ರಿಕ್ಷಾ ಚಾಲಕ ಮೊಹಮ್ಮದ್ ಶರೀಫ್ ಕೊಲೆ ಸಮಗ್ರ ತನಿಖೆಗೆ ಸಿಪಿಐಎಂ ಆಗ್ರಹ

1 year ago

ಮಂಗಳೂರು: ಮಂಗಳೂರಿನ ರಿಕ್ಷಾ ಚಾಲಕ ಮೊಹಮ್ಮದ್ ಶರೀಫ್ ಅವರ ರಿಕ್ಷಾವನ್ನು ಬಾಡಿಗೆಗೆ ಗೊತ್ತು ಪಡಿಸಿ ಮಂಜೇಶ್ವರ ತಾಲೂಕಿನ ಗಡಿಭಾಗವಾದ ಕುಂಜತುರಿನ ಅತ್ಯಂತ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಮಾರಕಾಯುಧಗಳಿಂದ ಹತ್ಯೆಗೈದು ಬಾವಿಗೆ ಎಸೆದಿರುವ ಘಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಇದರ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಇಡೀ ಪ್ರಕರಣ ಹಲವು ಸಂಶಯಗಳಿಗೆ ಎಡೆ ಮಾಡಿದ್ದು, ಬಹು ಆಯಾಮಗಳಿಂದ ಈ ಪ್ರಕರಣದ ರಹಸ್ಯವನ್ನು ಭೇದಿಸಬೇಕಾಗಿದೆ. ಕೊಲೆಗಡುಕರನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಗಾಗುವಂತೆ ಕ್ರಮವಹಿಸಬೇಕು, ಸಂತ್ರಸ್ತ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದೆ.

ಪಕ್ಷ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಅರ್ಪಿಸಿ ಶೀಘ್ರ ನಿಕ್ಷಪಕ್ಷಪಾತ ತನಿಖೆ ನಡೆಸಲು ಒತ್ತಾಯಿಸಲಿದೆ ಎಂದು ಮಂಗಳೂರು ನಗರ ದಕ್ಷಿಣ  ಕಾರ್ಯದರ್ಶಿ, ಯೋಗೀಶ್  ಜಪ್ಪಿನಮೊಗರು  ಮತ್ತು ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ. ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ನಡುವೆ ರಿಕ್ಷಾ ಚಾಲಕ ಶರೀಫ್ ಹಂತಕರನ್ನು ಬಂಧಿಸಲಾಗಿದೆ. ಕೊಲೆ ನಡೆಸಿರುವವವರು ಮಂಗಳೂರಿನವರು ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೊಲೆ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದ ಕೇರಳ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ಪ್ರಕರಣದ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಮಾಹಿತಿ ನೀಡಲಾಗಿತ್ತು. ಅವರೂ ಆಸಕ್ತಿ ವಹಿಸಿದ್ದರು. ಮಂಜೇಶ್ವರದ ಸಿಪಿಐಎಂ ನಾಯಕತ್ವವೂ ಪ್ರಕರಣ ಪತ್ತೆ ಹಚ್ಚುವ ಕುರಿತು ಪೊಲೀಸ್ ಇಲಾಖೆಯ  ಜೊತೆ ನಿರಂತರ ಸಂಪರ್ಕದಲ್ಲಿತ್ತು. ಅವರಿಗೂ ಅಭಿನಂದನೆಗಳು. ರಿಕ್ಷಾ ಚಾಲಕನ ಕುಟುಂಬಕ್ಕೆ ಕರ್ನಾಟಕ ಸರಕಾರ ಪರಿಹಾರ ನೀಡಿ ಕುಟುಂಬಕ್ಕೆ ನೆರವಾಗಲಿ ಎಂದಿದ್ದಾರೆ.

Leave a Reply