ಶೀಘ್ರದಲ್ಲಿಯೇ ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದೆ: ಆರ್.ಅಶೋಕ್

1 year ago

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ಸಿನಲ್ಲಿ ಡಿನ್ನರ್ ಪಾಲಿಟಿಕ್ಸ್ ಜೋರಾಗಿದ್ದು ಶೀಘ್ರದಲ್ಲಿಯೇ ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಸಮುದಾಯವಾರು ಮಂತ್ರಿಗಳು ಮತ್ತು ಶಾಸಕರು ಸಭೆ ನಡೆಸುತ್ತಿದ್ದಾರೆ. ಇದಾದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕರಿಗೆ ಮತ್ತು ಸಚಿವರಿಗೆ ಔತಣಕೂಟ ಕೊಟ್ಟ ಮೇಲೆ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಈಗ ಶಾಸಕರು ಮತ್ತು ಸಚಿವರಿಗೆ ಈಗ ಡಿನ್ನರ್ ಪಾರ್ಟಿಯನ್ನು ಪೈಪೋಟಿಗೆ ಬಿದ್ದವರಂತೆ ಆಯೋಜಿಸುತ್ತಿದ್ದಾರೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರಿಗೆ ಔತಣಕೂಟ ಏರ್ಪಡಿಸಿರುವ ಉದ್ದೇಶವೇ ನಿರ್ಗಮನದ ಪಾರ್ಟಿ ಎಂದರು.

ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲೇ ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕೆಂದು ಶಿವಕುಮಾರ್ ಹೇಳಿದ್ದರು. ಅವರು ಯಾರಿಗೆ ಹೇಳಬೇಕೋ ಅವರಿಗೆ ಈ ಮಾತನ್ನು ಹೇಳಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ತಮ ಆಪ್ತ ಸಚಿವರಿಗೆ ನಿರ್ಗಮನದ ಔತಣಕೂಟ ಕೊಡಿಸಿದ್ದಾರೆ. ಅದೇ ರೀತಿ ಪರಮೇಶ್ವರ್ ನಾಳೆ ಕೊಡಿಸಬಹುದು. ನಾಡಿದ್ದು ಸತೀಶ್ ಜಾರಕಿ ಹೊಳಿ, ಡಿ.ಕೆ.ಶಿವಕುಮಾರ್ ಅವರು ಔತಣಕೂಟ ಕೊಟ್ಟ ತಕ್ಷಣವೇ ರಾಜ್ಯದಲ್ಲಿ ಹೊಸ ಸರ್ಕಾರ ಬರಲಿದೆ ಎಂದರು.

Leave a Reply