನಾಶ ಮಾಡಿ ಪಲಾಯನಗೈದಿರುವ ಆರೋಪಿ

2 years ago

ಬೆಂಗಳೂರು: ವೈಯಾಲಿಕಾವಲ್ ನ ಮುನೇಶ್ವರ ಬ್ಲಾಕ್ ನ ಮಹಾಲಕ್ಷ್ಮೀ ಕೊಲೆ ಪ್ರಕರಣ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ ಎಲ್) ತಜ್ಞರಿಗೆ ತಲೆ ನೋವಾಗಿ ಪರಿಣಮಿಸಿದೆ.

ಕೊಲೆಯಾದ ಮಹಾಲಕ್ಷ್ಮೀ ಮನೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರೂ ಎಫ್ಎಸ್ಎಲ್ ತಜ್ಞರಿಗೆ ರಕ್ತದ ಕಲೆಗಳು ಮತ್ತು ದೇಹ ಕತ್ತರಿಸಿದ ಸ್ಥಳದ ಗುರುತುಗಳು ಪತ್ತೆಯಾಗಿಲ್ಲ. ಕೊಲೆ ಆರೋಪಿ ಯಾವುದೇ ಗುರುತು ಸಿಗದಂತೆ ಮನೆಯನ್ನು ಸ್ವಚ್ಛಗೊಳಿಸಿ ಪರಾರಿಯಾಗಿದ್ದಾನೆ.

ಕೊಲೆ ನಡೆದ ಸ್ಥಳದಲ್ಲಿ, ರಕ್ತ ಕಾಣಬಾರದೆಂದು ಸ್ವಚ್ಛ ಮಾಡಿದ ಮೇಲೂ ಕಲೆಗಳನ್ನು ಪತ್ತೆ ಹಚ್ಚಬಹುದು. ಎಫ್ಎಸ್ಎಲ್ ತಜ್ಞರು ಲುಮಿನಾಲ್ ಎಂಬ ಕೆಮಿಕಲ್ ಬಳಸಿ ರಕ್ತದ ಕಲೆಗಳನ್ನು ಪತ್ತೆ ಹಚ್ಚುತ್ತಾರೆ. 200 ದಿನಗಳ ಹಿಂದಿನ ರಕ್ತದ ಕಲೆಗಳನ್ನೂ ಸಹ ಲುಮಿನಾಲ್ ಕೆಮಿಕಲ್ ಬಳಸಿ ಪತ್ತೆ ಮಾಡಬಹುದು.

ಆದರೆ, ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಲುಮಿನಾಲ್ ಕೆಮಿಕಲ್ ಬಳಸಿದರೂ ರಕ್ತದ ಕಲೆಗಳು ಪತ್ತೆಯಾಗಿಲ್ಲ. ಹೀಗಾಗಿ ಕೊಲೆ ಆರೋಪಿ ಯಾವುದೊ ಕೆಮಿಕಲ್ ಬಳಸಿ ಮನೆ ಸ್ವಚ್ಛ ಮಾಡಿರುವ ಶಂಕೆ ಪೊಲೀಸರಲ್ಲಿ ವ್ಯಕ್ತವಾಗಿದೆ.

ಇನ್ನು, ಆರೋಪಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಲು ಕೊಲೆಗಾರ ಪಕ್ಕಾ ಪ್ಲ್ಯಾನ್ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸಾಕ್ಷ್ಯ ಹೇಗೆ ನಾಶ ಮಾಡಬೇಕು ಎಂಬುದನ್ನೂ ಮುಂಚೆಯೇ ಅಧ್ಯಯನ ಮಾಡಿದ್ದಾನೆ ಎಂಬ ಶಂಕೆ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದೆ.

ಮಹಾಲಕ್ಷ್ಮೀ ಸಂಪರ್ಕದಲ್ಲಿದ್ದ ಆಶ್ರಫ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕಟಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಎಂಬಾತನನ್ನು, ಕರೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಆಶ್ರಫ್, ಮಹಾಲಕ್ಷ್ಮೀ ಜೊತೆ ಸಂಪರ್ಕದಲ್ಲಿದ್ದೆ ಎಂದು ಹೇಳಿದ್ದಾನೆ. ಮಹಾಲಕ್ಷ್ಮೀ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದರೆ ನಾನು ಕೊಲೆ ಮಾಡಿಲ್ಲ. ಆರು ತಿಂಗಳ ಹಿಂದೆ ಆಕೆ ಜೊತೆ ಸಂಪರ್ಕ ಇತ್ತು. ಈಗ ದೂರ ಆಗಿದ್ದೆ. ನಮ್ಮ ಇಬ್ಬರ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಜಗಳವಾದ ಮೇಲೆ ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗು, ನನಗು ಯಾವುದೇ ಸಂಬಂಧ ಇಲ್ಲ ಎಂದಿದ್ದಾನೆ.

ಬಳಿಕ, ಪೊಲೀಸರು ಅಶ್ರಫ್ ಮೊಬೈಲ್ ಪರಿಶೀಲಿಸಿದಾಗ, ಇಬ್ಬರ ಮಧ್ಯೆ ಕಳೆದ ಆರು ತಿಂಗಳಿಂದ ಸಂಪರ್ಕ ಇಲ್ಲದಿರುವುದು ತಿಳಿದಿದೆ. ಸದ್ಯ ಪೊಲೀಸರು ಅಶ್ರಫ್ ನನ್ನು ಬಿಟ್ಟು ಕಳಿಸಿದ್ದಾರೆ.

ಮಹಾಲಕ್ಷ್ಮೀ ಮೊಬೈಲ್ ಪತ್ತೆ: ಮಹಾಲಕ್ಷ್ಮೀ ಮನೆಯಲ್ಲೇ ಆಕೆಯ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೊಬೈಲ್ ವಶಕ್ಕೆ ಪಡೆದ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.

ಗುರುತು ಪತ್ತೆ: ಪ್ರಕರಣದ ಆರೋಪಿಯ ಗುರುತು ಪತ್ತೆಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಗುರುತು ಪತ್ತೆಯಾಗಿರುವ ಆರೋಪಿ ಹೊರ ರಾಜ್ಯದವನಾಗಿದ್ದು, ನಗರದಲ್ಲಿ ವಾಸವಾಗಿದ್ದ ಆತನನ್ನು ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕತ್ತರಿಸಿ ಕೊಲೆಗೈದ ಪ್ರಕರಣದ ತನಿಖೆಯನ್ನು ಎಲ್ಲಾ ಅಯಾಮಗಳಲ್ಲಿ ಕೈಗೊಳ್ಳಲಾಗಿದೆ. ಪ್ರಕರಣ ಪತ್ತೆಗೆ ರಚಿಸಲಾಗಿರುವ ವಿಶೇಷ ತಂಡಗಳನ್ನು ಆರೋಪಿಯನ್ನು ಪತ್ತೆಹಚ್ಚಿದ್ದು, ಆತನ ಬಂಧನ ಕಾರ್ಯಾಚರಣೆ ತೀವ್ರಗೊಂಡಿದೆ ಎಂದು ಹೇಳಿದರು.

Leave a Reply