ಠೇವಣಿ ವಂಚನೆಗೊಳಗಾದವರಿಂದ ತಹಶೀಲ್ದಾರ ಕಚೇರಿಗಳಲ್ಲಿ ಅರ್ಜಿ ಸ್ವೀಕಾರ

2 years ago

ಧಾರವಾಡ: ಬಡ್ಸ್ ಕಾಯ್ದೆ-2019ರ ಅಡಿಯಲ್ಲಿ ವಿವಿಧ ಘೋಷಿತ ಕಂಪನಿ, ಸೊಸೈಟಿಗಳಿಂದ ವಂಚನೆಗೆ ಒಳಗಾಗಿರುವ ಹಾಗೂ ಠೇವಣಿ ಮಾಡಿದ ಮೊತ್ತ ಮತ್ತು ಇತರೆ ಲಾಭಾಂಶಗಳ ಮರು ಪಾವತಿಗಾಗಿ ಬಾಧಿತರು ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶೇಷಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಿ ಐ.ಎಂ.ಎ ಅವರ ಕಾರ್ಯಾಲಯ ಸ್ಥಾಪಿಸಲಾಗಿತ್ತು.

ಆದರೆ ಸಾರ್ವಜನಿಕರು ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳಿಂದ, ದೂರದ ಸ್ಥಳಗಳಿಂದ ಡಿಸಿ ಕಚೇರಿವರೆಗೆ ಬಂದು ಅರ್ಜಿ ಸಲ್ಲಿಸುವುದು ಕಷ್ಟವಾಗುತ್ತದೆ ಎಂದು ವಿವಿಧ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಈ ಕುರಿತು ಪರಿಶೀಲಿಸಿ ಜಿಲ್ಲೆಯ ಎಲ್ಲ ತಾಲೂಕುಗಳ ತಹಶಿಲ್ದಾರ ಕಚೇರಿಗಳಲ್ಲಿ ಐ.ಎಂ.ಎ ಕಾರ್ಯಾಲಯ ತೆರೆಯಲಿ ಮತ್ತು ಇದಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿ ತಮ್ಮ ತಾಲೂಕಿನ ಸಾರ್ವಜನಿಕರ ಇಂತಹ ಪ್ರಕರಣಗಳ ಅರ್ಜಿಗಳನ್ನು ಸ್ವೀಕರಿಸಲು ಕ್ರಮವಹಿಸುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ, ಅವರ ದೂರು, ಅರ್ಜಿಗಳನ್ನು ಸ್ವೀಕರಿಸಲು ಅನುವುಆಗುವಂತೆ ತಹಶಿಲ್ದಾರರು ತಮ್ಮ ಕಾರ್ಯಾಲಯದ ಎಂ.ಎ.ಜಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಶಿರಸ್ತೇದಾರರನ್ನು ಮತ್ತು ಪ್ರಥಮ ದರ್ಜೆ ಸಹಾಯಕರನ್ನು ನಿಯೋಜಿಸಿ ದೂರು, ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ.

ಆದ್ದರಿಂದ ಆರ್ಥಿಕವಾಗಿ ವಂಚಿತರಾದವರು ತಮ್ಮ ತಾಲೂಕಿನ ತಹಶಿಲ್ದಾರ ಕಚೇರಿಗಳಲ್ಲಿ ತೆರೆದಿರುವ ಐ.ಎಂ.ಎ ಘಟಕದಲ್ಲಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply