ಕಲಘಟಗಿ ಪಟ್ಟಣ ಪಂಚಾಯತ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ

8 months ago

ಧಾರವಾಡ: ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಬಹು ಜನೋಪಯೋಗಿ ಕಾರ್ಯಕ್ರಮವಾಗಿರುವ ಇಂದಿರಾ ಕ್ಯಾಂಟಿನ್ ನಿರ್ಮಾಣ ಮತ್ತು ನಿರ್ವಹಣೆಗೆ ಕಲಘಟಗಿ ಪಟ್ಟಣದ ಸೂಕ್ತ ಸ್ಥಳದಲ್ಲಿ ಆಯ್ಕೆ ಮಾಡಲಾಗಿದ್ದು, ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ರುಚಿಕರವಾದ ವಿವಿಧ ರೀತಿಯ ಉಪಹಾರ, ಊಟ ದೊರಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹೇಳಿದರು.

ಕಲಘಟಗಿ ಪಟ್ಟಣ ಪಂಚಾಯತದಿಂದ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಿ, ಮಾತನಾಡಿದರು.

ಹಳಿಯಾಳ ರಸ್ತೆಯ ಕಲಘಟಗಿ ತಾಲೂಕಾ ಪಂಚಾಯತ ಜಾಗೆಯನ್ನು ಅರಣ್ಯ ಇಲಾಖೆಯ ಪಕ್ಕದಲ್ಲಿ ಆಯ್ಕೆ ಮಾಡಿದ್ದು, ಇದನ್ನು ಮೇ. ಎಕ್ಷೆಲ್ ಪ್ರೀಕಾಸ್ಟ ಸೊಲೂಶನ್ ಪ್ರೈ ಲಿ. ಅವರ ಮುಖಾಂತರ ಅಂದಾಜು ರೂ. 87 ಲಕ್ಷ ರೂಗಳಲ್ಲಿ ಪ್ರೀಕಾಸ್ಟ ಕಟ್ಟಡ ನಿರ್ಮಾಣವಾಗಿದೆ ಎಂದರು.

ಇಂದಿರಾ ಕ್ಯಾಂಟಿನ್ ನಲ್ಲಿ ರೂ. 43.67 ಲಕ್ಷಗಳ ವೆಚ್ಚದಲ್ಲಿ ಅಡುಗೆ ಸಾಮಗ್ರಿಗಳನ್ನು ಖರೀದಿಸಿದೆ. ಕಟ್ಟಡದ ಆವರಣಕ್ಕೆ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಫೆವರ್ಸ್ ಅಳವಡಿಸಲು ಕಲಘಟಗಿ ಪಟ್ಟಣ ಪಂಚಾಯತಿಯ ಎಸ್‍ಎಫ್‍ಸಿ ಅನುದಾನ ರೂ. 12.12 ಲಕ್ಷಗಳನ್ನು ವಿನಿಯೋಗಿಸಲಾಗಿದೆ ಎಂದರು.

ಒಟ್ಟಾರೆ ರೂ. 142.79 ಲಕ್ಷಗಳ ವೆಚ್ಚದಲ್ಲಿ ಸುಂದರ ವಾತಾವರಣದಲ್ಲಿ ಇಂದಿರಾ ಕ್ಯಾಂಟೀನ್ ಬಡವರ ಸೇವೆಗೆ ಸಜ್ಜಾಗಿ ನಿಂತಿದೆ. ಬಡವರು, ಕೂಲಿ ಕಾರ್ಮಿಕರು, ಗ್ರಾಮೀಣ ಪ್ರದೇಶದಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಹಾಗೂ ಕಲಘಟಗಿ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಸಾರ್ವಜನಿಕರಿಗೆ ಅದರಲ್ಲಿ ಮುಖ್ಯವಾಗಿ ವಿವಿಧ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ಹಸಿವು ನೀಗಿಸುವ ಕೆಲಸವನ್ನು ಇಂದಿರಾ ಕ್ಯಾಂಟಿನ್ ಆರಂಭಿಸುವ ಮೂಲಕ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರೋಬೆಷನರಿ ರಿತೀಕಾ ವರ್ಮಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಕಲಘಟಗಿ ಪಟ್ಟಣ ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು, ಮತ್ತು ಕಿರಿಯ ಅಭಿಯಂತರೆ ಅಕ್ಕಮಹಾದೇವಿ ತಡಸ, ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಹಾಗೂ ಇತರರು ಉಪಸ್ಥಿತರಿದ್ದರು.

Leave a Reply